ಪುಲ್ವಾಮಾ ಭಯೋತ್ಪಾದಕ ದಾಳಿಗೆ ನಾಲ್ಕು ವರ್ಷ, ನಮ್ಮ ವೀರ ಹುತಾತ್ಮರ ಸ್ಮರಣೆ : ಫೆಬ್ರವರಿ 14ರ ದುರದೃಷ್ಟದ ದಿನ ಪುಲ್ವಾಮಾದಲ್ಲಿ ಏನಾಯ್ತು..?

ಇಂದಿಗೆ ನಾಲ್ಕು ವರ್ಷಗಳ ಹಿಂದೆ 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ 40 ಯೋಧರು ಹುತಾತ್ಮರಾದರು. ಸ್ಫೋಟಕ ತುಂಬಿದ ವಾಹನದಲ್ಲಿ ಬಂದ ಆತ್ಮಾಹುತಿ ಬಾಂಬರ್‌ ಸಿಆರ್‌ಪಿಎಫ್‌ (CRPF) ಬೆಂಗಾವಲು ಪಡೆಗೆ ಡಿಕ್ಕಿ ಹೊಡೆಸಿದ ನಂತರ ಈ ದುರದೃಷ್ಟಕರ ಘಟನೆ ಸಂಭವಿಸಿತು. ಅಂದಿನಿಂದ ಫೆಬ್ರವರಿ 14 ಅನ್ನು ‘ಕರಾಳ ದಿನ’ (Black Day) ಎಂದು ಆಚರಿಸಲಾಗುತ್ತದೆ. ಏಕೆಂದರೆ ಇದು ಇಲ್ಲಿಯವರೆಗೆ ಭಾರತೀಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ.
ಫೆಬ್ರವರಿ 14, 2019 ರಂದು ಏನಾಯಿತು?
2500 ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೊತ್ತ 78 ವಾಹನಗಳ ಬೆಂಗಾವಲು ಜಮ್ಮುವಿನಿಂದ ಹೊರಟು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್ 44) ಮೂಲಕ ಶ್ರೀನಗರದ ಕಡೆಗೆ ಹೋಗುತ್ತಿತ್ತು ಮತ್ತು ಸೂರ್ಯಾಸ್ತದ ಮೊದಲು ನಿಗದಿತ ಗಮ್ಯಸ್ಥಾನವನ್ನು ಅವರು ತಲುಪಬೇಕಾಗಿತ್ತು. ಈ ವೇಳೆ ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾದ 22 ವರ್ಷದ ಆತ್ಮಹತ್ಯಾ ಬಾಂಬರ್ ತನ್ನ ಸ್ಫೋಟಕ ತುಂಬಿದ ವಾಹನವನ್ನು ಜವಾನರಿದ್ದ ಬಸ್‌ಗೆ ಡಿಕ್ಕಿ ಹೊಡೆಸಿದ. ಸುಮಾರು ಮಧ್ಯಾಹ್ನ 3:15ರ ಸುಮಾರಿಗೆ ಅವಂತಿಪೋರಾ ಬಳಿ ನಡೆದ ದಾಳಿಯಲ್ಲಿ 40 ಸಿಆರ್‌ಪಿಎಫ್ ಜವಾನರು ಸ್ಫೋಟದಿಂದಾಗಿ ಮೃತಪಟ್ಟರು, ಇನ್ನೂ ಅನೇಕರು ಗಾಯಗೊಂಡರು.
ಕಲ್ಲು ತೂರಾಟ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಎರಡು ವರ್ಷಗಳ ಅವಧಿಯಲ್ಲಿ ಐದು ಬಾರಿ ಅಧಿಕಾರಿಗಳು ಈ ಆತ್ಮಹತ್ಯೆ ಬಾಂಬರ್‌ನನ್ನು ಬಂಧಿಸಲಾಗಿತ್ತು ಎಂದು ಆತ್ಮಹತ್ಯಾ ಬಾಂಬರ್ ಕುಟುಂಬ ಸದಸ್ಯರು ಹೇಳಿದ್ದಾರೆ. 2018 ರಲ್ಲಿ ಆತ ತನ್ನ ಮನೆಯಿಂದ ಹೊರಬಿದ್ದ ಸಮಯದಲ್ಲಿ ಅದೇ ಕೊನೆಯ ಬಾರಿಗೆ ಅತನನ್ನು ಕುಟುಂಬ ನೋಡಿರುವುದಾಗಿ ಅವರು ಹೇಳಿದ್ದಾರೆ. ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಹೊತ್ತುಕೊಂಡಿತ್ತು. ಅಂದಿನಿಂದ ಭಯೋತ್ಪಾದಕ ಸಂಘಟನೆಯ ಮಾಡ್ಯೂಲ್‌ನ ಮುಖ್ಯ ಸಂಚುಕೋರರನ್ನು ಸೇನೆಯು ಕೊಂದುಹಾಕಿದೆ.
ಪುಲ್ವಾಮಾ ದಾಳಿಯ ನಂತರ, ಕೇಂದ್ರ ಸರ್ಕಾರವು ಘಟನೆಯ ತನಿಖೆಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ 12 ಸದಸ್ಯರ ತಂಡವನ್ನು ರಚಿಸಿತು. ತನಿಖೆಯ ಪ್ರಕಾರ, ಆತ್ಮಹತ್ಯಾ ಬಾಂಬರ್ ಸುಮಾರು 300 ಕೆಜಿ ಸ್ಫೋಟಕಗಳನ್ನು ಹೊತ್ತೊಯ್ದಿದ್ದ.
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ರಾಷ್ಟ್ರದಾದ್ಯಂತ ಶೋಕಾಚರಣೆ ನಡೆಸಲಾಯಿತು. ಪ್ರತಿಭಟನೆ ಹಾಗೂ ಕ್ಯಾಂಡಲ್ ಮೆರವಣಿಗೆ ನಡೆಸಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನವು ಇದರ ಹಿಂದಿದೆ ಎಂದು ಆರೋಪಿಸಿದೆ. ಆದರೆ ಪಾಕಿಸ್ತಾನವು ಅಂತಹ ಎಲ್ಲಾ ಆರೋಪಗಳನ್ನು ತಳ್ಳಿಹಾಕಿತು.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

ಪಾಕಿಸ್ತಾನದ ವಿರುದ್ಧ ಭಾರತದ ಪ್ರತೀಕಾರ
ಏತನ್ಮಧ್ಯೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಪುಲ್ವಾಮಾ ಭಯೋತ್ಪಾದಕ ದಾಳಿಗೆ ತಮ್ಮ ಪ್ರತಿಕ್ರಿಯೆಯ ಸಮಯ, ಸ್ಥಳ ಮತ್ತು ಸ್ವರೂಪವನ್ನು ಆಯ್ಕೆ ಮಾಡಲು ಭದ್ರತಾ ಪಡೆಗಳಿಗೆ ಅನುಮತಿ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದರು. ನಂತರ ಭಾರತವು ಪಾಕಿಸ್ತಾನದ ಬಾಲಾಕೋಟದ ಜೈಶ್ಿ-ಮೊಹಮ್ಮದ್‌ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಭಯೋತ್ಪಾದನಾ ನಿಗ್ರಹ ವೈಮಾನಿಕ ದಾಳಿ ಪ್ರಾರಂಭಿಸಿತು.
ಪುಲ್ವಾಮಾ ಮಾರಣಾಂತಿಕ ದಾಳಿಯ ಕೆಲವೇ ದಿನಗಳಲ್ಲಿ, ಭಾರತೀಯ ಭದ್ರತಾ ಪಡೆಗಳು ಫೆಬ್ರವರಿ 26, 2019 ರಂದು ಭಯೋತ್ಪಾದನಾ ನಿಗ್ರಹ ದಾಳಿ ನಡೆಸಿತು. ಹಲವಾರು ಭಾರತೀಯ ವಾಯುಪಡೆಯ ಜೆಟ್‌ಗಳು ಬಾಲಾಕೋಟ್‌ನಲ್ಲಿರುವ ಜೈಶ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ಮಾಡಿ ಸುಮಾರು 300 ರಿಂದ 350. ಭಯೋತ್ಪಾದಕರನ್ನು ಕೊಂದು ಹಾಕಿವೆ ಎಂದು ಹೇಳಲಾಗಿದೆ.
ಬಾಲಾಕೋಟ್ ನಂತರ, ಪಾಕಿಸ್ತಾನವು ಇದೇ ರೀತಿಯ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಭಾರತೀಯ ವಾಯಪಡೆ (IAF) ವಿಫಲಗೊಳಿಸಿತು. ಈ ಸಮಯದಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ (ಈಗ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಗಿದೆ) MiG 21 ಬೈಸನ್ ಜೆಟ್ ಪಾಕಿಸ್ತಾನದ ಎಫ್‌-16 ಯುದ್ಧವಿಮಾನವನ್ನು ಧ್ವಂಸಗೊಳಿಸಿದ ನಂತರ ಪಾಕಿಸ್ತಾನದ ಪ್ರದೇಶದಲ್ಲಿ ಅವರ ವಿಮಾನ ಪತನವಾಯಿತು. ನಂತರ ಅವರನ್ನು ಮಾರ್ಚ್ 1 ರಂದು ಪಾಕಿಸ್ತಾನ ಬಿಡುಗಡೆ ಮಾಡಿತು ಮತ್ತು ನಂತರದ ಇದಿನಗಳಲ್ಲಿ ಭಾರತದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪದಕ ‘ವೀರ್ ಚಕ್ರ’ವನ್ನು ನೀಡಲಾಯಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನಂತರ ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಮೋಸ್ಟ್ ಫೇವರ್ಡ್ ನೇಷನ್ (MFN) ಸ್ಥಾನಮಾನ ಹಿಂಪಡೆಯಿತು. ಭಾರತ ಸರ್ಕಾರವು ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಎಫ್‌ಎಟಿಎಫ್ ಹಣಕಾಸು ಕ್ರಿಯಾ ಕಾರ್ಯಪಡೆಯನ್ನು ಒತ್ತಾಯಿಸಿತು. ಭಾರತೀಯ ವೈದ್ಯರ ನಿಯೋಗವು 13 ನೇ ಅಸೋಸಿಯೇಶನ್ ಆಫ್ ಅನಸ್ತೇಶಿಯಾಲಾಜಿಸ್ಟ್ ಕಾಂಗ್ರೆಸ್‌ಗಾಗಿ ಪಾಕಿಸ್ತಾನಕ್ಕೆ ತೆರಳಬೇಕಿದ್ದ ಭೇಟಿ ರದ್ದುಗೊಳಿಸಿತು. ಪಾಕಿಸ್ತಾನದ ಆಟಗಾರರು ಸೂಪರ್ ಲೀಗ್ ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಲಾಯಿತು ಮತ್ತು ಪಾಕಿಸ್ತಾನಿ ನಟರು ಭಾರತೀಯ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಯಿತು.
ಅಕ್ಟೋಬರ್ 2020 ರಲ್ಲಿ, ಪಾಕಿಸ್ತಾನದ ಹಿರಿಯ ಮಂತ್ರಿಯೊಬ್ಬರು ಭಾರತದಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಹೊಣೆ ಎಂದು ಒಪ್ಪಿಕೊಂಡರು.
2020 ರಲ್ಲಿ, 40 ಯೋಧರ ನೆನಪಿಗಾಗಿ ಲೆಥ್ಪೋರಾ ಶಿಬಿರದಲ್ಲಿ ಸ್ಮಾರಕ ನಿರ್ಮಿಸಲಾಯಿತು. ಎಲ್ಲಾ 40 ಸಿಬ್ಬಂದಿಯ ಹೆಸರುಗಳು ಮತ್ತು ಅವರ ಚಿತ್ರಗಳು ಸ್ಮಾರಕದ ಒಂದು ಭಾಗವಾಗಿದೆ. ಸ್ಮಾರಕವು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) — ‘ಸೇವಾ ಮತ್ತು ನಿಷ್ಠಾ’ (ಸೇವೆ ಮತ್ತು ನಿಷ್ಠೆ) ಧ್ಯೇಯವಾಕ್ಯವನ್ನು ಸಹ ಪ್ರದರ್ಶಿಸುತ್ತದೆ.
ಈ ಭೀಕರ ಘಟನೆಗೆ ನಾಲ್ಕು ವರ್ಷಗಳು ಕಳೆದರೂ, ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಹುತಾತ್ಮ ಸೈನಿಕರ ಅತ್ಯುನ್ನತ ತ್ಯಾಗವನ್ನು ಭಾರತದ ಜನರು ಇಂದಿಗೂ ಸ್ಮರಿಸುತ್ತಾರೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement