ಮಾಜಿ ಸಂಸದನ ಹತ್ಯೆ ಪ್ರಕರಣ : ಆಂಧ್ರ ಸಿಎಂ ಜಗನ್ ಚಿಕ್ಕಪ್ಪ ಭಾಸ್ಕರ ರೆಡ್ಡಿ ಬಂಧಿಸಿದ ಸಿಬಿಐ

ನವದೆಹಲಿ: ಮಾಜಿ ಸಂಸದ ವಿವೇಕಾನಂದ ರೆಡ್ಡಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ. ಎಸ್ ಭಾಸ್ಕರ್ ರೆಡ್ಡಿ ಅವರನ್ನು ಸಿಬಿಐ ಭಾನುವಾರ (ಏಪ್ರಿಲ್ 16) ಬಂಧಿಸಿದೆ.
ಹತ್ಯೆಯಾಗಿದ್ದ ವಿವೇಕಾನಂದ ರೆಡ್ಡಿ ಸಹ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ಹಾಗೂ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜಶೇಖರ್ ರೆಡ್ಡಿ ಅವರ ಸಹೋದರ.
ಕಡಪಾದ ಕಚೇರಿಯಿಂದ ಸಿಬಿಐ ಭಾಸ್ಕರ್ ರೆಡ್ಡಿ ಅವರನ್ನು ಬಂಧಿಸಿದೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120ಬಿ (ಪಿತೂರಿ), 302 (ಕೊಲೆ), 201 (ತನ್ನ ವಿರುದ್ಧದ ಸಾಕ್ಷ್ಯ ನಾಶಪಡಿಸಿದ ಆರೋಪ) ರ ಅಡಿ ಪ್ರಕರಣ ದಾಖಲಾಗಿದೆ.
2019ರ ಮಾರ್ಚ್ 15 ರಂದು ವಿವೇಕಾನಂದ ರೆಡ್ಡಿ ಅವರು ಆಂಧ್ರ ಪ್ರದೇಶದ ಪುಲಿವೆಂದುಲ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲೇ ಹತ್ಯೆಯಾಗಿದ್ದರು. ರಾಜ್ಯ ವಿಧಾನಸಭಾ ಚುನಾವಣೆ ನಡೆಯುವ ಕೆಲದಿನಗಳ ಹಿಂದೆ ಈ ಹತ್ಯೆ ನಡೆದಿತ್ತು. ರಾಜ್ಯದ ಅಪರಾಧ ತನಿಖಾ ದಳದ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿತ್ತು. ನಂತರ 2020ರ ಜುಲೈನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಈ ಕುರಿತು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದರಲ್ಲಿ ಭಾಸ್ಕರ್‌ ರೆಡ್ಡಿ ಅವರನ್ನು ಪ್ರಮುಖ ಆರೋಪಿಯಾಗಿ ಹೆಸರಿಸಿತ್ತು.
ಹತ್ಯೆಯಾದ ವಿವೇಕಾನಂದ ರೆಡ್ಡಿ ಅವರು ಕಡಪಾ ಲೋಕಸಭೆಯಿಂದ ಹಾಲಿ ಸಂಸದನಾಗಿರುವ ಅವಿನಾಶ್ ರೆಡ್ಡಿ (ಬಂಧಿತನಾಗಿರುವ ಭಾಸ್ಕರ್ ರೆಡ್ಡಿ ಅವರ ಪುತ್ರ) ಬದಲಿಗೆ ತನಗೆ ಅಥವಾ ವೈ.ಎಸ್ ಶರ್ಮಿಳಾ (ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ) ಅಥವಾ ವೈ.ಎಸ್ ವಿಜಯಮ್ಮ (ಜಗನ್ ಮೋಹನ್ ರೆಡ್ಡಿ ಅವರ ತಾಯಿ) ಅವರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಬಿಜೆಪಿ ಮೈತ್ರಿಕೂಟ Vs ಕಾಂಗ್ರೆಸ್‌ ಮೈತ್ರಿಕೂಟದ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಯಾರಿಗೆ ಎಷ್ಟು ಸ್ಥಾನಗಳು..? ಎಬಿಪಿ-ಸಿವೋಟರ್ ಸಮೀಕ್ಷೆ ಏನು ಹೇಳುತ್ತದೆ..?

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement