ಯಲ್ಲಾಪುರ: ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (S- VYASA ) ತನ್ನ ೨೦ ನೇ ಘಟಿಕೋತ್ಸವದಲ್ಲಿ ನಿವೃತ್ತ ಕುಲಪತಿ, ವಿದ್ವಾಂಸ ಡಾ.ರಾಮಚಂದ್ರ ಭಟ್ಟ ಕೋಟೆಮನೆ ಅವರಿಗೆ ಗೌರವ ಡಾಕ್ಟರೇಟ್ ( ಡಿ,ಲಿಟ್) ಪುರಸ್ಕಾರ ನೀಡಿ ಗೌರವಿಸಿದೆ.
ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಅವರು ಗುರುವಾರ ಬೆಂಗಳೂರಿನ ಪ್ರಶಾಂತಿ ಕುಠಿರದ ಸಂಸ್ಕೃತಿ ಭವನದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಅನ್ನು ಪ್ರದಾನ ಮಾಡಿದರು.
ಛತ್ತೀಸಗಡದ ಅಮೇಥಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸೆಲ್ವಮೂರ್ತಿ, ಎಸ್-ವ್ಯಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಬಿ.ಆರ್.ರಾಮಕೃಷ್ಣ, ರಜಿಸ್ಟ್ರಾರ್ ಪ್ರೊ.ಎಸ್.ಶಿವಶಂಕರ ಸಾಯಿ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದ ಜಯಂತಿಯ ದಿನದಂದೇ ಈ ಗೌರವ ದೊರಕಿರುವುದು ವಿಶೇಷವಾಗಿದೆ. ಈ ಹಿಂದೆ ರಾಮಚಂದ್ರ ಭಟ್ಟ ರವರಿಗೆ ತುಮಕೂರು ವಿ.ವಿಶ್ವವಿದ್ಯಾನಿಲಯ ಡಾಕ್ಟರೇಟ್ ನೀಡಿ ಗೌರವಿಸಿತ್ತು ಎಂಬುದು ಉಲ್ಲೇಖನೀಯ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವರಾದ ರಾಮಚಂದ್ರ ಭಟ್ಟರು ರಾಷ್ಟ್ರ ಗುರುಕುಲ ಪ್ರಕಲ್ಪದ ಪ್ರಮುಖರು.ಗುಜರಾತಿನ ಪೋರ್ ಬಂದರನ ಸಾಂದೀಪನೀ ಸಂಸ್ಥೆ ಇವರಿಗೆ ಇತ್ತೀಚೆಗಷ್ಟೇ ಬ್ರಹ್ಮರ್ಷಿ ಪುರಸ್ಕಾರ ನೀಡಿ ಗೌರವಿಸಿತ್ತು. ಗುಜರಾತ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರರಾಗಿ, ಚನ್ನೇನಹಳ್ಳಿ ಜನಸೇವಾ ವಿಶ್ವಸ್ಥ ಮಂಡಳಿ, ವೇದ ವಿಜ್ಞಾನ ಗುರುಕುಲದ ಪ್ರಾಚಾರ್ಯರಾಗಿ, ವೇದ ವಿಜ್ಞಾನ ಶೋಧ ಸಂಸ್ಥಾನದ ನಿರ್ದೇಶಕರಾಗಿ ರಾಮಚಂದ್ರ ಭಟ್ಟ ಕೋಟೆಮನೆ ಅವರು ಕಾರ್ಯನಿರ್ವಹಿಸಿದ್ದಾರೆ. ಮಧ್ಯಪ್ರದೇಶ ಸರ್ಕಾರ ಇವರಿಗೆ ಭವಭೂತಿ ಪ್ರಶಸ್ತಿ ನೀಡಿ ಗೌರವಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ