ನವದೆಹಲಿ: ಟಿವಿ ವಾಹಿನಿಗಳು ನಿರ್ದಿಷ್ಟ ಕಾರ್ಯಸೂಚಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು, ಸುದ್ದಿಯನ್ನು ರೋಚಕಗೊಳಿಸುವ ಸ್ಪರ್ಧೆಗೆ ಇಳಿದಿವೆ. ದೇಶದಲ್ಲಿ ಒಡಕು ಉಂಟು ಮಾಡುತ್ತಿವೆ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ದ್ವೇಷ ಭಾಷಣ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವಂತೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ. ಎಂ. ಜೋಸೆಫ್ ಮತ್ತು ಬಿ. ವಿ. ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.
ಇಂಥ ದ್ವೇಷ ಭಾಷಣ ಕಾರ್ಯಕ್ರಮಗಳ ಪ್ರಸಾರವನ್ನು ಹೇಗೆ ನಿಯಂತ್ರಿಸುತ್ತೀರಿ ಎಂದು ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ (ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಸ್ ಅಥಾರಿಟಿ) ಮತ್ತು ಕೇಂದ್ರ ಸರ್ಕಾರವನ್ನು ಪೀಠವು ಪ್ರಶ್ನಿಸಿತು.
“ಚಾನೆಲ್ಗಳು ಪ್ರತಿಸ್ಪರ್ಧೆಗೆ ಇಳಿದಿವೆ. ಅವು ಎಲ್ಲವನ್ನೂ ಈಗ ರೋಚಕಗೊಳಿಸುತ್ತಿವೆ. ಇದನ್ನು ಹೇಗೆ ನಿಯಂತ್ರಿಸುತ್ತೀರಿ? ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ. ಸ್ವಾತಂತ್ರ್ಯದ ಸಮಸ್ಯೆ ಏನೆಂದರೆ ಅದು ವೀಕ್ಷಕರಿಗೆ ಸಂಬಂಧಿಸಿರುವುದು. ಜನರಿಗೆ ವಾಹಿನಿಗಳ ಕಾರ್ಯಸೂಚಿ ಅರಿವಾಗುತ್ತೆಯೇ ಎಂಬುದು ಪ್ರಶ್ನೆ. ಇಂಥ ಚಾನೆಲ್ಗಳು ಸಮಾಜದಲ್ಲಿ ಬಿರುಕು ಉಂಟು ಮಾಡುತ್ತಿವೆ. ನೀವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡುವಾಗ ಅದಕ್ಕೆ ನೀವು ಅರ್ಹರು ಎಂಬಂತೆ ನಡೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಕೆ. ಎಂ. ಜೋಸೆಫ್ ಹೇಳಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ ಅವರು, “ದ್ವೇಷ ಭಾಷಣ ನಿಯಂತ್ರಿಸಲು ಕೇಂದ್ರ ಸರ್ಕಾರವು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಗೆ (ಸಿಆರ್ಪಿಸಿ) ಸಮಗ್ರ ತಿದ್ದುಪಡಿಗಳನ್ನು ತರುವ ಯೋಜನೆ ಹೊಂದಿದೆ. ಸಿಆರ್ಪಿಸಿ ತಿದ್ದುಪಡಿ ತರುವ ಚಿಂತನೆಯಲ್ಲಿ ನಾವಿದ್ದೇವೆ. ಇದು ಒಕ್ಕೂಟ ಸರ್ಕಾರದ ನಿಲುವಾಗಿದೆ” ಎಂದು ಪೀಠಕ್ಕೆ ಹೇಳಿದರು.
ಟಿವಿ ಕಾರ್ಯಕ್ರಮಗಳ ಭಾಗವಾದ ಸುದ್ದಿ ನಿರೂಪಕರೇ ಸಮಸ್ಯೆಯಾದರೆ ಏನು ಮಾಡುವುದು. ಏಕಮುಖ ಕಾರ್ಯಕ್ರಮ ಪ್ರಸಾರ ಮಾಡಬಾರದು ಎಂದು ಪೀಠವು ಒತ್ತಿ ಹೇಳಿತು.
ಬಹುತೇಕ ಈ ಪ್ರಕರಣಗಳು ಕೋಮು ಮತ್ತು ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿವೆ. ಮಾಧ್ಯಮದಲ್ಲಿ ಕೆಲಸ ಮಾಡುವ ಪತ್ರಕರ್ತರು ಹೇಗೆ ವರ್ತಿಸಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ಪೀಠ ಹೇಳಿತು.
ಮುಂದಿನ ವಿಚಾರಣೆಯ ವೇಳೆಗೆ ಅಮಿಸ್ ಕ್ಯೂರಿ ಅವರು ಮಾರ್ಗಸೂಚಿಗಳ ಕರಡನ್ನು ಸಲ್ಲಿಸಬೇಕು ಎಂದು ಆದೇಶಿಸಿತು.
ನಿಮ್ಮ ಕಾಮೆಂಟ್ ಬರೆಯಿರಿ