ನವದೆಹಲಿ : ದೆಹಲಿಯ ತಿಹಾರ್ ಜೈಲಿನೊಳಗೆ ನಡೆದ ಗ್ಯಾಂಗ್ವಾರ್ನಲ್ಲಿ ಕುಖ್ಯಾತ ಗ್ಯಾಂಗ್ಸ್ಟರ್ ಟಿಲ್ಲು ತಾಜ್ಪುರಿಯಾನನ್ನು ಮತ್ತೊಂದು ಗ್ಯಾಂಗ್ ಸದಸ್ಯರು ಮಂಗಳವಾರ ಬೆಳಿಗ್ಗೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆತನ ದೇಹದ ಮೇಲೆ 92 ಗಾಯದ ಗುರುತುಗಳಿವೆ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ತಿಳಿಸಿದೆ.
ಟಿಲ್ಲು ತಾಜ್ಪುರಿಯಾ ಅಲಿಯಾಸ್ ಸುನೀಲ್ ಮಾನ್ ಎಂಬಾತನ ಮೇಲೆ ಗ್ಯಾಂಗ್ಸ್ಟರ್ ಯೋಗೇಶ ತುಂಡಾ ಹಾಗೂ ಆತನ ಸಹಚರರು ಹರಿತ ಆಯುಧಗಳಿಂದ ಭೀಕರವಾಗಿ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಮತ್ತೊಬ್ಬ ಕೈದಿ ರೋಹಿತ್ ಎಂಬಾತ ಕೂಡ ದಾಳಿಯಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗಿದೆ.
ಯೋಗೇಶ್ ತುಂಡಾ, ದೀಪಲ್ ತೀತರ್, ರಿಯಾಜ್ ಖಾನ್ ಮತ್ತು ರಾಜೇಶ್ ಎಂನ ಕೈದಿಗಳು ಕಾರಾಗೃಹದ ಮೊದಲ ಮಹಡಿಯಲ್ಲಿನ ತಮ್ಮ ವಾರ್ಡ್ನ ಕಬ್ಬಿಣದ ಕಂಬಿಗಳನ್ನು ಕಿತ್ತಿದ್ದರು. ಕೆಳ ಮಹಡಿಯಲ್ಲಿ ಕುಳಿತಿದ್ದ ಟಿಲ್ಲು ಮೇಲೆ ಆ ಕಬ್ಬಿಣದ ರಾಡುಗಳಿಂದ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಟಿಲ್ಲುವಿನ ಎದುರಾಳಿ ಗ್ಯಾಂಗ್ನ ನಾಲ್ವರು ಬೆಡ್ಶೀಟ್ ಬಳಸಿ ಕೆಳಮಹಡಿಗೆ ಇಳಿದಿದ್ದರು ಎಂದು ಹೇಳಲಾಗಿದೆ.
ಕೋರ್ಟ್ ಶೂಟೌಟ್ನಲ್ಲಿ ಪ್ರಮುಖ ಆರೋಪಿ….
2021ರಲ್ಲಿ ರೋಹಿಣಿ ಕೋರ್ಟ್ನಲ್ಲಿ ನಡೆದ ಶೂಟೌಟ್ನಲ್ಲಿ ಗ್ಯಾಂಗ್ಸ್ಟರ್ ಜಿತೇಂದರ್ ಗೋಗಿಯನ್ನು ಕೊಂದಿದ್ದ ಪ್ರಕರಣದಲ್ಲಿ ಟಿಲ್ಲು ಪ್ರಮುಖ ಸಂಚುಕೋರನಾಗಿದ್ದ.
2021ರ ಸೆಪ್ಟೆಂಬರ್ 24ರಂದು ವಕೀಲರಂತೆ ಉಡುಪು ಧರಿಸಿ ರೋಹಿಣಿ ಕೋರ್ಟ್ಗೆ ನುಗ್ಗಿದ್ದ ಟಿಲ್ಲು ಗ್ಯಾಂಗ್ನ ಇಬ್ಬರು ಸದಸ್ಯರು, ಪೊಲೀಸರ ಕಾವಲಿನಲ್ಲಿ ತೆರಳುತ್ತಿದ್ದ ಜಿತೇಂದರ್ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಬಳಿಕ ಪೊಲೀಸರು ಪ್ರತಿಯಾಗಿ ನಡೆಸಿದ್ದ ಗುಂಡಿನ ದಾಳಿಗೆ ಅವರಿಬ್ಬರೂ ಸಾವಿಗೀಡಾಗಿದ್ದರು.
ಜಿತೇಂದರ್ ಗೋಗಿಯ ಹತ್ಯೆಗೆ ಪ್ರತೀಕಾರವಾಗಿ ಟಿಲ್ಲುವನ್ನು ಕೊಂದಿರಬಹುದು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಟಿಲ್ಲು ಹತ್ಯೆಯಲ್ಲಿ ರೋಹಿತ್ ಮೋಯಿ ಕೈವಾಡದ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ರೋಹಿತ್ ಮೋಯಿ, ಕೊಲೆಯಾದ ಗೋಗಿಯ ಬಲಗೈ ಬಂಟನಾಗಿದ್ದ. ಗೋಗಿ ಗ್ಯಾಂಗ್ನ ಅನೇಕ ಗ್ಯಾಂಗ್ಸ್ಟರ್ಗಳು ತಿಹಾರ ಜೈಲಿನಲ್ಲಿದ್ದಾರೆ. ಗೋಗಿಯ ಗ್ಯಾಂಗ್ ಲಾರೆನ್ಸ್ ಬಿಶ್ನೋಯಿ ಗ್ಯಾಂಗ್ ಪರವಾಗಿ ಕೆಲಸ ಮಾಡುತ್ತದೆ ಎಂದೂ ಹೇಳಲಾಗುತ್ತಿದೆ.
ಗೋಗಿ ಗ್ಯಾಂಗ್ನ ನೇತೃತ್ವವನ್ನು ದೀಪಕ್ ಬಾಕ್ಸರ್ ವಹಿಸಿದ್ದ. ಈತನನ್ನು ದಿಲ್ಲಿ ಪೊಲೀಸ್ ವಿಶೇಷ ಘಟಕ ಮೆಕ್ಸಿಕೋದಲ್ಲಿ ಬಂಧಿಸಿತ್ತು. ಪ್ರಸ್ತುತ ಆತ ಕೂಡ ತಿಹಾರ್ ಜೈಲಿನಲ್ಲಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ