ಬೆಂಗಳೂರು: ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯ ಮೊದಲ ಹಂತದ ಟೋಲ್ ಕೇಂದ್ರಗಳು ಇಂದಿನಿಂದ (ಫೆಬ್ರವರಿ 27ರಿಂದ) ಆರಂಭವಾಗಿದ್ದು, ಇಂದು ಬೆಳಿಗ್ಗೆ 8 ಗಂಟೆಯಿಂದಲೇ ಟೋಲ್ ಸಂಗ್ರಹ ಆರಂಭವಾಗಿದೆ. ಮಾರ್ಚ್ 11ರಂದು ಪ್ರಧಾನಿ ನರೇಂದ್ರ ಮೋದಿ ಹತ್ತುಪಥಗಳ ಹೆದ್ದಾರಿಯನ್ನು ಉದ್ಘಾಟಿಸಲಿದ್ದು, ಅದಕ್ಕೂ ಮುನ್ನವೇ ಪ್ರಯಾಣಿಕರು ಟೋಲ್ ಕಟ್ಟಬೇಕಿದೆ.
117 ಕಿ.ಮೀ ಉದ್ದದ ಹೆದ್ದಾರಿಯ ಬೆಂಗಳೂರು–ನಿಡಘಟ್ಟವರೆಗಿನ 56 ಕಿ.ಮೀ. ಉದ್ದದ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯದಿಂದಲೇ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಬೆಂಗಳೂರು ಬಳಿಯ ಕಣಿಮಿಣಿಕೆ ಮತ್ತು ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ.
ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರು ಟೋಲ್ ಶುಲ್ಕ ಕಟ್ಟಿ ಪ್ರಯಾಣಿಸಬೇಕು. ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಬಳಿ ಇರುವ ಟೋಲ್ನಲ್ಲಿ ಮೈಸೂರು ಕಡೆಯಿಂದ ಪ್ರಯಾಣಿಸುವವರು ಟೋಲ್ ಕಟ್ಟಿ ಬೆಂಗಳೂರಿನತ್ತ ಬರಬಹುದು. ಈ ಕೇಂದ್ರಗಳು ತಲಾ 11 ಗೇಟುಗಳನ್ನು ಒಳಗೊಂಡಿದ್ದು, ಫ್ಯಾಶ್ ಟ್ಯಾಗ್ ಸಹಿತ ವಿವಿಧ ಸೌಲಭ್ಯಗಳನ್ನು ಒಳಗೊಳ್ಳಲಿವೆ.ಆರು ಪಥಗಳ ಎಕ್ಸ್ಪ್ರೆಸ್ ವೇನಲ್ಲಿ ಸಂಚರಿಸುವವರಿಗೆ ಈ ಟೋಲ್ ಅನ್ವಯ ಆಗಲಿದೆ. ತಲಾ ಎರಡು ಪಥಗಳ ಸರ್ವೀಸ್ ರಸ್ತೆಯಲ್ಲಿನ ಸಂಚಾರಕ್ಕೆ ಯಾವುದೇ ಟೋಲ್ ಇಲ್ಲ. ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದ್ದು, ನಿಯಮಿತವಾಗಿ ಪ್ರಯಾಣಿಸುವವರಿಗೆ ತಿಂಗಳ ಪಾಸ್ ಸೌಲಭ್ಯ ಇದೆ.
ನಿಮ್ಮ ಕಾಮೆಂಟ್ ಬರೆಯಿರಿ