ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಸಂಸದೆ ಹಾಗೂ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಅವರ ಸೀರೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ನಂತರ ಹೇಳಿಕೆಯೊಂದರಲ್ಲಿ, ಸುಪ್ರಿಯಾ ಸುಳೆ ಅವರು ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ ಮತ್ತು ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಹೇಳಿದ್ದಾರೆ.
ಹಿಂಜೆವಾಡಿ ಪ್ರದೇಶದಲ್ಲಿ ಆಯೋಜಿಸಿದ್ದ ಕರಾಟೆ ಕಾರ್ಯಕ್ರಮವನ್ನು ಉದ್ಘಾಟಿಸಲು ವೇದಿಕೆಯಲ್ಲಿ ಇರಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾಗಿದ್ದರು. ಸುಪ್ರಿಯಾ ಸುಳೆ ಟೇಬಲ್ ಹತ್ತಿರ ಹೋಗುತ್ತಿದ್ದಂತೆ ಕೆಳಗಡೆ ಇರಿಸಲಾಗಿದ್ದ ದೀಪಕ್ಕೆ ತಾಗಿ ಸೀರೆಗೆ ಬೆಂಕಿಯ ಹತ್ತಿಕೊಂಡಿದೆ. ಕೂಡಲೇ ಸಂಸದೆ ಸುಪ್ರಿಯಾ ಸುಳೆ ಸೀರೆಗೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಹೀಗಾಗಿ ಯಾವುದೇ ಅನಾಹುತವಾಗಿಲ್ಲ.
ಕರಾಟೆ ಸ್ಪರ್ಧೆಯೊಂದರ ಉದ್ಘಾಟನೆ ವೇಳೆ ನನ್ನ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಆದರೆ, ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಲಾಯಿತು. ನಾನು ಸುರಕ್ಷಿತವಾಗಿರುವುದರಿಂದ ಎಲ್ಲಾ ಹಿತೈಷಿಗಳು, ನಾಗರಿಕರು, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಚಿಂತಿಸಬೇಡಿ ಎಂದು ಸುಳೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ