ಚಂಡೀಗಢ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇಂದು, ಮಂಗಳವಾರ ಪಂಜಾಬ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದು, ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ವಿರುದ್ಧದ ಕಾರ್ಯಾಚರಣೆಯ ಸ್ಥಿತಿಗತಿ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
“ನಿಮ್ಮಲ್ಲಿ 80,000 ಪೊಲೀಸರಿದ್ದಾರೆ. ಅವರು ಏನು ಮಾಡುತ್ತಿದ್ದರು..? ಅಮೃತಪಾಲ್ ಸಿಂಗ್ ಹೇಗೆ ತಪ್ಪಿಸಿಕೊಂಡರು?” ಎಂದು ಹೈಕೋರ್ಟ್ ಪಂಜಾಬ್ ಸರ್ಕಾರವನ್ನು ಕೇಳಿದೆ. ಇದು ರಾಜ್ಯದ ಪೊಲೀಸರ ಗುಪ್ತಚರ ವೈಫಲ್ಯ ಎಂದು ನ್ಯಾಯಾಲಯ ಟೀಕಿಸಿದೆ.
ಖಾಲಿಸ್ತಾನ್ ಪ್ರತಿಪಾದಕ ಮತ್ತು ಆತನ ಸಂಘಟನೆ ‘ವಾರಿಸ್ ಪಂಜಾಬ್ ದೇ’ ಸದಸ್ಯರ ವಿರುದ್ಧ ಪಂಜಾಬ್ ಪೊಲೀಸರು ಕ್ರಮ ಕೈಗೊಂಡಿರುವುದರ ಮಧ್ಯೆ ನ್ಯಾಯಾಲಯದ ಈ ಹೇಳಿಕೆಗಳು ಬಂದಿವೆ.
ಪಂಜಾಬ್ ಪೊಲೀಸರು ಅಮೃತಪಾಲ್ ಸಿಂಗ್ ವಿರುದ್ಧ ಶನಿವಾರದಿಂದ ದೊಡ್ಡ ದಮನ ಕಾರ್ಯಾಚರಣೆ ಪ್ರಾರಂಭಿಸಿದರು ಮತ್ತು ಅಮೃತಪಾಲ್ ಸಿಂಗ್ನ 120 ಬೆಂಬಲಿಗರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆದಾಗ್ಯೂ, ಅಮೃತಪಾಲ್ ಸಿಂಗ್ ಜಲಂಧರ್ ಜಿಲ್ಲೆಯಲ್ಲಿ ತನ್ನ ಕಾರನ್ನು ಪೊಲೀಸರು ತಡೆದಾಗ ಪೋಲೀಸರ ಬಲೆಯಿಂದ ತಪ್ಪಿಸಿಕೊಂಡ. ಖಾಲಿಸ್ತಾನಿ-ಪಾಕಿಸ್ತಾನ ಏಜೆಂಟ್ ಎಂದು ಸರ್ಕಾರ ವಿವರಿಸುವ ಅಮೃತಪಾಲ್ ಸಿಂಗ್, ಜಲಂಧರ್ನಲ್ಲಿ ಶನಿವಾರ ಸಂಜೆ ಮೋಟಾರ್ಸೈಕಲ್ನಲ್ಲಿ ವೇಗವಾಗಿ ಹೋಗುತ್ತಿರುವುದು ಕಂಡುಬಂದಿದೆ.
ಸಿಂಗ್ ಕಳೆದ ಕೆಲವು ವರ್ಷಗಳಿಂದ ಪಂಜಾಬ್ನಲ್ಲಿ ಸಕ್ರಿಯನಾಗಿದ್ದ ಮತ್ತು ಶಸ್ತ್ರಸಜ್ಜಿತ ಬೆಂಬಲಿಗರಿಂದ ಬೆಂಗಾವಲು ಪಡೆಯುತ್ತಿದ್ದ. ಆತ ತಾನು ಖಾಲಿಸ್ತಾನಿ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಅನುಯಾಯಿ ಎಂದು ಹೇಳಿಕೊಳ್ಳುತ್ತಾನೆ ಮತ್ತು ಆತನ ಬೆಂಬಲಿಗರು ಆತನನ್ನು”ಭಿಂದ್ರನ್ವಾಲೆ 2.0″ ಎಂದು ಕರೆಯುತ್ತಾರೆ.
ಇಂದು ಮುಂಜಾನೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ದೇಶದ ವಿರುದ್ಧ ಕೆಲಸ ಮಾಡುವ ಯಾವುದೇ ಶಕ್ತಿಯನ್ನು ನಾವು ಬಿಡುವುದಿಲ್ಲ. ಈ ರಾಜ್ಯದ ಜನರು ಶಾಂತಿ ಮತ್ತು ಪ್ರಗತಿಯನ್ನು ಬಯಸುತ್ತಾರೆ” ಎಂದು ಮಾನ್ ಹೇಳಿದ್ದಾರೆ. ಖಾಲಿಸ್ತಾನಿ ನಾಯಕನನ್ನು ಬಂಧಿಸುವ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಯಾವುದೇ ಹಿಂಸಾಚಾರದ ಘಟನೆ ವರದಿಯಾಗಿಲ್ಲ ಎಂದು ಹೇಳಿದರು.
ಅಮೃತಪಾಲ್ ಸಿಂಗ್ ಮತ್ತು ಆತನ ಬೆಂಬಲಿಗರು ಸಹಾಯಕನೊಬ್ಬನ ಬಿಡುಗಡೆಗಾಗಿ ಕತ್ತಿಗಳು ಮತ್ತು ಬಂದೂಕುಗಳೊಂದಿಗೆ ಪೊಲೀಸ್ ಠಾಣೆಗೆ ನುಗ್ಗಿದ ಒಂದು ತಿಂಗಳ ನಂತರ ಈ ದಮನ ಕಾಋಯ ಆರಂಭವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ