ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

ಬೆಂಗಳೂರು : ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರನ್ನು ನ್ಯಾಯಾಲಯ ಮೇ ೮ರ ವರೆಗೆ ಸಿಐಡಿ ಎಸ್‌ಐಟಿ (ವಿಶೇಷ ತನಿಖಾ ತಂಡದ) ವಶಕ್ಕೆ ನೀಡಿದೆ.
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪುತ್ರ ಹಾಗೂ ಶಾಸಕ ರೇವಣ್ಣ ಅವರನ್ನು ಕೋರಮಂಗಲದಲ್ಲಿರುವ ಹದಿನೇಳನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ ಎಂ ಕಟ್ಟೀಮನಿ ಅವರ ನಿವಾಸದಲ್ಲಿ ಎಸ್‌ಐಟಿ ಹಾಜರುಪಡಿಸಿತು. ವಿಚಾರಣೆ ವೇಳೆ ಐದು ದಿನಗಳ ಕಾಲ ರೇವಣ್ಣ ಅವರನ್ನು ವಶಕ್ಕೆ ನೀಡಬೇಕೆಂದು ಕೋರಿ ಎಸ್‌ಐಟಿ ರಿಮ್ಯಾಂಡ್‌ ಅರ್ಜಿ ಸಲ್ಲಿಸಿತು. “ಇದೊಂದು ಗಂಭೀರ ಪ್ರಕರಣ. ರೇವಣ್ಣ ಅವರು ಮಾಜಿ ಸಚಿವರಾಗಿದ್ದು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ” ಎಂದು ವಾದಿಸಿತು.

ರೇವಣ್ಣ ಪರ ವಕೀಲರ ಮೂರ್ತಿ ಡಿ ನಾಯಕ್‌ ಅವರು ಮಹಿಳೆ ಅಪಹರಣ ಪ್ರಕರಣಕ್ಕೂ ರೇವಣ್ಣ ಅವರಿಗೂ ಯಾವುದೇ ಸಂಬಂಧ ಇಲ್ಲ. ಸಂತ್ರಸ್ತೆ ಈಗಾಗಲೇ ದೊರೆತಿದ್ದಾರೆ. ರೇವಣ್ಣನವರ ಪಾತ್ರದ ಬಗ್ಗೆ ಎಸ್‌ಐಟಿ ಕೂಡ ಏನನ್ನೂ ತಿಳಿಸಿಲ್ಲ. ಯಾವುದೇ ಸಾಕ್ಷ್ಯ ನಾಶ ಮಾಡುವುದಿಲ್ಲ ಎಂದರು.
ವಾದ ಆಲಿಸಿದ ನ್ಯಾಯಾಧೀಶರು ಮೇ 8ರವರೆಗೆ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರು ಸಲ್ಲಿಸಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ದೇವೇಗೌಡರ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ಬಂಧಿಸಲಾಗಿತ್ತು.
ಶನಿವಾರ ಎಸ್‌ಐಟಿ ಕಚೇರಿಯಲ್ಲಿದ್ದ ಅವರನ್ನು ಭಾನುವಾರ ಸಂಜೆ ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement