ಚೆಕ್‌ ಬೌನ್ಸ್‌ ಪ್ರಕರಣ: ದೂರುದಾರರಿಗೆ ₹1.38 ಕೋಟಿ ಪಾವತಿಸಲು ಶಾಸಕ ಕುಮಾರಸ್ವಾಮಿಗೆ ವಿಶೇಷ ನ್ಯಾಯಾಲಯದ ಆದೇಶ, ತಪ್ಪಿದರೆ ಜೈಲುಶಿಕ್ಷೆ

ಬೆಂಗಳೂರು: ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಬಿಜೆಪಿಯ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ಸೋಮವಾರ ಘೋಷಿಸಿದೆ. ಅಲ್ಲದೇ, ಪ್ರತ್ಯೇಕ ಎಂಟು ಪ್ರಕರಣಗಳಲ್ಲಿ ಒಟ್ಟಾರೆ ₹1.38 ಕೋಟಿಯನ್ನು ದೂರುದಾರರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಪ್ರತಿ ಪ್ರಕರಣಕ್ಕೆ ತಲಾ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶ ಮಾಡಿದೆ.
ಚಿಕ್ಕಮಗಳೂರಿನ ರೈತ ಎಚ್‌ ಆರ್‌ ಹೂವಪ್ಪ ಗೌಡ ಅವರ ದೂರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್‌) ನ್ಯಾಯಾಧೀಶೆ ಜೆ ಪ್ರೀತ್‌ ಅವರು ಮಾನ್ಯ ಮಾಡಿದ್ದಾರೆ. ಹೂವಪ್ಪ ಗೌಡರಿಗೆ ₹1,38,25,000 ಪಾವತಿಸಬೇಕು ಎಂದು ಆದೇಶ ಮಾಡಿದ್ದಾರೆ. ತಪ್ಪಿದಲ್ಲಿ ಪ್ರತಿ ಪ್ರಕರಣದಲ್ಲಿ ತಲಾ ಆರು ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.
ಈ ಕುರಿತ ಎಂಟು ಪ್ರತ್ಯೇಕ ಪ್ರಕರಣಗಳ ಮೇಲಿನ ಆದೇಶವನ್ನು ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶರು ಸೋಮವಾರ ಪ್ರಕಟಿಸಿದರು. ಕುಮಾರಸ್ವಾಮಿ ಅವರು ವಿವಿಧ ಪ್ರಕರಣಗಳಲ್ಲಿ ಒಟ್ಟು ₹ 1,38,65,000 ಮೊತ್ತಕ್ಕೆ ಮರುಪಾವತಿಯ ಚೆಕ್‌ ನೀಡಿದ್ದರು. ಇದರಲ್ಲಿ ₹ 1,36,50,000 ಬಾಕಿ ಉಳಿಸಿಕೊಂಡಿದ್ದರು. ಈ ಕುರಿತಂತೆ ಫಿರ್ಯಾದುಗಳು ಸಲ್ಲಿಕೆಯಾಗಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement