26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ : ರನ್‌ವೇ ಸಿದ್ಧವಾಗಿದೆ, ಕೌಶಲ್ಯ ಕಲಿತು ಟೇಕಾಫ್‌ ಆಗಿ ; ಯುವಕರಿಗೆ ಕರೆ

* ಡಿಜಿಟಲ್ ಇಂಡಿಯಾ ಯುವಜನತೆಗೆ ಅವಕಾಶಗಳ ಆಗರ*
* ಯುವಶಕ್ತಿಯೇ ದೇಶದ ಶಕ್ತಿ
* ಏಕ ಭಾರತ ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕರೆ
* ಭಾರತವನ್ನು 3 ನೇ‌ ಅತೀದೊಡ್ಡ ಆರ್ಥಿಕ ಶಕ್ತಿಯಾಗಿಸುವ ಸಂಕಲ್ಪ
ಹುಬ್ಬಳ್ಳಿ : ಡಿಜಿಟಲ್ ಇಂಡಿಯಾದ ಪ್ರಸ್ತುತ ಕಾಲಘಟ್ಟದಲ್ಲಿ ಕೌಶಲ್ಯಭರಿತ ಯುವಜನತೆಗೆ ಅವಕಾಶಗಳ ಬಾಗಿಲು ತೆರೆದಿದೆ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ”- ಎಂಬ ಸ್ವಾಮಿ ವಿವೇಕಾನಂದರ ಮಂತ್ರವನ್ನು ಮನದಲ್ಲಿಟ್ಟುಕೊಂಡು ಅಭಿವೃದ್ಧಿಯ ದಿಗಂತದ ಕಡೆಗೆ ದೇಶವನ್ನು ಕೊಂಡೊಯ್ಯಲು ಯುವ ಸಮುದಾಯ ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
“ವಿಕಸಿತ ಯುವ-ವಿಕಸಿತ ಭಾರತ” ಎಂಬ ಘೋಷವಾಕ್ಯದೊಂದಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ಜನವರಿ 12 ರಿಂದ 16 ರವರೆಗೆ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಗುರುವಾರ ಇಂದು, ಗುರುವಾರ (ಜ.12) ಚಾಲನೆ ನೀಡಿ ಅವರು ಮಾತನಾಡಿದರು.
ಮೂರುಸಾವಿರ ಮಠ…ಸಿದ್ಧಾರೂಢ ಮಠ ಇಂತಹ ಅನೇಕ ಮಠಗಳ ಕ್ಷೇತ್ರಗಳಿಗೆ ನನ್ನ ನಮಸ್ಕಾರಗಳು..
ಚೆನ್ನಮ್ಮನ ನಾಡು, ರಾಯಣ್ಙನ ಬೀಡು ಪುಣ್ಯದ ನಾಡಿಗೆ ನನ್ನ ನಮಸ್ಕಾರಗಳು…. ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ,
ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು, ಸಂಗೀತ ಲೋಕದ ದಿಗ್ಗಜರನ್ನು ಸ್ಮರಿಸಿದರು.
“ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ”- ಎಂಬ ಸ್ವಾಮಿ ವಿವೇಕಾನಂದರ ಮಂತ್ರವನ್ನು ಕನ್ನಡದಲ್ಲಿ ಉಚ್ಛರಿಸಿದ ಅವರು, ಇಂತಹ ಸಂದರ್ಭದಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಅರಿತುಕೊಂಡ ದೇಶವನ್ನು ಮುನ್ನಡೆಸಬೇಕಿದೆ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಸ್ವಾಮಿ ವಿವೇಕಾನಂದರು ಕರ್ನಾಟಕದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಬೆಂಗಳೂರು, ಹುಬ್ಬಳ್ಳಿ-ಧಾರವಾಡದಲ್ಲಿ ಸಂಚರಿಸಿದ್ದರು. ಮೈಸೂರು ಮಹಾರಾಜರು ವಿವೇಕಾನಂದ ಅವರು ಚಿಕಾಗೋ ಸಮ್ಮೇಳನಕ್ಕೆ ಹೋಗಲು ನೆರವು ನೀಡಿದ್ದರು ಎಂದು ನೆನಪಿಸಿಕೊಂಡರು.

ಏಕ ಭಾರತ ಶ್ರೇಷ್ಠ ಭಾರತ ನಿರ್ಮಾಣಕ್ಕೆ ದೇಶವು ಹೊಸ ಸಂಕಲ್ಪದಿಂದ ಮುನ್ನಡೆದಿದೆ. ಯುವ ಶಕ್ತಿ ಸದೃಢವಾಗಿದ್ದರೆ ಸದೃಢ ದೇಶ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು. ನಮ್ಮ ಚಿಂತನೆ ಹಾಗೂ ಪ್ರಯತ್ನಗಳು ಸಕಾರಾತ್ಮಕವಾಗಿ ಇರಬೇಕು ಎಂದು ಅವರು ಹೇಳುತ್ತಿದ್ದರು. ಈಗ ಜಗತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಭಾರತದ ಕಡೆ ನೋಡುತ್ತಿದೆ. ಇದರ ಹಿಂದೆ ಯುವಶಕ್ತಿಯ ಶ್ರಮವಿದೆ ಎಂದರು.
ವಿಶ್ವೇಶ್ವರಯ್ಯ ಅವರು ತಮ್ಮ ಪ್ರತಿಭೆಯ ಮೂಲಕ ಯುವ ಸಮುದಾಯವು ಹೇಗೆ ಎಲ್ಲೆಡೆ ಪಸರಿದೆ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಗಣಿತದಿಂದ ವಿಜ್ಞಾನದ ಯಾವುದೇ ಸ್ಪರ್ಧೆ ನಡೆದರೂ ಭಾರತೀಯರ ಸಾಧನೆ ಅದ್ವಿತೀಯ. ಇದು ಭಾರತದ ಯುವಶಕ್ತಿಯ ಸಂಕೇತವಾಗಿದೆ. ಯುವಶಕ್ತಿ ದೇಶವನ್ನು ನಡೆಸುವ ಶಕ್ತಿಯಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತಕ್ಕೆ ಯುವಶಕ್ತಿ ದಿಕ್ಸೂಚಿಯಾಗಲಿದೆ ಎಂದರು.
ಭಾರತವು ಜಗತ್ತಿನ 5ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಇದನ್ನು ಅಗ್ರ ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ನಮ್ಮದಾಗಿದೆ. ಕೃಷಿ ಕ್ಷೇತ್ರದಲ್ಲಿ ಭಾರತವು ಜಗತ್ತಿನ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯಿಂದ ಯುವ ಜನತೆಗೆ ಇನ್ನಷ್ಟು ಅವಕಾಶಗಳು ಲಭಿಸಲಿವೆ ಎಂದು. ದೇಶದ ಆರ್ಥಿಕತೆ ಸುಧಾರಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಇದೀಗ ರನ್ ವೇ ಸಿದ್ಧವಾಗಿದೆ. ಯುವ ಸಮಯದಾಯ ಇದನ್ನು ಬಳಸಿಕೊಂಡು ಅಭಿವೃದ್ಧಿಯ ದಿಗಂತದ ಕಡೆಗೆ ಹಾರಲು ಮುಂದಾಗಬೇಕಿದೆ. ಪ್ರಸ್ತುತ ದಿನಗಳಲ್ಲಿ ಯುವಶಕ್ತಿಯ ಮುಂದೆ ಹತ್ತಾರು ಅವಕಾಶಗಳಿವೆ. ಆಯ್ಕೆ ಅವರ ಮುಂದಿದೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಯುವಕರು ವೈಯಕ್ತಿಕ ಸಾಧನೆಯ ಜೊತೆಗೆ ಸಾಂಸ್ಥಿಕ ಹಾಗೂ ಅನ್ವೇಷಣೆ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಪ್ರಮುಖ ಸುದ್ದಿ :-   ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಜ್ಜಿ ಮೊಮ್ಮಗಳಿಗೆ ಉಚಿತ ಟಿಕೆಟ್ : ಆದ್ರೆ ನಾಲ್ಕು ಪಕ್ಷಿಗಳಿಗೆ 444 ರೂ. ಟಿಕೆಟ್...!

ಸ್ತ್ರೀ ಶಕ್ತಿಯು ರಾಷ್ಟ್ರಶಕ್ತಿಯನ್ನು ಮುನ್ನಡೆಸುವಲ್ಲಿ ಸಫಲವಾಗಿದೆ. ಫೈಟರ್ ಜೆಟ್ ಹಾರಿಸುತ್ತಿರುವ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ.ಯುವಜನತೆ ವರ್ತಮಾನದಲ್ಲಿದ್ದಕೊಂಡು ಭವಿಷ್ಯದ ಕಡೆ ಸಕಾರಾತ್ಮಕವಾಗಿ ಯೋಚಿಸುವ ಮೂಲಕ ಹೊಸ ಹೊಸ ಆವಿಷ್ಕಾರಗಳತ್ತ ಚಿತ್ತವನ್ನು ಹರಿಸಬೇಕು.
ಹತ್ತು ವರ್ಷಗಳ ಇಲ್ಲದ ಎಷ್ಟೋ ವಿಷಯಗಳಿಂದ ನಾವು ಈಗ ಚಕಿತರಾಗಿದ್ದೇವೆ ಈಗ ಸೈಬರ್ ಸೆಕ್ಯುರಿಟಿ, ಡೇಟಾ‌ ಸೈನ್ಸ್, ದೇಶದ ಸುರಕ್ಷತೆ ಸೇರಿ ಎಲ್ಲದರ ಸ್ವರೂಪ ಬದಲಾಗಿದೆ. ಯುವಸಮುದಾಯವು ತಂತ್ರಜ್ಞಾನದ ಈ ಬದಲಾವಣೆಯಿಂದ ಪಾಠ ಕಲಿತು ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ, ಕೋವಿಡ್ ಲಸಿಕೆ ಹೀಗೆ ಪ್ರತಿಯೊಂದು ಮಜಲುಗಳಲ್ಲಿ ಕೆಲವರು ಅಪಹಾಸ್ಯ ಮಾಡಿದ್ದರು. ಆದರೆ ಭಾರತದ ಈ ಸಾಧನೆಯ ಬಗ್ಗೆ ಜಗತ್ತಿನಲ್ಲಿ ಈಗ ಚರ್ಚೆ ನಡೆದಿದೆ.

ಯುವಶಕ್ತಿಯನ್ನು ಕಟ್ಟಿಕೊಂಡು ದೇಶದಲ್ಲಿ ವಿಭಿನ್ನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ದೇಶದ ಬೇರೆ‌ ಬೇರೆ ಭೌಗೋಳಿಕ ಪ್ರದೇಶಗಳ ಯುವಕರ ತಂಡಗಳು ಬಂದಿವೆ. ಇಲ್ಲಿನ ಸ್ಪರ್ಧೆಯಲ್ಲಿ ಯಾರೇ ಗೆದ್ದರೂ ಅಂತಿಮವಾಗಿ ಭಾರತವೇ ಗೆಲ್ಲುತ್ತದೆ.ಆದ್ದರಿಂದ ಯುವಜನೋತ್ಸವದಲ್ಲಿ ಭಾಗವಹಿಸುವ ತಂಡಗಳು ವಿಕಸಿತ ಭಾರತ ಸಮರ್ಥ ಭಾರತವನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಅನುರಾಗ ಠಾಕೂರ್‌, ನಿಸಿತ್ ಪ್ರಮಾಣಿಕ್, ಕರ್ನಾಟಕದ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ, ಶಂಕರ ಪಾಟೀಲ ಮುನೇನಕೊಪ್ಪ, ಹಾಲಪ್ಪ ಆಚಾರ್, ಸಿ.ಸಿ.ಪಾಟೀಲ, ಶಾಸಕರಾದ ಜಗದೀಶ ಶೆಟ್ಟರ್, ಅಮೃತ ದೇಸಾಯಿ, ಅರವಿಂದ ಬೆಲ್ಲದ, ವಿಧಾನಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ್ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರ ಈರೇಶ್ ಅಂಚಟಗೇರಿ ಮತ್ತಿತರರು ವೇದಿಕೆಯಲ್ಲಿದ್ದರು.

ಪ್ರಮುಖ ಸುದ್ದಿ :-   ಬಿಜೆಪಿ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟ : ಚಿತ್ರದುರ್ಗದಲ್ಲಿ ಹಾಲಿ ಸಂಸದರಿಗೆ ಕೊಕ್, ಯಡಿಯೂರಪ್ಪ ಆಪ್ತನಿಗೆ ಟಿಕೆಟ್‌

*ಏಲಕ್ಕಿ ಹಾರ, ವಿವೇಕಾನಂದರ ವಿಗ್ರಹ, ರಾಷ್ಟ್ರಧ್ವಜ ಚೌಕಟ್ಟಿನ ಸ್ಮರಣಿಕೆ*
ಸಾಂಪ್ರದಾಯಿಕ ಶಾಲು ಹೊದೆಸಿ, ಹಾವೇರಿಯ ಏಲಕ್ಕಿ ಹಾರ, ಮುತ್ತಿನಿಂದ ಅಲಂಕರಿಸಿದ ಪೇಟ ತೊಡಿಸಿ, ತೇಗದ ಮರದಲ್ಲಿ ತಯಾರಿಸಿದ ಸ್ವಾಮಿ ವಿವೇಕಾನಂದರ ವಿಗ್ರಹ, ಗರಗ-ಬೆಂಗೇರಿಯಲ್ಲಿ ಸಿದ್ಧವಾದ ರಾಷ್ಟ್ರಧ್ವಜವನ್ನು ಅಳವಡಿಸಿದ ಚೌಕಟ್ಟಿನ ಸ್ಮರಣಿಕೆ ನೀಡಿ ಪ್ರಧಾನಿ ಮೋದಿ ಅವರನ್ನು ಗೌರವಿಸಲಾಯಿತು‌.
*ಚಿತ್ತಾಕರ್ಷಕ ಪಥಸಂಚಲನ*
ದೇಶದ ವೈವಿಧ್ಯಮಯ ಕಲೆ,ಪೋಷಾಕು,ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಚಿತ್ತಾಕರ್ಷಕ ಪಥಸಂಚಲನವು ವಿವಿಧ ರಾಜ್ಯಗಳ ತಂಡಗಳಿಂದ ಜರುಗಿತು.ರಾಷ್ಟ್ರೀಯ ಯೋಗಾಸನ ಮತ್ತು ಕ್ರೀಡಾ ಫೆಡರೇಷನ್ನಿನ ವಿದ್ಯಾರ್ಥಿಗಳಿಂದ ಕಲಾತ್ಮಕ ಯೋಗಾಸನ ಮತ್ತು ಮಲ್ಲಕಂಬ ಸಾಹಸಗಳ ಪ್ರದರ್ಶನ ಜರುಗಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement