ಕಳಸಾ-ಬಂಡೂರಿ ಯೋಜನೆ ಡಿಪಿಆರ್ ಕುರಿತ ಆದೇಶದಲ್ಲಿ ದಿನಾಂಕ ಇಲ್ಲ, ಇದನ್ನು ಸರ್ಕಾರಿ ದಾಖಲೆ ಎನ್ನಲು ಸಾಧ್ಯವೇ : ಎಚ್ ಕೆ ಪಾಟೀಲ

ಹುಬ್ಬಳ್ಳಿ: ರಾಜ್ಯ ಸರ್ಕಾರ ಸಲ್ಲಿಸಿದ್ದ ಕಳಸಾ-ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಿಡುಗಡೆ ಮಾಡಿದ ಆದೇಶದಲ್ಲಿ ದಿನಾಂಕವೇ ಇಲ್ಲ. ದಿನಾಂಕ ಇಲ್ಲದಿದ್ದರೆ ಸರ್ಕಾರಿ ದಾಖಲೆ ಎನ್ನಲು ಸಾಧ್ಯವೇ. ಇದು ನಿರ್ಗತಿಕ ಕೂಸಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಶಾಸಕ ಎಚ್‌.ಕೆ.ಪಾಟೀಲ ಪ್ರಶ್ನಿಸಿದ್ದಾರೆ.
ಇಂದು, ಶುಕ್ರವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಹೊರಡಿಸುವ ಯಾವುದೇ ಆದೇಶದ ಪ್ರತಿಗೆ ದಿನಾಂಕ ಇದ್ದೇ ಇರುತ್ತದೆ. ಆದರೆ ಈ ಆದೇಶದಲ್ಲಿ ಯಾವುದೇ ದಿನಾಂಕ ಇಲ್ಲ. ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸಚಿವರು ದಿನಾಂಕವೇ ಇಲ್ಲದ ಆದೇಶದ ಪ್ರತಿಯನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಅದನ್ನೇ ಸದನದಲ್ಲಿ ಪ್ರದರ್ಶಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಜನರನ್ನು ದಾರಿ ತಪ್ಪಿಸಲು ಬಿಜೆಪಿ ಇಂತಹ ತಂತ್ರಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಕೆಲಸ ಆರಂಭ ಮಾಡಬೇಕಾದ ವೇಳೆ ಡಿಪಿಆರ್ ಅನುಮತಿ ಬಗ್ಗೆ ಮಾತನಾಡುತ್ತಿರುವುದು ಏಕೆ..? ಬಿಜೆಪಿಯವರಿಗೆ ಯೋಜನೆ ಬಗ್ಗೆ ನೈಜ ಕಾಳಜಿ ಇದ್ದಿದ್ದರೆ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಿತ್ತು. ಅದನ್ನು ಯಾಕೆ ಪಡೆದಿಲ್ಲ ಎಂದು ಪ್ರಶ್ನಿಸಿದ ಅವರು, ಅದನ್ನು ಪಡೆದಿದ್ದರೆ ಯೋಜನೆ ಒಂದು ಹಂತ ಮುಂದೆ ಹೋಗಿದೆ ಎಂದು ಹೇಳಬಹುದಿತ್ತು. ಆದರೆ ಅದೆಲ್ಲ ಬಿಟ್ಟು ಪರಿಷ್ಕೃತ ಡಿಪಿಆರ್‌ ಸಲ್ಲಿಸಿ ಅದಕ್ಕೆ ಅನುಮತಿ ಪಡೆದು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
2002ರಲ್ಲಿ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಸ್ಥಳದಲ್ಲಿ ಈಗಾಗಲೇ ಕಾಮಗಾರಿ ಸಹ ಆರಂಭವಾಗಿದೆ. ಈಗ ಡಿಪಿಆರ್ ಅನುಮತಿ ನೀಡಲಾಗಿದೆ ಎಂದು ಹೇಳಿದ್ದು ನೋಡಿದರೆ ಈ ಮೊದಲು ಡಿಪಿಆರ್‌ ಇಲ್ಲದೆಯೇ ಕಾಮಗಾರಿ ನಡೆದಿದೆಯೇ..? ಯೋಜನೆ ಕೆಲಸದ ಹಂತದಲ್ಲಿರುವಾಗ ಡಿಪಿಆರ್ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಪರಿಷಕ್ ಎಂದು ಸರ್ಕಾರ ವಿರುದ್ಧ ಎಚ್. ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಜನವರಿ 2ರಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಮಹದಾಯಿ ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿಯವರು ಇಂಥ ನಾಟಕ ಮಾಡುತ್ತಿದ್ದಾರೆ. ಯೋಜನೆ ಅನುಮತಿ ಪಡೆದ ನಂತರವೂ ಡಿಪಿಆರ್‌ ಅನುಮತಿ ಪಡೆದ ಬಗ್ಗೆ ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಹಾಗೂ ಜನರನ್ನು ದಿಕ್ಕುತಪ್ಪಿಸುವ ತಂತ್ರವಾಗಿದೆ ಎಂದು ಎಚ್‌.ಕೆ.ಪಾಟೀಲ ವಾಗ್ದಾಳಿ ನಡೆಸಿದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

ನಮ್ಮ ಅಧಿಕಾರಾವಧಿಯಲ್ಲಿ ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಕುಡಿಯುವ ನೀರಿಗಾಗಿ ಬಳಕೆ ಎನ್ನುವ ಅನುಮತಿಯೂ ದೊರೆತಿತ್ತು. ಗೋವಾ ಮುಖ್ಯಮಂತ್ರಿ ತಪ್ಪು ಮಾಹಿತಿಯಿಂದ ನಮಗೆ ದೊರೆತಿದ್ದ ಕ್ಲಿಯರೆನ್ಸ್ ಸ್ಥಗಿತಗೊಂಡಿತ್ತು. ಗೋವಾದವರಿಂದ ಸಭೆಗಳ ಮುಂದೂಡಿಕೆ ಕಾರ್ಯ ನಡೆದು ನ್ಯಾಯಾಲಯದ ಮೆಟ್ಟಿಲೇರಿ ನಂತರ ಟ್ರಿಬ್ಯುನಲ್ ಸ್ಥಾಪನೆ ಆಯ್ತು, ಅಲ್ಲಿಂದ ಇಲ್ಲಿಯವರೆಗೂ ಏನೂ ಮಾಡಿರದ ಬಿಜೆಪಿ ನವಂಬರ್‍ನಲ್ಲಿ ಡಿಪಿಆರ್ ಸಿದ್ಧ ಮಾಡಿಕೊಂಡಿತ್ತು ಎಂದು ಹೇಳಿದರು.

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement