ಕರ್ನಾಟಕದ 865 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರ್ಪಡೆ ವಿಚಾರ: ಕೇಂದ್ರ ಸರ್ಕಾರ ಒತ್ತಾಯಿಸುವ ನಿರ್ಣಯಕ್ಕೆ ಮಹಾರಾಷ್ಟ್ರದ ವಿಧಾನಸಭೆ ಅಂಗೀಕಾರ

ನಾಗ್ಪುರ : ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ, ಭಾಲ್ಕಿ ಸಹಿತ ಕರ್ನಾಟಕದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಇಂದು ಮಂಗಳವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕರಿಸಲಾಯಿತು.
ಅಧಿವೇಶನದಲ್ಲಿ ಗಡಿವಿವಾದ ಕುರಿತು ಚರ್ಚೆ ನಡೆಯಿತು. ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಕರ್ನಾಟಕದ ಗಡಿಭಾಗದಲ್ಲಿ ನಡೆದ
ಚಳವಳಿಯಲ್ಲಿ ಮಡಿದ ಮರಾಠಿ ಭಾಷಿಕರನ್ನು ಹುತಾತ್ಮರೆಂದು ಪರಿಗಣಿಸಿ ಅವರಿಗೆ ಸ್ವಾತಂತ್ರ್ಯ ಯೋಧರ ಕುಟುಂಬಳಿಗೆ ನೀಡುವ ಮಾಸಿಕ 20 ಸಾವಿರ ರೂ.ಪಿಂಚಣಿ ನೀಡಲಾಗುವುದು ಎಂದರು.
ಕರ್ನಾಟಕಕ್ಕೆ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ ಮಹಾರಾಷ್ಟ್ರದ ಜತ್ತ ತಾಲೂಕಿನ ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಗೆ ಎರಡು ಸಾವಿರ ಕೋಟಿ ರೂ.ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕದ 865 ಹಳ್ಳಿ ಪಟ್ಟಣಗಳಲ್ಲಿ ವಾಸಿಸುವ ಮರಾಠಿಗರಿಗೆ ಮಹಾರಾಷ್ಟ್ರದಲ್ಲಿ ಎಲ್ಲ ರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು
ಒದಗಿಸಲಾಗುವುದು. ಅಲ್ಲದೆ, ಬೆಳಗಾವಿ ಸಹಿತ ಎಲ್ಲ ಗ್ರಾಮ ಪಟ್ಟಣಗಳಲ್ಲಿ ನೋಂದಾಯಿತ ಸಂಘ ಸಂಸ್ಥೆಗಳಿಗೆ
ಆರ್ಥಿಕ ನೆರವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿರುವ ಗಡಿವಿವಾದದ ಮೊಕದ್ದಮೆಯಲ್ಲಿ ವಾದಿಸುವ ಸಲುವಾಗಿ ಹಿರಿಯ ಸಂವಿಧಾನ ತಜ್ಞರನ್ನು ನೇಮಿಸಲಾಗಿದೆ.ಹಿರಿಯ ನ್ಯಾಯವಾದಿ ಹರೀಶ ಸಾಳ್ವೆ ಅವರನ್ನೂ ಸಹ ಸಂಪರ್ಕಿಸಲಾಗಿದ್ದು ಅವರೂ ವಾದ ಮಂಡನೆಗೆ ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದರು.
ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮಾತಾನಾಡಿ, ಒಂದು ಹಂತದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಗಡಿವಿವಾದ ಪ್ರಕರಣ ಬಾಕಿ ಇದ್ದು, ನಾವು ಅಂಗೀಕರಿಸುವ ನಿರ್ಣಯವು ನ್ಯಾಯಾಂಗ ನಿಂದನೆ ಆಗಬಹುದೆ ಎಂಬುದನ್ನೂ ಯೋಚಿಸಬೇಕು ಎಂದರು.
ಡಿಸೆಂಬರ್ 14 ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ಸಭೆ ನಡೆಸಿದ ನಂತರವೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿ ವಿವಾದವನ್ನು ಮತ್ತೆ ಮತ್ತೆ
ಕೆದಕುತ್ತಿದ್ದಾರೆ ಎಂದು ಸದನದಲ್ಲಿ ಮಾತನಾಡಿದ ಮುಖಂಡರು ಆರೋಪಿಸಿದರು.
ಸಭಾಧ್ಯಕ್ಷರು ನಿರ್ಣಯವನ್ನು ಮತಕ್ಕೆ ಹಾಕಿದಾಗ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಉಚ್ಚಾಟನೆ

1.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement