ಬೆಂಗಳೂರು ಸೇರಿದಂತೆ ಬೆಳ್ಳಂಬೆಳಿಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

ಬೆಂಗಳೂರು: ಸೋಮವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ‌ ಮೇಲೆ‌ ಬಿಬಿಎಂಪಿ‌ ನಗರ ಯೋಜನಾ ವಿಭಾಗದ ಯಲಹಂಕ ವಲಯ ಕಚೇರಿಯ ಸಹಾಯಕ ನಿರ್ದೇಶಕ ಗಂಗಾಧರಯ್ಯ ನಿವಾಸದ ಮೇಲೆಯೂ ದಾಳಿ ನಡೆದಿದೆ. ಅವರ ಯಲಹಂಕದ ನಿವಾಸದ ಮೇಲೆ ಸೋಮವಾರ ನಸುಕಿನ ಜಾವವೇ ದಾಳಿ ನಡೆದಿದ್ದು, ಶೋಧ ಕಾರ್ಯ ಮುಂದುವರಿದಿದೆ ಈ ವೇಳೆ ಸಾಕಷ್ಟು ಪ್ರಮಾಣದ ದಾಖಲೆ ಇಲ್ಲದ ನಗದು, ಚಿನ್ನಾಭರಣಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ.
ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್‌ಪಿ ಅಶೋಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಯಲಹಂಕದಲ್ಲಿರುವ ಅವರ ಕಚೇರಿ, ಕುರುಬರಹಳ್ಳಿಯ ನಿವಾಸ, ಮಹಾಲಕ್ಷ್ಮೀ ಲೇಔಟ್‌ನ ಸಂಬಂಧಿಕರ ಮನೆ ಸೇರಿ ಒಟ್ಟು ಮೂರು ಕಡೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಗಂಗಾಧರಯ್ಯ ಅವರ ಕುರುಬರಹಳ್ಳಿ ನಿವಾಸದಲ್ಲಿ ಸಾಕಷ್ಟು ಪ್ರಮಾಣದ ಚಿನ್ನಾಭರಣ ಸಿಕ್ಕಿದ್ದು, ಮನೆಯಲ್ಲಿ ಸಿಕ್ಕ ಚಿನ್ನಾಭರಣ ತೂಕ ಮಾಡಲು ಅಕ್ಕಸಾಲಿಗರು ಕೂಡ ಆಗಮಿಸಿದ್ದಾರೆ ಎಂದು ವರದಿಯಾಗಿದೆ. ವಿದೇಶಿ ಕರೆನ್ಸಿ ಕೂಡ ಮನೆಯಲ್ಲಿ ಪತ್ತೆಯಾಗಿದ್ದು 80 ಲಕ್ಷ ನಗದು ಹಣ, 50 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

ಕೋಲಾರದಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ವರಪ್ಪ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಂಗಾರಪೇಟೆ ಪಟ್ಟಣದಲ್ಲಿ ಮೂರು ಕಡೆ, ಮುಳಬಾಗಿಲು ತಾಲೂಕು ತಿಪ್ಪದೊಡ್ಡಿ ಎರಡು ಕಡೆ ಸೇರಿ ಐದು ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್‌ಪಿ ಉಮೇಶ್‌ ನೇತೃತ್ವದಲ್ಲಿ ನಾಲ್ಕೈದು ಅಧಿಕಾರಿಗಳ ತಂಡ ಬೇರೆ ಬೇರೆ ಕಡೆ ದಾಳಿ ನಡೆಸಿದೆ. ದಾವಣಗೆರೆಯಲ್ಲೂ ಕೂಡ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದಲ್ಲದೆ ಬೀದರ, ಶಿವಮೊಗ್ಗ ಮೊದಲಾದ ಕಡೆಯೂ ಲೋಕಾಯಕ್ತ ಪೊಲೀಸರು ವಿವಿಧ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಎರಡು ಕಡೆ ಲೋಕಾಯುಕ್ತ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ.
ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಐ.ಎಂ.ನಾಗರಾಜ ಹಾಗೂ ಈ ಹಿಂದೆ ಶಿಕಾರಿಪುರ ತಹಶೀಲ್ದಾರ್ ಆಗಿದ್ದು, ಸದ್ಯ ಹೊಳಲ್ಕೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಜೆ.ನಾಗರಾಜ ಅವರ ಶಿವಮೊಗ್ಗ ಹಾಗೂ ಶಿಕಾರಿಪುರ ಮನೆ, ಕಚೇರಿ, ತೋಟದ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement