ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ವಿಮಾನದಿಂದ ನಾಟಕೀಯವಾಗಿ ಕೆಳಗಿಳಿಸಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಕೆಲ ಗಂಟೆಗಳ ನಂತರ ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಮಂಗಳವಾರದ ವರೆಗೆ ಪವನ್ ಖೇರಾ ಅವರಿಗೆ ರಕ್ಷಣೆ ನೀಡಿದ್ದಾರೆ ಹಾಗೂ ಅಂದು ಸುಪ್ರೀಂ ಕೋರ್ಟ್ ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ. ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಖೇರಾ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕ್ಲಬ್ ಮಾಡುವಂತೆ ಕಾಂಗ್ರೆಸ್ ಕೋರಿಕೆಗೆ ನ್ಯಾಯಾಲಯ ಸಮ್ಮತಿಸಿದೆ.
ಛತ್ತೀಸ್ಗಢದ ರಾಯ್ಪುರಕ್ಕೆ ಹೊರಟ ವಿಮಾನದಿಂದ ಇಳಿಯುವಂತೆ ಖೇರಾ ಅವರಿಗೆ ಸೂಚಿಸಿದ ನಂತರ ಸುಮಾರು 50 ಕಾಂಗ್ರೆಸ್ ನಾಯಕರು ಇಂದು, ಗುರುವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದ ಟಾರ್ಮ್ಯಾಕ್ನಲ್ಲಿ ಪ್ರತಿಭಟನೆ ನಡೆಸಿದರು, ರಾಯ್ಪುರದಲ್ಲಿ ಕಾಂಗ್ರೆಸ್ ಪಕ್ಷವು ಮೂರು ದಿನಗಳ ಸಭೆಯಲ್ಲಿ ಆಂತರಿಕ ಚುನಾವಣೆಗಳ ಬಗ್ಗೆ ಚರ್ಚಿಸಲು ಯೋಜಿಸಿದೆ. ಖೇರಾ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸಭೆಗಾಗಿ ರಾಯ್ಪುರಕ್ಕೆ ಹೊರಟಿದ್ದಾಗ ಅವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
ಇದು ಸುದೀರ್ಘ ಯುದ್ಧವಾಗಿದೆ ಮತ್ತು ನಾನು ಹೋರಾಡಲು ಸಿದ್ಧನಿದ್ದೇನೆ ಎಂದು ಅವರು ಪೊಲೀಸರಿಂದ ಬಂಧನಕ್ಕೊಳಗಾಗುವ ವೇಳೆ ಹೇಳಿದರು.
ಖೇರಾ ಅವರನ್ನು ಬಂಧಿಸಲು ಅಸ್ಸಾಂನಿಂದ ಪೊಲೀಸ್ ತಂಡವೊಂದು ಬಂದಿತು. ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ, ಕಾಂಗ್ರೆಸ್ ವಕ್ತಾರರು ಅದಾನಿ-ಹಿಂಡೆನ್ಬರ್ಗ್ ಗಲಭೆ ಕುರಿತು ಸಂಸದೀಯ ತನಿಖೆಗೆ ಒತ್ತಾಯಿಸುವಾಗ ಪ್ರಧಾನಿ ಮೋದಿಯವರ ಹೆಸರನ್ನು ಪ್ರಸ್ತಾಪಿಸಿದ್ದರು. “ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸಬಹುದಾದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಜೆಪಿಸಿ ರಚಿಸಬಹುದಾದರೆ, ನರೇಂದ್ರ ಗೌತಮ್ ದಾಸ್ … ಕ್ಷಮಿಸಿ ದಾಮೋದರದಾಸ್ … ಮೋದಿಗೆ ಏನು ಸಮಸ್ಯೆ? ಎಂದು ಪ್ರಶ್ನಿಸಿದ್ದರು.
ಇದು “ನಾಲಿಗೆ ಜಾರಿ ಆಗಿದೆ. ಮತ್ತು ಈ ಬಗ್ಗೆ ಖೇರಾ ಕ್ಷಮೆಯಾಚಿಸಿದ್ದಾರೆ ಎಂದು ಕಾಂಗ್ರೆಸ್ ಸುಪ್ರೀಂ ಕೋರ್ಟ್ನಲ್ಲಿ ವಾದಿಸಿತು.
” ಇದು ದುರದೃಷ್ಟಕರವಾಗಿದೆ, ಅವರು ನನ್ನ ಪ್ರಕಾರ ಅವರು ಆಡಬಾರದ ಮಾತುಗಳನ್ನು ಆಡಿದರು. ಅವರು ಕ್ಷಮೆ ಕೋರಿದ್ದಾರೆ. ಅದು ತಪ್ಪಾಗಿದೆ ಎಂದು ವಕೀಲ ಮತ್ತು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ದ್ವೇಷ ಭಾಷಣ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ನಿಬಂಧನೆಗಳನ್ನು ಹೇಗೆ ಅನ್ವಯಿಸಬಹುದು ಎಂದು ಸಿಂಘ್ವಿ ಪ್ರಶ್ನಿಸಿದ್ದಾರೆ. ಇದು ಹೇಗೆ ‘ಧಾರ್ಮಿಕ ಅಸಂಗತ’ ಪ್ರಕರಣ ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು.
ಅಸ್ಸಾಂ ರಾಜ್ಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಖೇರಾ ಅವರು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿದ್ದಾರೆ ಎಂದು ವಾದಿಸಿದರು.”ಈ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಆದ್ದರಿಂದ ಇದು ಸಾರ್ವಜನಿಕ ಅಸಮಾಧಾನವನ್ನು ಪ್ರಚೋದಿಸುತ್ತದೆ. ಇದು ದೇಶದ ಚುನಾಯಿತ ಪ್ರಧಾನಿಯ ವಿರುದ್ಧವಾಗಿದೆ. ಇದು ಉದ್ದೇಶಪೂರ್ವಕ ಮತ್ತು ಲೆಕ್ಕಾಚಾರದಿಂದ ಹೇಳಿದ್ದಾಗಿದೆ” ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ವಾದಿಸಿದರು.
ಪತ್ರಿಕಾಗೋಷ್ಠಿಯ ವೀಡಿಯೊವನ್ನು ಎಎಸ್ಜಿ ಪೀಠಕ್ಕೆ ನೀಡಿದರು. ದಯವಿಟ್ಟು ಅವರು ನೀಡಿದ ಹೇಳಿಕೆಯ ವೈಖರಿ ನೋಡಿ.. ಇದು ಉದ್ದೇಶಪೂರ್ವಕ ಅಲ್ಲವೋ ಅಥವಾ ಉದ್ದೇಶಪೂರ್ವಕವೋ ಎಂಬುದು ಸ್ಪಷ್ಟವಾಗುತ್ತದೆ.. ದಯವಿಟ್ಟು ವೀಡಿಯೊ ನೋಡಿ. ಮುಖಭಾವ ನೋಡಿ… ಅವರು ನಗುತ್ತಿದ್ದಾರೆ ಎಂದು ಭಾಟಿ ವಾದಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ