1 ಕೋಟಿ ರೂ. ಸುಪಾರಿ ನೀಡಿ ತಂದೆಯನ್ನೇ ಕೊಲ್ಲಿಸಿದ್ದ ಮಗ: ಪುತ್ರ ಸೇರಿ ಮೂವರನ್ನು ಬಂಧಿಸಿದ ಪೊಲೀಸರು

ಬೆಂಗಳೂರು:ಕೊಲೆ ಪ್ರಕರಣವೊಂದರಲ್ಲಿ ತಂದೆಯ ಕೊಲೆ ಮಾಡಲು ಒಂದು ಕೋಟಿ ರೂ. ಸುಪಾರಿ ನೀಡಿದ್ದ ಮಗ ಸೇರಿದಂತೆ ಮೂವರು ಆರೋಪಿಗಳನ್ನು ಮಾರತ್‍ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಪಾರಿ ನೀಡಿದ್ದ ಪುತ್ರ ಮಣಿಕಂಠ ಹಾಗೂ ಸುಪಾರಿ ಪಡೆದಿದ್ದ ಶಿವಕುಮಾರ ಹಾಗೂ ನವೀನ ಬಂಧಿತ ಆರೋಪಿಗಳು.ಅಪಾರ್ಟಮೆಂಟ್‍ನ ಪಾರ್ಕಿಂಗ್ ಲಾಟ್‍ನಲ್ಲಿ ಫೆಬ್ರವರಿ 13ರಂದು ನಾರಾಯಣಸ್ವಾಮಿ(70) ಎಂಬವರ ಕೊಲೆ ಆಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಮಾರತಹಳ್ಳಿ ಠಾಣೆ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿದ ನಂತರ ನಾರಾಯಣಸ್ವಾಮಿ ಪುತ್ರ ಮಣಿಕಂಠನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ತಂದೆಯ ಕೊಲೆ ಮಾಡಲು ಒಂದು ಕೋಟಿ ರೂ.ಗೆ ಸುಪಾರಿ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಮುಂಗಡವಾಗಿ ಒಂದು ಲಕ್ಷ ಹಣ ನೀಡಿ ಕೊಲೆ ಮಾಡಿಸಲಾಗಿದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಈತ ನೀಡಿದ ಮಾಹಿತಿ ಆಧಾರದ ಮೇಲೆ ಇನ್ನಿಬ್ಬರು ಆರೋಪಿಗಳಾದ ಶಿವಕುಮಾರ ಹಾಗೂ ನವೀನ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಣಿಕಂಠ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿದ ಆರೋಪ ಹೊತ್ತು ಜೈಲು ಸೇರಿದ್ದ. ಜೈಲಿನಿಂದ ಹೊರಬಂದ ನಂತರ ಎರಡನೇ ವಿವಾಹವಾಗಿದ್ದು, ಒಂದು ಹೆಣ್ಣು ಮಗುವಿದೆ. ಎರಡನೇ ಮದುವೆ ಬಳಿಕವೂ ಮಣಿಕಂಠ ಬೇರೊಬ್ಬ ಮಹಿಳೆ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ ಎಂದು ಹೇಳಲಾಗಿದೆ. ಈ ವಿಚಾರ ಎರಡನೇ ಪತ್ನಿಯೂ ಈತನಿಂದ ದೂರವಾಗಲು ಕಾರಣವಾಗಿ ವಿಚ್ಛೇದನದ ಹಂತದ ವರೆಗೂ ಬಂದುನಿಂತಿತ್ತು. ವಿಚ್ಛೇದನ ಕೊಡುವುದು ಬೇಡ ಎಂದು ಮಾವ ನಾರಾಯಣಸ್ವಾಮಿ ಸೊಸೆಯನ್ನು ಕೇಳಿಕೊಂಡಿದ್ದರು. ಆದರೆ ಮಗ ಮಣಿಕಂಠ ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಹೀಗಾಗಿ ವಿಚ್ಛೇದನ ಬಳಿಕ ಸೊಸೆ ಹಾಗೂ ಮೊಮ್ಮಗಳಿಗೆ ಜೀವನ ನಿರ್ವಹಣೆಗೆ ಕಷ್ಟವಾಗಬಾರದು ಎಂದು ಒಂದು ಸೈಟ್ ಅನ್ನು ಅವರಿಬ್ಬರ ಅವರ ಹೆಸರಿಗೆ ಮಾಡಲು ನಾರಾಯಣಸ್ವಾಮಿ ಮುಂದಾಗಿದ್ದರು. ಆದರೆ ಈ ಕಾರಣಕ್ಕೆ ಮಣಿಕಂಠ ತಂದೆಯ ಜತೆಗೆ ಜಗಳ ತೆಗೆದಿದ್ದ. ಹೀಗಾಗಿ ಇದು ತಂದೆ ಕೊಲೆಗೆ ಮಗ ಮಣಿಕಂಠ ಸುಪಾರಿ ನೀಡಲು ಮುಖ್ಯ ಕಾರಣವಾಗಿರಬಹುದು ಎಂದು ಪೊಲೀಸರು ಪ್ರಕರಣದ ಬಗ್ಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮಾರ್ಚ್‌ 30ರಂದು ಪ್ರಥಮ ಪಿಯುಸಿ ಫಲಿತಾಂಶ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement