ಚಿಕ್ಕಮಗಳೂರು : ಹಾಸನ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಭವಾನಿ ರೇವಣ್ಣ ಅವರಿಗೆ ಈಗಾಗಲೇ ಟಿಕೆಟ್ ನೀಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಭವಾನಿ ರೇವಣ್ಣ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಬಿಜೆಪಿಯಿಂದ ಟಿಕೆಟ್ ಆಫರ್ ನೀಡಿದ್ದಾರೆ..!
ಹಾಸನದಿಂದ ಸ್ಪರ್ಧಿಸಲು ಜೆಡಿಎಸ್ನಿಂದ ಭವಾನಿ ರೇವಣ್ಣರಿಗೆ ಟಿಕೆಟ್ ನಿರಾಕರಿಸಿದ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸಿ.ಟಿ ರವಿ, ನಾನು ಸಹೋದರಿ ಭವಾನಿಯವರ ಹೇಳಿಕೆಯನ್ನ ಗಮನಿಸಿದ್ದೇನೆ . ಹೆಚ್.ಡಿ ಕುಮಾರಸ್ವಾಮಿಯವರ ಹೇಳಿಕೆಯನ್ನೂ ಗಮನಿಸಿದ್ದೇನೆ ನಾನು ಮನೆಯ ಜಗಳ ಹೆಚ್ಚಿಸಲು ಇಷ್ಟಪಡುವುದಿಲ್ಲ. ಬೇಕಾದರೆ ಭವಾನಿ ರೇವಣ್ಣ ಅವರು ಹೊಳೇನರಸೀಪುರದಿಂದ ಅಭ್ಯರ್ಥಿಯಾಗುವುದಾದರೆ ಬಿಜೆಪಿ ಟಿಕೆಟ್ ಕೊಡುತ್ತೇವೆ. ಹೊಳೆನರಸೀಪುರಕ್ಕೆ ಭವಾನಿಯವರಿಗಿಂತ ಉತ್ತಮ ಕ್ಯಾಂಡಿಡೇಟ್ ಬೇರೊಬ್ಬರಿಲ್ಲ ಎಂದು ಹೇಳುವ ಮೂಲಕ ವ್ಯಂಗ್ಯವಾಗಿ ಆಹ್ವಾನ ನೀಡಿದ್ದಾರೆ.ಹೊಳೆನರಸೀಪುರ ಹೆಚ್.ಡಿ ರೇವಣ್ಣ ಸ್ಪರ್ಧಿಸುವ ಕ್ಷೇತ್ರ. ಹೀಗಾಗಿ ಬಿಜೆಪಿಯಿಂದ ರೇವಣ್ಣ ಅವರ ಪತ್ನಿ ಭವಾನಿ ಸ್ಪರ್ಧಿಸಲಿ ಎಂದು ಸಿ.ಟಿ ರವಿ ಹಾಸ್ಯಾಸ್ಪದವಾಗಿ ಹೇಳಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಶ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ನೀತಿ ಒಪ್ಪಿಕೊಂಡು ಬರುವವರು ಬರಬಹುದು. ಸುಮಲತಾ ಪ್ರಮುಖ ಜನಪ್ರಿಯ ನಾಯಕಿಯರಲ್ಲಿ ಒಬ್ಬರು. ಪಕ್ಷೇತರ ಅಭ್ಯರ್ಥಿಯಾಗಿ ಘಟಾನುಘಟಿಗಳ ಎದುರು ಗೆದ್ದಿದ್ದಾರೆ. ಸುಮಲತಾ ಬಿಜೆಪಿ ಸೇರ್ಪಡೆಯಾದರೆ ತುಂಬಾ ಸಂತೋಷವಾಗುತ್ತದೆ. ಅದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ತಿಳಿಸಿದರು
ನಿಮ್ಮ ಕಾಮೆಂಟ್ ಬರೆಯಿರಿ