ಚಿಕ್ಕಮಗಳೂರು: ಇಂದಿರಾಗಾಂಧಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಶೃಂಗೇರಿ ಮಠಕ್ಕೆ ಬುಧವಾರ ಭೇಟಿ ನೀಡಿದ್ದಾರೆ. ಮಠಕ್ಕೆ ಭೇಟಿ ನೀಡಿ ಶಾರದಾಂಬೆ ಹಾಗೂ ಗುರುಗಳ ದರ್ಶನ ಪಡೆದಿರುವ ಅವರು ನರಸಿಂಹವನದಲ್ಲಿರುವ ಕಿರಿಯ ಶ್ರೀಗಳಾದ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಶ್ರೀಗಳು ಪ್ರಿಯಾಂಕಾ ಅವರಿಗೆ ಶಾರದಾಂಬೆಯ ಮೂರ್ತಿ ನೀಡಿ ಶುಭ ಹಾರೈಸಿದ್ದಾರೆ.
ಶ್ರೀಗಳಿಂದ ಆಶೀರ್ವಾದ ಪಡೆದ ಪ್ರಿಯಾಂಕಾ ಗಾಂಧಿ, ಶೃಂಗೇರಿ ದೇವಾಲಯದ ಮಠದ ಆನೆಗಳಾದ ಜಯಲಕ್ಷ್ಮಿ ಮತ್ತು ಶ್ರೀಲಕ್ಷ್ಮೀಗೆ ಸೇಬು, ಬಾಳೆಹಣ್ಣು ತಿನ್ನಿಸಿದರು. ನಂತರ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೂ ಭೇಟಿ ನೀಡಿದರು.
ಇದೇ ವೇಳೆ ಮಾತನಾಡಿದ ಅವರು ‘ತಂದೆ ದಿವಂಗತ ರಾಜೀವ ಗಾಂಧಿ ಅವರೊಂದಿಗೆ ಶಾರದ ಪೀಠಕ್ಕೆ ಈ ಮೊದಲು ಭೇಟಿ ನೀಡಿದ್ದೆ, ಇದೊಂದು ಪುಣ್ಯ ಸ್ಥಳ. ಇಂದಿನ ಭೇಟಿಯಿಂದ ಸಂತಸವಾಯಿತು ಎಂದು ಹೇಳಿದ್ದಾರೆ. ನಮ್ಮ ಕುಟುಂಬಕ್ಕೂ ಚಿಕ್ಕಮಗಳೂರಿಗೆ ಅವಿನಾಭಾವ ಸಂಬಂಧ ಇದೆ. ಈಗಲೂ ನಮ್ಮ ಕುಟುಂಬ ಸಂಕಷ್ಟ ಸಮಯ ಅನುಭವಿಸುತ್ತಿದೆ. ಅಂದು ಸಂಕಷ್ಟದಲ್ಲಿದ್ದಾಗ ಚಿಕ್ಕಮಗಳೂರು ಜನರು ಕೈ ಹಿಡಿದಿದರು. ಅಜ್ಜಿ ಬಂದಾಗ ಹೇಗಿತ್ತು ಅದೇ ರೀತಿ ಸೌಂದರ್ಯ ಈಗಲೂ ಇದೆ, ಚಿಕ್ಕಮಗಳೂರನ್ನು ಜೀವಮಾನದಲ್ಲಿ ನಾನು ಯಾವತ್ತು ಮರೆಯಲ್ಲ ಎಂದು ಹೇಳಿದರು.
ಗಾಂಧಿ ಕುಟುಂಬ ಶೃಂಗೇರಿ ಶಾರದಾಂಬಾ ದೇವಸ್ಥಾನದ ಮೇಲೆ ವಿಶೇಷ ನಂಬಿಕೆ ಹೊಂದಿದ್ದು, ಇಂದಿರಾ ಗಾಂಧಿ, ರಾಜೀವ ಗಾಂಧಿ, ರಾಹುಲ್ ಗಾಂಧಿ ಕೂಡ ದೇವಾಲಯಕ್ಕೆ ಭೇಟಿ ನೀಡಿದ್ದರು. 1978ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಇಂದಿರಾ ಗಾಂಧಿ ಶೃಂಗೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.
2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಶೃಂಗೇರಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ಅದರಂತೆ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಪ್ರಿಯಾಂಕಾ ಗಾಂಧಿ ಶೃಂಗೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಚಿಕ್ಕಮಗಳೂರಿನಲ್ಲಿ ಪ್ರಿಯಾಂಕಾ ಗಾಂಧಿ ಅವರು ಓಡಾಟ ನಡೆಸಿದ್ದಾರೆ.
ಬಾಳೇಹೊನ್ನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಪರ ಮತಯಾಚನೆ ಮಾಡಿದರು. ಬಾಳೆಹೊನ್ನೂರಿನಲ್ಲಿ ನಡೆದ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಭಾಷಣದ ವೇಳೆ ಮಳೆಜಬ ಬಂದಿದ್ದು, ಜನರು ಮಳೆ ಲೆಕ್ಕಿಸದೇ ಭಾಷಣ ಕೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ