ಬೆಂಗಳೂರು: ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಪ್ರತಿ ತಿಂಗಳು 2,000 ರೂ. ಸಹಾಯಧನ ನೀಡುವ ‘ಗೃಹಲಕ್ಷ್ಮಿ’ ಯೋಜನೆ ಜಾರಿಗೆ ತರುವುದಾಗಿ ಕಾಂಗ್ರೆಸ್ ಇಂದು ಸೋಮವಾರ ಘೋಷಣೆ ಮಾಡಿದೆ.
ನಗರದ ಅರಮನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ನಾ ನಾಯಕಿ’ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಯೋಜನೆಗೆ ಸಂಬಂಧಿಸಿದ ಭಿತ್ತ ಪತ್ರ ಅನಾವರಣ ಮೂಲಕ ಅಧಿಕೃತವಾಗಿ ಯೋಜನೆಯನ್ನು ಘೋಷಿಸಿದರು. “ಗೃಹ ಲಕ್ಷ್ಮಿ ಯೋಜನೆ” ಅಡಿಯಲ್ಲಿ ವರ್ಷಕ್ಕೆ 24,000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಹೇಳಿದೆ.
ಮೇ ವೇಳೆಗೆ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಈ ಭರವಸೆ ನೀಡಿದೆ.
‘ಗೃಹ ಲಕ್ಷ್ಮಿ ಯೋಜನೆ’ಯು”ಅತಿಯಾದ” ಎಲ್ಪಿಜಿ ಬೆಲೆಗಳ ಹೊರೆ ಮತ್ತು ಮಹಿಳೆಯು ಭರಿಸಬೇಕಾದ “ದುಬಾರಿ ದೈನಂದಿನ ವೆಚ್ಚಗಳ” ಹೊರೆ ಕಡಿಮೆ ಮಾಡುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ರಾಜ್ಯದ ಪ್ರತಿಯೊಬ್ಬ ಮಹಿಳೆಯೂ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುವ ಮತ್ತು ತನ್ನ ಮಕ್ಕಳನ್ನು ನೋಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಬೇಕೆಂದು ಕಾಂಗ್ರೆಸ್ ಬಯಸುತ್ತದೆ. ಕರ್ನಾಟಕದ ಪ್ರತಿಯೊಬ್ಬ ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಲು ಪಕ್ಷವು ಬಯಸುತ್ತದೆ. ಈ ಯೋಜನೆಯಿಂದ 1.5 ಕೋಟಿಗೂ ಹೆಚ್ಚು ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ ಎಂದು ಪಕ್ಷ ಹೇಳಿದೆ.
ರಾಜ್ಯದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು ಮತ್ತು ಬಿಜೆಪಿ ಆಡಳಿತದ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದ ಪರಿಸ್ಥಿತಿ ತುಂಬಾ ನಾಚಿಕೆಗೇಡಿತನದ್ದಾಗಿದೆ. ಮಂತ್ರಿಗಳು ಉದ್ಯೋಗದಲ್ಲಿ ಶೇಕಡಾ 40 ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ನನಗೆ ಹೇಳಲಾಗಿದೆ” ಎಂದು ‘ನಾ ನಾಯಕಿ’ (ನಾನು ಮಹಿಳಾ ನಾಯಕಿ) ಎಂಬ ಮಹಿಳಾ ಕೇಂದ್ರಿತ ಕಾರ್ಯಕ್ರನದಲ್ಲಿ ಪ್ರಿಯಾಂಕಾ ವಾದ್ರಾ ಹೇಳಿದರು. ಕರ್ನಾಟಕದಲ್ಲಿ 1.5 ಲಕ್ಷ ಕೋಟಿ ಸಾರ್ವಜನಿಕ ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ 8,000 ಕೋಟಿ ರೂ.ಗಳಲ್ಲಿ ಆಗಬೇಕಿರುವ ಕೆಲವು ಅಭಿವೃದ್ಧಿಯ ಬಗ್ಗೆ ಯೋಚಿಸಿ ಮತ್ತು 3,200 ಕೋಟಿ ರೂ. ಕಮಿಷನ್ ಆಗುತ್ತಿದೆ ಎಂದು ವಾದ್ರಾ ಆರೋಪಿಸಿದ್ದಾರೆ.
ಆಪಾದಿತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣವನ್ನು ಉಲ್ಲೇಖಿಸಿದ ಅವರು, “ಕರ್ನಾಟಕದಲ್ಲಿ ಲಂಚ ನೀಡದೆ ಏನೂ ಆಗುವುದಿಲ್ಲ. ಪಿಎಸ್ಐ ಹಗರಣದಂತಹ ನಾಚಿಕೆಗೇಡಿನ ಹಗರಣಗಳು ಪೊಲೀಸ್ ಹುದ್ದೆಗಳನ್ನು ಮಾರಾಟ ಮಾಡುತ್ತಿವೆ. ನೀವು ನಿಮ್ಮ ಮಕ್ಕಳಿಗೆ, ಚಿಕ್ಕ ಹುಡುಗ ಹುಡುಗಿಯರಿಗೆ ಕೆಲಸ ಕೊಡಿಸಲು ಶಿಕ್ಷಣ ಕೊಡಿಸುತ್ತೀರಿ. ಅಧಿಕಾರದಲ್ಲಿರುವ ಜನರಿಂದ ನೀವು ನಿರೀಕ್ಷಿಸುವುದು ಇದನ್ನೇ? ಎಂದು ಅವರು ಪ್ರಶ್ನಿಸಿದರು.
ಬೋರ್ವೆಲ್, ಡ್ರೈವಿಂಗ್ ಲೈಸೆನ್ಸ್, ವಸತಿ, ವರ್ಗಾವಣೆ ಹೀಗೆ ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ಎಲ್ಲದಕ್ಕೂ ಜನರು ಲಂಚ ನೀಡಬೇಕಾಗಿದೆ ಎಂದು ಆರೋಪಿಸಿದರು.
ಅದ್ಧೂರಿ ಸ್ವಾಗತ
ನಾ ನಾಯಕಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಿಯಾಂಕ ವಾದ್ರಾ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದು, ವಿಮಾನ ನಿಲ್ದಾಣದಿಂದ ಅರಮನೆ ಮೈದಾನದವರೆಗೂ ಒಂದು ರೀತಿ ಮೆರವಣಿಗೆ ರೀತಿಯಲ್ಲಿ ಪ್ರಿಯಾಂಕ ವಾದ್ರಾ ಅವರನ್ನು ಕರೆ ತರಲಾಯಿತು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ನಾ ನಾಯಕಿ ಸಮಾವೇಶಕ್ಕೆ ರಾಜ್ಯದ ಎಲ್ಲೆಡೆ ಸಾವಿರಾರು ಮಹಿಳಾ ಕಾರ್ಯಕರ್ತರು ಆಗಮಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ