ವಿಮಾನದಿಂದ ಕೆಳಗಿಳಿಸಿದ ನಂತರ ಕಾಂಗ್ರೆಸ್‌ ನಾಯಕ ಪವನ್ ಖೇರಾ ಅವರನ್ನು ಬಂಧಿಸಿದ ಪೊಲೀಸರು

ನವದೆಹಲಿ: ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಹೋಗುವ ವಿಮಾನದಿಂದ ಕೆಳಗಿಳಿಸಿದ ನಂತರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಇಂದು, ಗುರುವಾರ ಬಂಧಿಸಲಾಗಿದೆ. ಸುಮಾರು 50 ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣದಲ್ಲಿ ಅಪರೂಪದ ಪ್ರತಿಭಟನೆ ನಡೆಸಿದರು ಹಾಗೂ ವಿಮಾನವನ್ನು ಬಿಡಲು ನಿರಾಕರಿಸಿದರು.
ಕಾಂಗ್ರೆಸ್ ಹಿರಿಯ ವಕ್ತಾರ ಪವನ್ ಖೇರಾ ಅವರನ್ನು ಇಂಡಿಗೋ ವಿಮಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಲಾಯಿತು. ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸಭೆಗಾಗಿ ರಾಯಪುರಕ್ಕೆ ಕಾಂಗ್ರೆಸ್ ನಾಯಕರ ದೊಡ್ಡ ಗುಂಪಿನೊಂದಿಗೆ ವಿಮಾನದಲ್ಲಿ ತೆಳುತ್ತಿದ್ದರು.
ಎಫ್‌ಐಆರ್ ಅಥವಾ ಪ್ರಥಮ ಮಾಹಿತಿ ವರದಿಯೊಂದಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಸ್ಸಾಂ ಪೊಲೀಸರು ಪವನ್ ಖೇರಾ ಅವರನ್ನು ಬಂಧಿಸಿದ್ದಾರೆ. ಅವರ ಜೊತೆ ವಿಮಾನದಿಂದ ಇಳಿದ ಕಾಂಗ್ರೆಸ್ ನಾಯಕರು ದೆಹಲಿ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ನಲ್ಲಿ ಪ್ರತಿಭಟಿಸಿದರು, ಘೋಷಣೆಗಳನ್ನು ಕೂಗಿದರು ಮತ್ತು ವಿಮಾನದ ಪಕ್ಕದಲ್ಲಿಯೇ ಧರಣಿ ನಡೆಸಿದರು.
“ರಾಯ್‌ಪುರಕ್ಕೆ ಹೋಗುವ ಫ್ಲೈಟ್ 6E 204 ನಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಒಬ್ಬ ಪ್ರಯಾಣಿಕರನ್ನು ಪೊಲೀಸರು ಕೆಳಗಿಳಿಸಿದ್ದಾರೆ. ಇತರ ಕೆಲವು ಪ್ರಯಾಣಿಕರು ಸಹ ತಮ್ಮ ಇಚ್ಛೆಯ ಮೇರೆಗೆ ಇಳಿಯಲು ನಿರ್ಧರಿಸಿದ್ದಾರೆ. ನಾವು ಸಂಬಂಧಪಟ್ಟ ಅಧಿಕಾರಿಗಳ ಸಲಹೆಯನ್ನು ಅನುಸರಿಸುತ್ತಿದ್ದೇವೆ. ವಿಮಾನವು ಸದ್ಯಕ್ಕೆ ವಿಳಂಬವಾಗಿದೆ ಮತ್ತು ಇತರ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಇಂಡಿಗೋ ಏರ್‌ಲೈನ್ಸ್ ಹೇಳಿದೆ.

ತಮ್ಮ ಸಾಮಾನು ಸರಂಜಾಮುಗಳಲ್ಲಿ ತೊಂದರೆ ಇದೆ ಎಂದು ಮೊದಲು ತಿಳಿಸಲಾಯಿತು ಎಂದು ಖೇರಾ ಹೇಳಿದ್ದಾರೆ. “ನನ್ನ ಬ್ಯಾಗೇಜ್‌ನಲ್ಲಿ ಸಮಸ್ಯೆ ಇದೆ ಎಂದು ನನಗೆ ತಿಳಿಸಲಾಯಿತು, ಆದರೆ ನನ್ನ ಬಳಿ ಕೇವಲ ಕೈ ಬ್ಯಾಗ್‌ ಮಾತ್ರ ಇದೆ ಎಂದು ತಿಳಿಸಿದೆ. ನಮತರ ನನಗೆ ನೀವು ವಿಮಾನದಲ್ಲಿ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು. ನಂತರ ಅವರು ಡಿಸಿಪಿ (ಪೊಲೀಸ್ ಉಪ ಆಯುಕ್ತರು) ನಿಮ್ಮನ್ನು ಭೇಟಿ ಮಾಡುತ್ತಾರೆ ಎಂದು ಹೇಳಿದರು. ಬಹಳ ಸಮಯ ಕಾಯುವಂತೆ ಮಾಡಿದರು. ಕಾನೂನು ಮತ್ತು ಸುವ್ಯವಸ್ಥೆ ಯಾವುದೂ ಇಲ್ಲ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಮೇಲೆ ಖೇರಾ ಅವರನ್ನು ಬಂಧಿಸುವಂತೆ ಬಿಜೆಪಿ ಒತ್ತಾಯಿಸಿದೆ. ಬಿಜೆಪಿ ಮುಖಂಡರೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.
ದೆಹಲಿ-ರಾಯ್‌ಪುರ ವಿಮಾನದಿಂದ ಪವನ್ ಖೇರಾ ಅವರನ್ನು ಕೆಳಗಿಳಿಸಿ ಎಐಸಿಸಿ ಪ್ಲೀನರಿ ಸೇರದಂತೆ ಮೋದಿ ಸರಕಾರವು ಗೂಂಡಾಗಳ ಗುಂಪಿನಂತೆ ವರ್ತಿಸುತ್ತಿದೆ. ಕ್ಷುಲ್ಲಕ ಎಫ್‌ಐಆರ್ ಬಳಸಿ ಅವರ ಚಲನವಲನವನ್ನು ನಿರ್ಬಂಧಿಸಿ ಅವರನ್ನು ಮೌನವಾಗಿರಿಸುವುದು ನಾಚಿಕೆಗೇಡಿನ, ಸ್ವೀಕಾರಾರ್ಹವಲ್ಲದ ಕೃತ್ಯವಾಗಿದೆ. ಪವನ್ ಅವರ ಜೊತೆ ನಿಲ್ಲುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ, ಪವನ್‌ ಖೇರಾ ಅವರು ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ತನಿಖೆಗೆ ಒತ್ತಾಯಿಸುವಾಗ ಪ್ರಧಾನಿ ಮೋದಿಯವರ ಹೆಸರನ್ನು ಪ್ರಸ್ತಾಪಿಸಿದರು. “ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸಬಹುದಾದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಜೆಪಿಸಿ ರಚಿಸಬಹುದಾದರೆ, ನರೇಂದ್ರ ಗೌತಮ್ ದಾಸ್ … ಕ್ಷಮಿಸಿ ದಾಮೋದರದಾಸ್ … ಮೋದಿಗೆ ಏನು ಸಮಸ್ಯೆ?” ಎಂದು ಪ್ರಶ್ನಿಸಿದ್ದರು.
ಪವನ್‌ ಖೇರಾ ಅವರು ಈ ಎಡವಟ್ಟನ್ನು ಉದ್ದೇಶಪೂರ್ವಕ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತದೆ.
” ಪ್ರಧಾನ ಮಂತ್ರಿಯ ತಂದೆಯ ಬಗ್ಗೆ ಆಸ್ಥಾನಿಕ ಪವನ್ ಖೇರಾ ಹೇಳಿಕೆಗಳಿಗೆ ಕಾಂಗ್ರೆಸ್‌ನ ಉನ್ನತ ಮಟ್ಟದ ಆಶೀರ್ವಾದವಿದೆ, ಕಾಂಗ್ರೆಸ್ಸಿಗರ ಈ ಭಯಾನಕ ಟೀಕೆಗಳನ್ನು ಭಾರತ ಮರೆಯುವುದಿಲ್ಲ ಅಥವಾ ಕ್ಷಮಿಸುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement