ಬೆಂಗಳೂರು: ಪತಿ ಚಾಕಲೇಟ್ ತಂದುಕೊಟ್ಟಿಲ್ಲವೆಂದು ನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವರದಿಯಾಗಿದೆ.
ಸೊಣ್ಣಪ್ಪ ಲೇಔಟ್ ನಿವಾಸಿ ನಂದಿನಿ(30) ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಸೊಣ್ಣಪ್ಪ ಲೇಔಟ್ನಲ್ಲಿ ನಂದಿನಿ ಅವರು ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಪತಿ ಸೆಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿಯು ಎಂದಿನಂತೆ ಕೆಲಸಕ್ಕೆ ಹೋಗುವಾಗ ನಂದಿನಿ, ಚಾಕೋಲೇಟ್ ಅನ್ನು ತರುವಂತೆ ಕೇಳಿದ್ದಾರೆ. ಅದಕ್ಕೆ ಪತಿ ಒಪ್ಪಿಗೆ ಕೊಟ್ಟು ಕೆಲಸಕ್ಕೆ ಹೋಗಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಚಾಕೋಲೇಟ್ ತರಬೇಕು ಎಂದು ನಂದಿನಿ ಹೇಳಿದ್ದು, ಆದರೆ, ಅವರು ಮಧ್ಯಾಹ್ನ ಮನೆಗೆ ಬಂದಿಲ್ಲ. ಕೆಲಸಕ್ಕೆ ಹೋಗಿದ್ದ ಪತಿ ಮಧ್ಯಾಹ್ನವಾದರೂ ಚಾಕಲೇಟ್ ತಂದುಕೊಡದೆ ಇದ್ದುದಕ್ಕೆ ಬೇಸರಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಲ ಸಮಯದ ಬಳಿಕ ಪತಿ ನಂದಿನಿ ಅವರಿಗೆ ಮೊಬೈಲ್ಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ ಎಂದು ಹೇಳಲಾಗಿದೆ.
ನಂತರ ಅವರು ತಕ್ಷಣವೇ ನೆರೆಮನೆಯವರಿಗೆ ಈ ವಿಷಯ ತಿಳಿಸಿದ್ದಾರೆ. ನೆರೆಮನೆ ನಿವಾಸಿ ಮನೆಗೆ ಬಂದು ನೋಡಿದಾಗ ನಂದಿನಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಅವರ ಪತಿಗೆ ಕರೆ ಮಾಡಿದ್ದು, ನೇಣಿನಿಂದ ಅವರನ್ನು ಇಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ ಚಿಕಿತ್ಸೆ ಫಲಿಸದೆ ನಂದಿನಿ ಮೃತಪಟ್ಟಿದ್ದಾರೆ.
ಗಂಡ ಚಾಕೋಲೇಟ್ ತಂದು ಕೊಡದೇ ಇದ್ದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸರ ತನಿಖಾ ವರದಿಗಳು ಖಚಿತವಾಗಿ ಹೇಳಬೇಕಿದೆ.ಈ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ