ಭೋಪಾಲ್: ತನ್ನ ಪತ್ನಿಗೆ 6 ತಿಂಗಳಿಂದ ಸಂಬಳ ಬಂದಿಲ್ಲ ಎಂದ ವ್ಯಕ್ತಿಯ ಸೊಂಟ ಮುರಿಯುವೆ ಎಂದು ಮಧ್ಯ ಪ್ರದೇಶದ ಅರಣ್ಯ ಸಚಿವ ಸಾರ್ವಜನಿಕ ಕಾರ್ಯಕ್ರಮದಲ್ಲೇ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಮಧ್ಯ ಪ್ರದೇಶದ ಅರಣ್ಯ ಸಚಿವ ವಿಜಯ್ ಶಾ ಅವರು ಸಾರ್ವಜನಿಕ ಕಾರ್ಯಕ್ರಮದ ನಿಮಿತ್ತ ಖಾಂಡ್ವಾ ಜಿಲ್ಲೆಗೆ ಆಗಮಿಸಿದ್ದಾಗ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರಿಗೆ ಈ ರೀತಿ ಬೆದರಿಸಿದ್ದಾರೆ. ತನ್ನ ಪತ್ನಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಕಳೆದ ಆರು ತಿಂಗಳಿಂದ ಅವಳಿಗೆ ಸಂಬಳ ಬಂದಿಲ್ಲ ಎಂದು ವ್ಯಕ್ತಿ ಹೇಳಿದ್ದಾನೆ.
ಆತನ ಈ ಮಾತು ಕೇಳಿ ಸಿಟ್ಟುಕೊಂಡ ಸಚಿವ ಆತನನ್ನು ಕುಡುಕ ಎಂದು ನಿಂದಿಸಿದ್ದಾರೆ, ಅಲ್ಲದೆ ಸೊಂಟ ಮುರಿಯುವೆ ಎಂದು ಬೆದರಿಕೆ ಹಾಕಿದ್ದಲ್ಲದೆ ಪೋಲಿಸರನ್ನು ಕರೆಸಿ ಆತನನ್ನು ಕಾರ್ಯಕ್ರಮದಿಂದ ಹೊರಗೆ ಹಾಕಿಸಿದ್ದಾರೆ. ಮತ್ತು ಸರ್ಕಾರಿ ಕಾರ್ಯಕ್ರಮದಲ್ಲಿ ಇಂತಹ ನಾಟಕ ಮಾಡುವವರಿಗೆ ಪೊಲೀಸರು ಸೊಂಟ ಮುರಿಯುತ್ತಾರೆ ಎಂದು ಎಚ್ಚರಿಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಅಲ್ಲದೆ, ಈ ಘಟನೆ ಬಗ್ಗೆ ಕಾಂಗ್ರೆಸ್ ಮೇಲೆ ಆರೋಪ ಹೊರಿಸಿದ ಸಚಿವರು, ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೇ ವಿಪಕ್ಷದವರು ಈ ರೀತಿ ಮಾಡಿಸುತ್ತಿದ್ದಾರೆ. ಆ ವ್ಯಕ್ತಿಯನ್ನು ಕಾಂಗ್ರೆಸ್ನವರು ಕಳುಹಿಸಿದ್ದಾರೆ ಎಂದು ಹೇಳಿದ ಅವರು ನನಗೆ ಅವನನ್ನು ಯಾರು ಕಳುಹಿಸಿದ್ದಾರೆ ಎಂದು ತಿಳಿದಿದೆ ಎಂದೂ ಹೇಳಿದ್ದಾರೆ.
ವಿಕಾಸ ಯಾತ್ರೆಯ ಸಮಯದಲ್ಲಿ ಗದ್ದಲವನ್ನು ಸೃಷ್ಟಿಸಲು ಸ್ಥಳೀಯ ಕಾಂಗ್ರೆಸ್ ನಾಯಕರು ಕೆಲವರನ್ನು ಮದ್ಯ ಕುಡಿಯುವಂತೆ ಮಾಡಿ ಈ ರೀತಿ ಮಾಡಿಸಿದ್ದಾರೆ ಎಂದು ಅವರು ಹೇಳಿದರು. ಆ ಬಳಿಕ ಆ ಪ್ರದೇಶದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವುದಕ್ಕೂ ಶಾ ಪೋಲಿಸರಿಗೆ ಸೂಚನೆ ನೀಡಿದ್ದಾರೆ.
ಅರಣ್ಯ ಸಚಿವರ ದರ್ಪದ ವರ್ತನೆಗೆ ಹಲವರಿಂದ ಟೀಕೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಭಾರೀ ಟೀಕೆ ವ್ಯಕ್ತವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ