ನವದೆಹಲಿ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ಲೋಕಸಭೆಯ ಸೆಕ್ರೆಟರಿಯೇಟ್ ಶುಕ್ರವಾರ ತಡರಾತ್ರಿ ತಿಳಿಸಿದೆ.
2009ರಲ್ಲಿ ದಾಖಲಾದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ, ಇತರ ಮೂವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ನಂತರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ಲೋಕಸಭೆಯ ಸೆಕ್ರೆಟರಿಯೇಟ್ ತಿಳಿಸಿದೆ.
ಬುಧವಾರ (ಜನವರಿ 11), ಕವರಟ್ಟಿಯ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಎನ್ಸಿಪಿ ಸಂಸದ ಮತ್ತು ಇತರ ಆರೋಪಿಗಳ ಜಾಮೀನನ್ನು ಅಮಾನತುಗೊಳಿಸಿತು, ನಂತರ ಅವರನ್ನು ಕೇರಳದ ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಶಿಕ್ಷೆಯ ವಿರುದ್ಧ ಫೈಝಲ್ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರೂ, ಅದು ತೀರ್ಪಿಗೆ ತಡೆ ನೀಡಲು ನಿರಾಕರಿಸಿತು.
ಪ್ರಾಸಿಕ್ಯೂಷನ್ ಪ್ರಕಾರ, ಮಾಜಿ ಕೇಂದ್ರ ಸಚಿವ ಪಿ ಎಂ ಸಯೀದ್ ಅವರ ಅಳಿಯ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಸಾಲಿಯಾ ಅವರ ಮೇಲೆ ಹಲ್ಲೆ ನಡೆಸಲು ಸಂಸದ ಮೊಹಮ್ಮದ್ ಫೈಜಲ್ ಜನರ ಗುಂಪಿನ ನಾಯಕತ್ವ ವಹಿಸಿದ್ದರು. ಘಟನೆಯಲ್ಲಿ ಸಾಲಿಯಾ ತೀವ್ರವಾಗಿ ಗಾಯಗೊಂಡರು. ನಂತರ ಸಾಲಿಯಾ ಅವರನ್ನು ಕೇರಳಕ್ಕೆ ಕರೆತರಲಾಯಿತು ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಹಲವು ತಿಂಗಳುಗಳ ಕಾಲ ಚಿಕಿತ್ಸೆ ನೀಡಲಾಯಿತು. ನಂತರ ಭಾರತೀಯ ದಂಡ ಸಂಹಿತೆಯಡಿ ಫೈಝಲ್ ಹಾಗೂ ಇತರರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ 32 ಆರೋಪಿಗಳಿದ್ದು, ಮೊದಲ ನಾಲ್ವರಿಗೆ ಶಿಕ್ಷೆ ವಿಧಿಸಲಾಗಿದ್ದು, ಸಂಸದರು ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದರು. ಆರೋಪಿಗಳ ಪರ ವಕೀಲರು ಇದೊಂದು ಸಣ್ಣ ಘರ್ಷಣೆ ಎಂದು ಹೇಳಿದ್ದರೂ, ನ್ಯಾಯಾಧೀಶರು ವೈದ್ಯಕೀಯ ವರದಿಗಳನ್ನು ಉಲ್ಲೇಖಿಸಿ ಮತ್ತು ಸಂತ್ರಸ್ತರ ದೀರ್ಘಾವಧಿಯ ಆಸ್ಪತ್ರೆ ದಾಖಲಾತಿಯನ್ನು ಉಲ್ಲೇಖಿಸಿ ಅವರ ವಾದವನ್ನು ತಿರಸ್ಕರಿಸಿದರು. 2009ರ ಲೋಕಸಭೆ ಚುನಾವಣೆ ವೇಳೆ ಈ ಘರ್ಷಣೆ ನಡೆದಿತ್ತು.
ಕವರಟ್ಟಿ ಸೆಷನ್ಸ್ ನ್ಯಾಯಾಲಯದ ಶಿಕ್ಷೆಯ ಪರಿಣಾಮವಾಗಿ, ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಝಲ್ ಪಿಪಿ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ