ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ: ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ ವಿದ್ಯಾರ್ಥಿನಿಯರು…!

ಮಂಡ್ಯ: ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಮುಖ್ಯ ಶಿಕ್ಷಕನೋರ್ವನಿಗೆ ವಿದ್ಯಾರ್ಥಿನಿಯರೆಲ್ಲ ಸೇರಿ ಧರ್ಮದೇಟು ನೀಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ವರದಿಯಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿರುವ ವಿದ್ಯಾರ್ಥಿನಿಯರ ನಿಲಯದಲ್ಲಿ ಮುಖ್ಯಶಿಕ್ಷಕನೋರ್ವ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಹೇಳಲಾಗಿದೆ. ಇದರಿಂದ ನೊಂದ ವಿದ್ಯಾರ್ಥಿನಿಯರೆಲ್ಲ ಸೇರಿ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪ್ರೌಢ ಶಾಲೆಯೊಂದರ ಮುಖ್ಯಶಿಕ್ಷಕ ಚಿನ್ಮಯಮೂರ್ತಿಗೆ ಅಲ್ಲಿದ್ದ ವಿದ್ಯಾರ್ಥಿನಿಯರ ವಸತಿ ನಿಲಯದ ಉಸ್ತುವಾರಿ ನೀಡಲಾಗಿತ್ತು. ನಿತ್ಯ ಸಂಜೆ ಸಮಯದಲ್ಲಿ ಹಾಸ್ಟೆಲ್‍ಗೆ ಬರುತ್ತಿದ್ದ ಆತ, ತನ್ನ ಕೊಠಡಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಅಶ್ಲೀಲ ವೀಡಿಯೋ ತೋರಿಸುವ ಜೊತೆಗೆ ಅಂಗಾಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ ಹಾಗೂ ಯಾರಿಗಾದರೂ ಹೇಳಿದರೆ ಟಿಸಿಯಲ್ಲಿ ನಡವಳಿಕೆ ಸರಿ ಇಲ್ಲವೆಂದು ಬರೆಯುವುದಾಗಿ ಹೆದರಿಸುತ್ತಿದ್ದ ಎಂದು ಹೇಳಲಾಗಿದೆ. ಆತನ ದೌರ್ಜನ್ಯದ ವಿರುದ್ಧ ವಿದ್ಯಾರ್ಥಿನಿಯರು ನಿನ್ನೆ ಬುಧವಾರ ರಾತ್ರಿ ಸಿಡಿದೆದ್ದಿದ್ದು ಆತನಿಗೆ ಧರ್ಮದೇಟು ನೀಡಿದ್ದಾರೆ. ನಿನ್ನೆ ರಾತ್ರಿ ವಿದ್ಯಾರ್ಥಿನಿ ಒಬ್ಬಾಕೆಯನ್ನು ಕೊಠಡಿಗೆ ಕರೆಸಿ ಅಸಭ್ಯವಾಗಿ ವರ್ತಿಸಿದಾಗ ಭಯದಿಂದ ವಿದ್ಯಾರ್ಥಿನಿ ಕೂಗಿಕೊಂಡಿದ್ದಾಳೆ, ಆಗ ಉಳಿದ ವಿದ್ಯಾರ್ಥಿನಿಯರು ಬಂದಿದ್ದು, ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಧರ್ಮದೇಟು ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯ ವಿಚಾರ ತಿಳಿದು ಗ್ರಾಮಸ್ಥರು ಹಾಸ್ಟೆಲ್ ಬಳಿಗೆ ಬಂದು ಆಕ್ರೋಶ ಹೊರಹಾಕಿದರು. ಬಳಿಕ ಶಿಕ್ಷಕನನ್ನು ಕೆಆರ್‌ಎಸ್‌ ಠಾಣೆ ಪೊಲೀಸರು ವಶಕ್ಕೆ ಪಡೆದರು. ನಿಲಯ ಪಾಲಕಿ ನೀಡಿದ ದೂರು ಆಧರಿಸಿ ಎಫ್‍ಐಆರ್ ದಾಖಲಾಗಿದೆ.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement