ರಾಜ್ಯದಲ್ಲಿ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ರದ್ದು: ಹೈಕೋರ್ಟ್ ಆದೇಶ

ಬೆಂಗಳೂರು : ರಾಜ್ಯದಲ್ಲಿ ಮಾರ್ಚ್ 13ರಿಂದ ನಡೆಯಬೇಕಿದ್ದ ಪಬ್ಲಿಕ್ ಪರೀಕ್ಷೆಯನ್ನು ರದ್ದುಗೊಳಿಸಿ ಕರ್ನಾಟ ಹೈಕೋರ್ಟ್ ಆದೇಶ ಮಾಡಿದೆ.
ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರು ಈ ಆದೇಶ ಮಾಡಿದ್ದಾರೆ ಎಂದು ಲೈವ್‌ ಲಾ ವರದಿ ಮಾಡಿದೆ.
ವರದಿ ಪ್ರಕಾರ, ಡಿಸೆಂಬರ್ 12, 2022, ಡಿಸೆಂಬರ್ 13, 2022 ಮತ್ತು ಜನವರಿ 4, 2023 ರಂದು ಹೊರಡಿಸಲಾದ ಸುತ್ತೋಲೆಗಳನ್ನು ಪೀಠವು ರದ್ದುಗೊಳಿಸಿತು. “ರಾಜ್ಯ ಸರ್ಕಾರವು ಕಾರ್ಯವಿಧಾನವನ್ನು ಅನುಸರಿಸಬಹುದು ಮತ್ತು ಮುಂದಿನ ಶೈಕ್ಷಣಿಕ ವರ್ಷಕ್ಕೆ ಅದನ್ನು ಮಾಡಬಹುದು” ಎಂದು ಪೀಠವು ಮೌಖಿಕವಾಗಿ ಹೇಳಿದೆ.
ಶೈಕ್ಷಣಿಕ ವರ್ಷದ ಮಧ್ಯದಲ್ಲಿ 5 ಮತ್ತು 8 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಕುರಿತು ರಾಜ್ಯ ಸರ್ಕಾರವು ಹೊರಡಿಸಿದ ಡಿಸೆಂಬರ್ 12, 2022 ರಲ್ಲಿ ಸುತ್ತೋಲೆ ನೀಡಿತ್ತು. ಇದನ್ನು ಪ್ರಶ್ನಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳು ಮತ್ತು ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆಯು ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿತ್ತು.
ಶಾಲಾ ಮಟ್ಟದ ಮೌಲ್ಯಮಾಪನದ ಬದಲು ರಾಜ್ಯ ಮಟ್ಟದ ‘ಬೋರ್ಡ್ ಪರೀಕ್ಷೆ’ ನಡೆಸುವ ಮೂಲಕ ಮೌಲ್ಯಮಾಪನ ವಿಧಾನವನ್ನು ಬದಲಾಯಿಸುವುದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ಸುತ್ತೋಲೆಯನ್ನು ಪ್ರಶ್ನಿಸಿದ್ದರು. ಸುತ್ತೋಲೆಗಳನ್ನು ಹೊರಡಿಸುವ ಮೊದಲು ಮಧ್ಯಸ್ಥಗಾರರು, ಪೋಷಕರು, ಮಕ್ಕಳು ಅಥವಾ ಶಾಲೆಗಳೊಂದಿಗೆ ಯಾವುದೇ ಚರ್ಚೆಯನ್ನು ಕೈಗೊಂಡಿಲ್ಲ ಎಂದು ವಾದಿಸಲಾಯಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

ಬೋರ್ಡ್ ಪರೀಕ್ಷೆ ಮಾಡುತ್ತಿಲ್ಲ. ಮಕ್ಕಳ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮಾತ್ರ ಅಲ್ಪಸ್ವಲ್ಪ ಬದಲಾವಣೆ ಮಡಲಾಗಿದೆ. ಶೈಕ್ಷಣಿಕ ವರ್ಷದ ಆರಂಭದಿಂದ ಆಯಾ ಶಾಲೆಗಳು ನಡೆಸುವ ನಿರಂತರ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಒಟ್ಟು 100 ಅಂಕಗಳಲ್ಲಿ ಶೇ.80ರಷ್ಟು ಅಂಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಅಂತಿಮ ಮೌಲ್ಯಮಾಪನ ಪ್ರಕ್ರಿಯೆಗೆ ಉಳಿದ ಶೇಕಡಾ 20 ಅಂಕಗಳಿಗೆ ಮಾತ್ರ ರಾಜ್ಯ ಮಟ್ಟದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತದೆ. ಪತ್ರಿಕೆಯ ಮೌಲ್ಯಮಾಪನವನ್ನು ತಾಲೂಕು ಮತ್ತು ಬ್ಲಾಕ್ ಮಟ್ಟದಲ್ಲಿ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ವಾದಿಸಿತ್ತು.
ಪೀಠವು ತನ್ನ ಆದೇಶದಲ್ಲಿ “ಸರ್ಕಾರದ ಯಾವುದೇ ಯೋಜನೆ, ಸುತ್ತೋಲೆ ಅಥವಾ ಕಾನೂನನ್ನು ಜಾರಿಗೊಳಿಸಿದಾಗ ಅದು ಆಡಳಿತದಲ್ಲಿರುವ ಶಾಸನದಿಂದ ಹೊರಹೊಮ್ಮಬೇಕು ಎಂಬುದು ಕಾನೂನಿನ ಮೂಲ ತತ್ವವಾಗಿದೆ” ಎಂದು ಹೇಳಿದೆ. ಇದಲ್ಲದೆ, “ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕೆಲವು ಮೌಲ್ಯಮಾಪನವನ್ನು ಸೂಚಿಸಲು ರಾಜ್ಯ ಸರ್ಕಾರವು ಸುತ್ತೋಲೆಗಳನ್ನು ಹೊರಡಿಸಿದೆ. ಹಾಗೆ ಮಾಡುವಾಗ ರಾಜ್ಯ ಸರ್ಕಾರವು ಕಾಯಿದೆಯ ಅಡಿಯಲ್ಲಿ ನಿಗದಿಪಡಿಸಿದ ವಿಧಾನವನ್ನು ಅನುಸರಿಸಬೇಕು ಎಂದು ಹೇಳಿದೆ.
2022-23ನೇ ಸಾಲಿನಿಂದ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ಪಬ್ಲಿಕ್ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿತ್ತು. ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲು ಸೂಚಿಸಿತ್ತು. ಈ ತಿಂಗಳ 13 ರಿಂದ 18ರ ವರೆಗೆ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಶಿಕ್ಷಣ ಇಲಾಖೆ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement