ಕಾರವಾರ : ಹೆಜ್ಜೇನು ದಾಳಿಗೆ ಐವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡಿನಲ್ಲಿ ಟಿಬೆಟಿಯನ್ ಕ್ಯಾಂಪ್ ಬಳಿ ನಡೆದಿದೆ.
ಟಿಬೇಟಿಯನ್ ಕ್ಯಾಂಪ್ನ ಶಿಬಿರಕ್ಕೆ ಬಂದ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳು ಗಾಯಗೊಂಡಿದ್ದಾರೆ. ಟಿಬೇಟಿಯನ್ ಕ್ಯಾಂಪ್ನಲ್ಲಿ ದಲಿತ ಸಂಘರ್ಷ ಸಮಿತಿಯು ಮಾರ್ಚ್ 3 ಹಾಗೂ 4ರಂದು ಎರಡು ದಿನಗಳ ಶಿಬಿರ ಹಮ್ಮಿಕೊಂಡಿತ್ತು. ರಾಜ್ಯದ ಪ್ರತಿ ಜಿಲ್ಲೆಯಿಂದ ಸಮಿತಿಯ 10 ಪದಾಧಿಕಾರಿಗಳು ಸೇರಿದಂತೆ 300ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಭಾಗವಹಿಸಿದ್ದರು.
ಶನಿವಾರದ ಅಧ್ಯಯನ ಶಿಬಿರ ಆರಂಭ ಆಗುವ ವೇಳೆ ಹೆಜ್ಜೇನುಗಳು ಒಮ್ಮೆಲೇ ದಾಳಿ ನಡೆಸಿವೆ. ಈ ವೇಳೆ ಐವತ್ತಕ್ಕೂ ಅಧಿಕ ಶಿಬಿರಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ