ಚಿಕ್ಕಮಗಳೂರು: ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರಿನಲ್ಲಿ ನಡೆದಿದೆ.
ಮೃತ ಮಹಿಳೆಯರನ್ನು ಹುಲ್ಲೆಮನೆ ಗ್ರಾಮದ ಶೋಭಾ (45) ಎಂದು ಗುರುತಿಸಲಾಗಿದೆ. ಶೋಭಾ ಭಾನುವಾರ ತನ್ನ ಪತಿ ಸತೀಶ್ಗೌಡ ಅವರೊಂದಿಗೆ ಅಡಕೆ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದರು. ಇವರ ಜೊತೆಗೆ ಗ್ರಾಮದ ವಿಜಯ ಎಂಬುವರು ಕೂಡ ಅಲ್ಲಿಯೇ ಹುಲ್ಲು ಕೊಯ್ಯುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಕಾಡಾನೆ ಪ್ರತ್ಯಕ್ಷವಾಗಿದೆ. ನಾಯಿ ಕಾಡಾನೆ ಕಂಡು ಕೂಗಿದ ನಂತರ ವಿಜಯ ಹಾಗೂ ಸತೀಶ್ಗೌಡ ಓಡಿ ತಪ್ಪಿಸಿಕೊಂಡಿದ್ದಾರೆ.
ಆದರೆ ಶೋಭಾ ರಸ್ತೆ ದಾಟುವ ಸಂದರ್ಭದಲ್ಲಿ ಬೆನ್ನಟ್ಟಿದ ಆನೆ ಸೊಂಡಿಲಿನಿಂದ ಎತ್ತಿ ಒಗೆದು ತುಳಿದಿದೆ. ತುಳಿದ ರಭಸಕ್ಕೆ ಅವರು ಮೃತಪಟ್ಟಿದ್ದಾರೆ. ನಂತರ ಕಾಡಾನೆ ಅಲ್ಲಿಂದ ಹೋಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಿಮ್ಮ ಕಾಮೆಂಟ್ ಬರೆಯಿರಿ