ಪಕ್ಷಕ್ಕೆ ದ್ರೋಹ ಮಾಡಿದ ಶೆಟ್ಟರ ಅವರನ್ನು ಯಾರೂ ಕ್ಷಮಿಸುವುದಿಲ್ಲ : ಯಡಿಯೂರಪ್ಪ ವಾಗ್ದಾಳಿ

ಬೆಂಗಳೂರು: ಬಿಜೆಪಿ (BJP) ಪಕ್ಷಕ್ಕೆ ದ್ರೋಹ ಮಾಡಿದ ಜಗದೀಶ್ ಶೆಟ್ಟರ ಅವರನ್ನು ಯಾರು ಕ್ಷಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಶೆಟ್ಟರ್ ರಾಜೀನಾಮೆ ನಂತರ ಮಧ್ಯಾಹ್ನ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶೆಟ್ಟರ ಜನಸಂಘದಿಂದಲೂ ಬಿಜೆಪಿ ಜೊತೆಗಿದ್ದರು. ಶೆಟ್ಟರ್ ಅವರನ್ನು ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ, ಮಂತ್ರಿ, ಮುಖ್ಯಮಂತ್ರಿ ಮಾಡಲಾಗಿದೆ. ಬಿ.ಬಿ ಶಿವಪ್ಪರನ್ನು ಎದುರು ಹಾಕಿಕೊಂಡು ಶೆಟ್ಟರ್ ಅವರನ್ನು ವಿಪಕ್ಷ ನಾಯಕರನ್ನಾಗಿ ಮಾಡಿದ್ದೆವು. ನಾನು, ಅನಂತ ಕುಮಾರ್ ಅವರಿಗೆ ಕಾವಲು ಇದ್ದೆವು. ನಮ್ಮ ಜತೆ ಹೆಜ್ಜೆ ಹಾಕುವುದು ಅವರ ಜವಾಬ್ದಾರಿ ಆಗಿತ್ತು. ಮೋದಿಯವರ ಬಗ್ಗೆ ಜಗತ್ತಿನಾದ್ಯಂತ ಗೌರವ ಇದೆ. ಇಂಥ ಸಂದರ್ಭದಲ್ಲಿ ಶೆಟ್ಟರ್ ಹೇಳಿಕೆ ಹಾಗೂ ಅವರ ನಿರ್ಧಾರಗಳು ಅವರು ನಂಬಿದ ವಿಚಾರಕ್ಕೆ ತದ್ವಿರುದ್ಧವಾಗಿದೆ ಎಂದರು.
ಅವರು ಕೇಳಿದ್ದನ್ನು ಎಲ್ಲವೂ ಪಕ್ಷ ನೀಡಿದೆ. ಪಕ್ಷದ ಸಹಕಾರ ಇಲ್ಲದಿದ್ದರೆ ವ್ಯಕ್ತಿ ಎತ್ತರಕ್ಕೆ ಬೆಳೆಯಲ್ಲ. ಪಕ್ಷದ ಸಹಕಾರ ಇಲ್ಲದಿದ್ರೆ ವ್ಯಕ್ತಿ ಸಿಎಂ ಆಗಲಾರ. ಆದರೂ ಶೆಟ್ಟರ್ ಹಠ ಮಾಡಿ ಕಾಂಗ್ರೆಸ್ ಜೊತೆ ಕೈಜೋಡಿಸಲು ಹೋಗಿರುವುದು ಅಕ್ಷಮ್ಯ. ಅವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಇದನ್ನು ಯಾರೂ ಕ್ಷಮಿಸಲ್ಲ ಎಂದು ಕಿಡಿಕಾರಿದರು.
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಹಳೇಬೇರು ಹೊಸ ಚಿಗುರು ಸೇರಿ ಈ ಪಕ್ಷ ಬೆಳೆಸಬೇಕಾಗಿದೆ. ಪಕ್ಷದ ಹೈಕಮಾಂಡ್ ಅವರುಗೆ ನಿಮ್ಮನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಹೇಳಿತ್ತು. ಆದರೂ ಶೆಟ್ಟರ್ ಎಲ್ಲವನ್ನೂ ಧಿಕ್ಕರಿಸಿ ಲಿಂಗಾಯತ ಸಮಾಜ ಒಡೆಯಲು ಪ್ರಯತ್ನಿಸಿದ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ನನಗೆ, ಶೆಟ್ಟರ್‌ಗೆ, ಸವದಿಗೆ, ಈಶ್ವರಪ್ಪಗೆ ಸಮಾನ ಸ್ಥಾನಮಾನ ಕೊಟ್ಟು, ಅನೇಕ ಅವಕಾಶ ಕೊಟ್ಟಿದೆ. ಲಕ್ಷ್ಮಣ ಸವದಿಯವರು ಸೋತರೂ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು. ಸವದಿಯವರನ್ನು ಬಿಜೆಪಿಗೆ ಕರೆತಂದು ಶಾಸಕ, ಮಂತ್ರಿ, ಎಂಎಲ್ಸಿ, ಡಿಸಿಎಂ, ಕೋರ್ ಕಮಿಟಿ ಸದಸ್ಯರಾಗಿ ಮಾಡಿ ಎಲ್ಲ ಸ್ಥಾನಮಾನ ಕೊಟ್ಟಿದ್ದೇವೆ ಎಂದರು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement