ಇಂದಿನಿಂದ ರಾಹುಲ್​ ಗಾಂಧಿ ಎರಡು ದಿನಗಳ ರಾಜ್ಯ ಪ್ರವಾಸ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯಕ್ಕೆ ಇಂದಿನಿಂದ (ಏಪ್ರಿಲ್‌ 16) ರಿಂದ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಇಂದು ಭಾನುವಾರ ಬೆಳಗ್ಗೆ 9:30ಕ್ಕೆ ದೆಹಲಿ ಏರ್​​ಪೋರ್ಟ್​ನಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸುವ ಅವರು, ನಂತರ ಮಧ್ಯಾಹ್ನ 12:25ಕ್ಕೆ ಕೋಲಾರಕ್ಕೆ ಆಗಮಿಸಿ, ಜಿಲ್ಲೆಯ ಹೊರವಲಯದ ಟಮಕ ಬಳಿ ನಡೆಯುವ ಜೈ ಭಾರತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 5:30ಕ್ಕೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ಬೀದಿಬದಿ ವ್ಯಾಪಾರಿಗಳು, ಪೌರಕಾರ್ಮಿಕರ ಜತೆ ಸಂವಾದ ನಡೆಸಲಿದ್ದಾರೆ. ಸಂಜೆ 6:45ಕ್ಕೆ ಇಂದಿರಾ ಗಾಂಧಿ ಭವನ ಉದ್ಘಾಟಿಸಲಿದ್ದಾರೆ. ಏಪ್ರಿಲ್‌ 17ರಂದು ರಾಹುಲ್ ಗಾಂಧಿ ಬೀದರ್​ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಭಾಲ್ಕಿ, ಹುಮನಾಬಾದ್​ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
2019ರ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ನಡೆದ ಸಭೆಯಲ್ಲಿ ಮೋದಿ ಸಮುದಾಯ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪದ ಮೇಲೆ ನ್ಯಾಯಾಲಯದಿಂದ ಶಿಕ್ಷೆ ಮತ್ತು ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಅವರು, ಈಗ ಕೋಲಾರದಿಂದಲೇ ಪ್ರಚಾರ ಆರಂಭಿಸಲಿದ್ದಾರೆ. ಅನರ್ಹಗೊಳಿಸಿದ್ದನ್ನೇ ಪ್ರಚಾರದ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಯೋಜಿಸಿದೆ.
ಈ ಮೊದಲು ಏಪ್ರಿಲ್ 5 ರಂದು ಕೋಲಾರದಲ್ಲಿ ಸಮಾವೇಶ ನಡೆಸಲಾಗುವುದು ಹಾಗೂ ರಾಹುಲ್‌ ಗಾಂಧಿ ಅವರು ಎಂದು ಕಾಂಗ್ರೆಸ್ ನಾಯಕರು ದಿನಾಂಕ ನಿಗದಿ ಮಾಡಿದ್ದರು. ಬಳಿಕ ಏಪ್ರಿಲ್ 10 ಕ್ಕೆ ಸಮಾವೇಶ ಮುಂದೂಡಿದ್ದರು. ಇದೀಗ ಎರಡು ಬಾರಿ ದಿನಾಂಕ ಬದಲಿಸುವ ಮೂಲಕ ಕಾಂಗ್ರೆಸ್ ನಾಯಕರು ಏಪ್ರಿಲ್ 16 ರಂದು ಸಮಾವೇಶ ನಡೆಸಲಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement