ಮೊರ್ಬಿ ಸೇತುವೆ ಕುಸಿತ ಭಾರೀ ದೊಡ್ಡ ದುರಂತ ಎಂದ ಸುಪ್ರೀಂ ಕೋರ್ಟ್‌: ನಿಯಮಿತ ವಿಚಾರಣೆ ನಡೆಸಲು ಗುಜರಾತ್ ಹೈಕೋರ್ಟ್‌ಗೆ ಸೂಚನೆ

ನವದೆಹಲಿ: ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿದು 135 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಇದನ್ನು ಭಾರೀ ದುರಂತ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಈಗಾಗಲೇ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಗುಜರಾತ್ ಹೈಕೋರ್ಟ್ ನಿಯಮಿತವಾಗಿ ವಿಚಾರಣೆ ನಡೆಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠವು ನಿರ್ದೇಶಿಸಿದೆ.
ಇದೊಂದು ದೊಡ್ಡ ದುರಂತವಾಗಿದ್ದು ಗುತ್ತಿಗೆ ನೀಡಿದವರ ಅರ್ಹತೆ, ತಪ್ಪಿಗೆ ಕಾರಣರಾದವರ ಉತ್ತರಾದಯಿತ್ವ ಪರೀಕ್ಷಿಸುವ ಸಲುವಾಗಿ ವಾರಕ್ಕೊಮ್ಮೆ ಮೇಲ್ವಿಚಾರಣೆ ಅಗತ್ಯವಿದೆ. ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಇಲ್ಲದಿದ್ದರೆ ನಾವು ನೋಟಿಸ್ ನೀಡಬೇಕಾಗುತ್ತಿತ್ತು” ಎಂದು ಮೌಖಿಕವಾಗಿ ಹೇಳಿದ ಪೀಠ ಕಡೆಗೆ ನಿಯಮಿತವಾಗಿ ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಸೂಚಿಸಿತು.
ಪ್ರಕರಣದ ಹಲವಾರು ಅಂಶಗಳಿಗೆ ನಿಯಮಿತ ಪ್ರಸ್ತಾಪಗಳು ಬೇಕಾಗುತ್ತವೆ. ಹೀಗಾಗಿ ಪ್ರಕರಣದ ಬೆಳವಣಿಗೆಗಳನ್ನು ಕಾಲದಿಂದ ಕಾಲಕ್ಕೆ ತಿಳಿಯಲು ಹೈಕೋರ್ಟ್ ಇದನ್ನು ನಿಗದಿತವಾಗಿ ವಿಚಾರಣೆ ನಡೆಸುವಂತೆ ಕೇಳುತ್ತಿದ್ದೇವೆ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
ಸೇತುವೆಗೆ ಸಂಬಂಧಿಸಿದ ಅಕ್ರಮಗಳ ತನಿಖೆ ನಡೆಸುವುದು, ನಗರಪಾಲಿಕೆಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುವುದು ಮತ್ತು ಸೇತುವೆಯ ನಿರ್ವಹಣೆಗೆ ವಹಿಸಿರುವ ಏಜೆನ್ಸಿಗೆ ಸಂಬಂಧಿಸಿದವರನ್ನು ಬಂಧಿಸುವುದು ಮುಂತಾದ ಘಟನೆಗೆ ಕಾರಣರಾದವರನ್ನು ಹೊಣೆ ಮಾಡುವ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕು ಎಂದು ಕೋರಿದ್ದ ಎರಡು ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಇದನ್ನು ಹೇಳಿತ್ತು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ ಶಂಕರ ನಾರಾಯಣನ್ ಸತ್ಯ ಹೊರತರಲು ಸ್ವತಂತ್ರ ತನಿಖೆ ನಡೆಸಬೇಕಿದೆ. ಸಂತ್ರಸ್ತರಿಗೆ ನೀಡಿರುವ ಪರಿಹಾರ ಸಮರ್ಪಕವಾಗಿಲ್ಲ. ಪರಿಹಾರ ನೀತಿಯಲ್ಲಿ ಬದಲಾವಣೆ ತರಬೇಕಿದೆ” ಎಂದರು.
ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ಗುಜರಾತ್‌ ಹೈಕೋರ್ಟ್‌ ಘಟನೆಯ ವಿಚಾರಣೆ ನಡೆಸುತ್ತಿರುವುದರಿಂದ ಸುಪ್ರೀಂ ಕೋರ್ಟ್‌ ಅರ್ಜಿಗಳ ವಿಚಾರಣೆ ನಡೆಸಲು ಬೇರೆ ಕಾರಣಗಳಿಲ್ಲ. ಅರ್ಜಿದಾರ ಇಲ್ಲಿ ವಾದಿಸಿರುವುದನ್ನು ಹೈಕೋರ್ಟ್‌ನಲ್ಲಿಯೂ ವಾದಿಸಬಹುದು ಎಂದರು. ಈ ಹಂತದಲ್ಲಿ ನ್ಯಾಯಾಲಯ ಹೈಕೋರ್ಟ್‌ನಲ್ಲಿ ವಾದ ಮಂಡಿಸಲು ಮತ್ತು ಪ್ರಕರಣದಲ್ಲಿ ಮಧ್ಯಪ್ರವೇಶೀಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ಕಲ್ಪಿಸಿತು.

ಪ್ರಮುಖ ಸುದ್ದಿ :-   ಪ್ರಮುಖ ಮಾವೋವಾದಿ ನಾಯಕ ಸೇರಿ 29 ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement