ನವದೆಹಲಿ: ನೇಣು ಹಾಕುವ ಮೂಲಕ ಮರಣದಂಡನೆ ವಿಧಿಸುವ ಪದ್ಧತಿ ಅತಿ ಸೂಕ್ತ ಮತ್ತು ನೋವು ರಹಿತ ವಿಧಾನವೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.
ಗಲ್ಲಿಗೇರಿಸುವ ಸಂದರ್ಭದಲ್ಲಿ ಉಂಟಾಗುವ ಪರಿಣಾಮ ಮತ್ತು ನೋವಿನ ಬಗ್ಗೆ ಯಾವುದೇ ಅಧ್ಯಯನ ನಡೆದಿದೆಯೇ ಮತ್ತು ಇದುವೇ ಪ್ರಸಕ್ತ ಲಭ್ಯ ಇರುವ ಅತ್ಯಂತ ಸೂಕ್ತ ವಿಧಾನ ಆಗಿದೆಯೇ ಎಂಬ ಕುರಿತು ವಿವರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಸೂಚಿಸಿತು.
ನೇಣು ಹಾಕುವಿಕೆಯಿಂದ ಉಂಟಾಗುವ ಸಾವಿನ ಪರಿಣಾಮ, ಅದು ಉಂಟು ಮಾಡುವ ನೋವು, ಹಾಗೂ ಅದರಿಂದ ಸಾವು ಸಂಭವಿಸಲು ತೆಗೆದುಕೊಳ್ಳುವ ಅವಧಿ ಬಗ್ಗೆ ನಮಗೆ ಮಾಹಿತಿ ನೀಡಿ ಎಂದು ಪೀಠ ಅಟಾರ್ನಿ ಜನರಲ್ ಅವರಿಗೆ ಸೂಚಿಸಿತು. ಅತ್ಯುತ್ತಮವಾದ ವಿವರ ಬೇಕಿದೆ. ಪ್ರಸಕ್ತ ವಿಜ್ಞಾನವು ಇದೇ ಇಂದಿನ ಅತ್ಯುತ್ತಮ ವಿಧಾನ ಎನ್ನುತ್ತದೆಯೇ ಅಥವಾ ಹೆಚ್ಚು ಸೂಕ್ತವಾದ ಇನ್ನೊಂದು ವಿಧಾನ ಇದೆಯೇ” ಎಂದು ನ್ಯಾಯಾಲಯ ಕೇಳಿತು.
ಸರ್ಕಾರ ಅಂತಹ ಅಧ್ಯಯನ ಕೈಗೊಳ್ಳದಿದ್ದರೆ ಆ ಅಧ್ಯಯನ ನಡೆಸುವುದಕ್ಕಾಗಿ ದೆಹಲಿ, ಬೆಂಗಳೂರು ಅಥವಾ ಹೈದರಾಬಾದ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಕೆಲವು ವೈದ್ಯರು, ದೇಶದೆಲ್ಲೆಡೆಯ ಗಣ್ಯರು ಹಾಗೂ ಕೆಲ ವೈಜ್ಞಾನಿಕ ತಗಲ್ಲು ಶಿಕ್ಷೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಸಲಹೆಯು ಬಂದಿದ್ದು, ಈ ಶಿಕ್ಷೆಯು “ಕ್ರೂರ, ಅಮಾನವೀಯ ಮತ್ತು ಮಾನವ ಘನತೆಯ ತತ್ವಗಳನ್ನು ಉಲ್ಲಂಘಿಸಿದೆ” ಎಂದು ಅರ್ಜಿದಾರರು ವಾದಿಸಿದರು
ನೇಣಿಗೆ ಬದಲಾಗಿ ವಿದ್ಯುದಾಘಾತ, ಗುಂಡೇಟು ಅಥವಾ ಮಾರಣಾಂತಿಕ ಚುಚ್ಚುಮದ್ದಿನ ಮೂಲಕ ಮರಣ ದಂಡನೆ ವಿಧಿಸುತ್ತಿರುವ ದೇಶಗಳಲ್ಲಿ ಹೆಚ್ಚಳ ಕಂಡುಬಂದಿರುವುದಾಗಿ ಕಾನೂನು ಆಯೋಗದ 187ನೇ ವರದಿಯಲ್ಲಿ ತಿಳಿಸಲಾಗಿದೆ ಎಂದು ಅರ್ಜಿಯಲ್ಲಿ ಸ್ವತಃ ವಾದ ಮಂಡಿಸಿದ ಮಲ್ಹೋತ್ರಾ ಅವರು ನೇಣು ಹಾಕುವ ಪ್ರಕ್ರಿಯೆಯು ಸಂಪೂರ್ಣವಾಗಿ ಕ್ರೂರ ಮತ್ತು ಅಮಾನವೀಯವಾದದ್ದು ಎಂದರು.
ನ್ಯಾ. ನರಸಿಂಹ ಅವರು ಘನತೆಯ ಸಾವು ಮತ್ತು ಸಾಧ್ಯವಾದಷ್ಟು ನೋವು ರಹಿತ ಮರಣ ದೊರೆಯಬೇಕು. ನೇಣು ಹಾಕುವುದು ಹೀಗೆಯೇ ಇರುತ್ತದೆ ಎಂದು ತೋರುತ್ತದೆ. ಚುಚ್ಚುಮದ್ದಿನ ಮೂಲಕ ತಕ್ಷಣ ಸಾವು ಸಂಭವಿಸುವುದಿಲ್ಲ ಎನ್ನುವುದಕ್ಕೆ ಉದಾಹರಣೆಗಳಿವೆ ಎಂದರು.
ಆಗ ಮಲ್ಹೋತ್ರಾ ಅವರು “ಯಾವುದೇ ಪ್ರಕ್ರಿಯೆ ದೋಷರಹಿತವಲ್ಲ. ನೇಣು ಹಾಕುವುದಕ್ಕೂ ಅದನ್ನು ನಾವು ಹೋಲಿಸಬೇಕು” ಎಂದರು.
ಅಮೆರಿಕದಲ್ಲಿ ಮಾರಣಾಂತಿಕ ಚುಚ್ಚುಮದ್ದಿನಿಂದ ಉಂಟಾಗುವ ನೋವಿನ ಬಗ್ಗೆ ಬಲವಾದ ಪುರಾವೆಗಳಿವೆ. ನಾನು ಈ ವಿಚಾರವಾಗಿ ಓದಿದ್ದೇನೆ, ಎಂದು ಸಿಜೆಐ ಹೇಳಿದರು.
ನ್ಯಾಯಾಲಯವು ಪ್ರಕರಣವನ್ನು ಮೇ 2ಕ್ಕೆ ಮುಂದೂಡಿತು. ನೇಣು ಹಾಕುವ ವಿಧಾನ ಇತರೆ ವಿಧಾನಗಳ ಹೋಲಿಕೆಯಲ್ಲಿ ತೃಪ್ತಿಕರವೇ ಅಥವಾ ಮತ್ತೊಂದು ವಿಧಾನ ಅಳವಡಿಸಿಕೊಳ್ಳುವ ಮೂಲಕ ಅದನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕಿದೆ ಎಂದು ಪೀಠ ಹೇಳಿತು
ನಿಮ್ಮ ಕಾಮೆಂಟ್ ಬರೆಯಿರಿ