ನವದೆಹಲಿ: ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಗುರುವಾರ ಬಿಜೆಪಿ ಸೇರ್ಪಡೆಯಾದ ತಮ್ಮ ಪುತ್ರ ಅನಿಲ್ ಅವರ ನಿರ್ಧಾರದ ಬಗ್ಗೆ ದುಃಖ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಇದು “ತಪ್ಪು ನಿರ್ಧಾರ” ಮತ್ತು “ಅತ್ಯಂತ ನೋವಿನ” ಕ್ಷಣ ಎಂದು ಬಣ್ಣಿಸಿದ್ದಾರೆ.
ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಿದ್ಧಾಂತವನ್ನು ತಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರು. ಅವರು ಪ್ರಜಾಪ್ರಭುತ್ವದ ಅಡಿಪಾಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎ.ಕೆ. ಆಂಟನಿ ಅವರು, ಬಿಜೆಪಿ ಮತ್ತು ಆರ್ಎಸ್ಎಸ್ ಅವರ “ಕೋಮುವಾದ ಮತ್ತು ವಿಭಜಕ ಅಜೆಂಡಾ” ಗಾಗಿ ನಾನು ಯಾವಾಗಲೂ ವಿರೋಧಿಸುತ್ತಿದ್ದೆ ಮತ್ತು “ಕೊನೆಯ ಉಸಿರು ಇರುವವರೆಗೂ” ಅದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಮತ್ತು ನೆಹರು-ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ತಾವು, ಭಾರತದ ಏಕತೆಯನ್ನು ಕಾಪಾಡಿದ ಮತ್ತು ಅದರ ವೈವಿಧ್ಯತೆಯನ್ನು ಗೌರವಿಸಿದ ಕೀರ್ತಿ ನೆಹರು-ಗಾಂಧಿ ಕುಟುಂಬಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ರಾಜಕೀಯಕ್ಕೆ ಬರುವಂತೆ ಪ್ರೇರೇಪಿಸಿದ ಇಂದಿರಾಗಾಂಧಿ ಅವರಿಂದ ಪ್ರೇರಣೆ ಪಡೆದಿರುವ ತಾನು ನೀತಿ ವಿಚಾರದಲ್ಲಿ ಒಮ್ಮೆ ಮಾತ್ರ ಭಿನ್ನಾಭಿಪ್ರಾಯ ಹೊಂದಿದ್ದೆ. ನಂತರ ಪಕ್ಷಕ್ಕೆ ಮರಳಿದ್ದು, ಇಂದಿರಾ ಅವರನ್ನು ಇನ್ನಷ್ಟು ಗೌರವಿಸಿದ್ದಾಗಿ ತಿಳಿಸಿದ್ದಾರೆ.
ನಾನು ನನ್ನ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿದ್ದೇನೆ. ಆದರೆ ನಾನು ಇರುವವರೆಗೂ ನಾನು ಕಾಂಗ್ರೆಸ್ಸಿಗನಾಗಿ ಹಾಗೂ ಕಾಂಗ್ರೆಸ್ಗಾಗಿ ಬದುಕುತ್ತೇನೆ” ಎಂದು ಹೇಳಿದರು. ಹಾಗೂ ಇದೇವೇಳೆ ತಮ್ಮ ಮಗನ ಖಾಸಗಿತನವನ್ನು ಗೌರವಿಸುವಂತೆ ಮಾಧ್ಯಮಗಳಿಗೆ ವಿನಂತಿಸಿದರು.
ಕಾಂಗ್ರೆಸ್ನ ವಿವಿಧ ಸಾಮಾಜಿಕ ಉಪಕ್ರಮಗಳು ಮತ್ತು ಡಿಜಿಟಲ್ ಪ್ರಚಾರ ವಿಭಾಗದ ಮುಖ್ಯಸ್ಥರಾಗಿದ್ದ ಅನಿಲ್ ಆಂಟೋನಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವದಿಂದ ಪ್ರಭಾವಿತರಾಗಿರುವುದಾಗಿ ಹೇಳುವ ಮೂಲಕ ಬಿಜೆಪಿಗೆ ಸೇರುವ ನಿರ್ಧಾರವನ್ನು ಹಿಂದಿನ ದಿನ ಘೋಷಿಸಿದ್ದರು. 2002ರ ಗುಜರಾತ್ ಗಲಭೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯ ಕುರಿತು ಬಿಬಿಸಿಯ ಸಾಕ್ಷ್ಯಚಿತ್ರದ ವಿವಾದದ ನಂತರ ಅವರು ಜನವರಿಯಲ್ಲಿ ಕಾಂಗ್ರೆಸ್ ತೊರೆದಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ