ಕೆಮ್ಮಿನ ಸಿರಪ್‌ಗಳ ರಫ್ತಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮ : ಜೂನ್ 1ರಿಂದ ಜಾರಿ

ನವದೆಹಲಿ: ಕೆಮ್ಮಿನ ಸಿರಪ್‌ಗಳ ರಫ್ತಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಕೆಮ್ಮಿನ ಸಿರಪ್ ರಫ್ತುದಾರರು ತಮ್ಮ ಉತ್ಪನ್ನಗಳನ್ನು ವಿದೇಶಗಳಿಗೆ ಕಳುಹಿಸಲು ಶಿಪ್‌ಮೆಂಟ್ ಮಾಡುವುದಕ್ಕೂ ಮುನ್ನ ಅನುಮೋದನೆ ಪಡೆಯಲು ನಿರ್ದಿಷ್ಟ ಸರ್ಕಾರಿ ಲ್ಯಾಬೊರೇಟರಿಗಳಲ್ಲಿ ಅವುಗಳನ್ನು ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯವಾಗಲಿದೆ. ಜೂನ್ 1ರಿಂದ ಈ ನಿಯಮ ಜಾರಿಯಾಗಲಿದೆ.
ಭಾರತೀಯ ಕಂಪನಿಗಳಿಂದ ಪೂರೈಕೆಯಾದ ಕೆಮ್ಮಿನ ಔಷಧಗಳು ವಿವಿಧ ದೇಶಗಳಲ್ಲಿ ಮಕ್ಕಳ ಸಾವು ಹಾಗೂ ಅನಾರೋಗ್ಯಕ್ಕೆ ಕಾರಣವಾಗಿರುವ ವರದಿಗಳು ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಕುರಿತಾದ ಕಳವಳ ಮೂಡಿಸಿದ ನಂತರ ಕೇಂದ್ರ ಸರ್ಕಾರದ ಈ ಸೂಚನೆ ಬಂದಿದೆ.
“ಕೆಮ್ಮಿನ ಸಿರಪ್‌ಗಳ ರಫ್ತು ನಡೆಸಲು, ಜೂನ್ 1, 2023ರಿಂದ ಅನ್ವಯವಾಗುವಂತೆ ಯಾವುದೇ ಪ್ರಯೋಗಾಲಯ ಹೊರಡಿಸುವ ವಿಶ್ಲೇಷಣಾ ಪ್ರಮಾಣಪತ್ರದೊಂದಿಗೆ ರಫ್ತು ಮಾದರಿಗಳ ಪರೀಕ್ಷೆಯ ಆಧಾರದಲ್ಲಿ ಅನುಮತಿ ನೀಡಲಾಗುತ್ತದೆ” ಎಂದು ವಿದೇಶಿ ವ್ಯಾಪಾರ ಪ್ರಧಾನ ನಿರ್ದೇಶನಾಲಯ (DGFT) ಸೋಮವಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಇಂಡಿಯನ್ ಫಾರ್ಮಾಕೋಪೋಯಾ ಕಮಿಷನ್, ಪ್ರಾದೇಶಿಕ ಔಷಧ ಪರೀಕ್ಷಾ ಲ್ಯಾಬ್ (ಆರ್‌ಡಿಟಿಎಲ್- ಚಂಡೀಗಡ), ಕೇಂದ್ರ ಔಷಧ ಲ್ಯಾಬ್ (ಸಿಡಿಎಲ್- ಕೋಲ್ಕತ್ತಾ), ಕೇಂದ್ರ ಔಷಧ ಪರೀಕ್ಷಾ ಲ್ಯಾಬ್ (ಸಿಡಿಟಿಎಲ್- ಹೈದರಾಬಾದ್, ಮುಂಬಯಿ), ಆರ್‌ಡಿಟಿಎಲ್ (ಗುವಾಹತಿ) ಮತ್ತು ಎನ್‌ಎಬಿಎಲ್ (ಪರೀಕ್ಷಾ ಮತ್ತು ಮಾಪನಾಂಕ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತಾ ಮಂಡಳಿ) ಮಾನ್ಯತೆ ಹೊಂದಿರುವ ರಾಜ್ಯ ಸರ್ಕಾರಗಳ ಔಷಧ ಪರೀಕ್ಷಾ ಲ್ಯಾಬ್‌ಗಳಲ್ಲಿ ಈ ಪರೀಕ್ಷೆಗಳನ್ನು ನಡೆಸಬೇಕು.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

ಭಾರತದಿಂದ ರಫ್ತಾಗುವ ವಿವಿಧ ಔಷಧ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಭರವಸೆ ಮೂಡಿಸುವ ಭಾರತದ ಬದ್ಧತೆಯನ್ನು ಮರು ಸ್ಥಾಪಿಸಲು ಕೇಂದ್ರ ಸರ್ಕಾರವು ಕೆಮ್ಮಿನ ಸಿರಪ್‌ಗಳನ್ನು ರಫ್ತು ಮಾಡುವುದಕ್ಕೂ ಮುನ್ನ ಗುಣಮಟ್ಟ ಪರೀಕ್ಷೆಯ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ತಮಿಳುನಾಡು ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಕಂಪೆನಿಯು ತನ್ನ ಕಣ್ಣಿನ ಔಷಧಗಳ ಸಂಪೂರ್ಣ ಉತ್ಪನ್ನಗಳನ್ನು ವಿದೇಶಗಳಿಂದ ವಾಪಸ್ ತರಿಸಿಕೊಂಡಿತ್ತು. ಅದಕ್ಕೂ ಮುನ್ನ ಭಾರತದಲ್ಲಿ ತಯಾರಾದ ಕೆಮ್ಮಿನ ಸಿರಪ್‌ಗಳು ಗಾಂಬಿಯಾದಲ್ಲಿ 66 ಹಾಗೂ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾಗಿವೆ ಎಂದು ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆ ವರದಿಗಳು ಆರೋಪಿಸಿದ್ದವು.
ಭಾರತವು ಜಾಗತಿಕವಾಗಿ ಜೆನೆರಿಕ್ ಔಷಧಗಳ ಅತಿ ದೊಡ್ಡ ಪೂರೈಕೆದಾರನಾಗಿದ್ದು, ವಿವಿಧ ಲಸಿಕೆಗಳಿಗೆ ಜಾಗತಿಕ ಬೇಡಿಕೆಯ 50 ಪ್ರತಿಶತಕ್ಕೂ ಹೆಚ್ಚು ಪೂರೈಕೆಯನ್ನು ಮಾಡುತ್ತದೆ, ಅಮೆರಿಕದಲ್ಲಿ ಸುಮಾರು 40 ಪ್ರತಿಶತದಷ್ಟು ಜೆನೆರಿಕ್ ಬೇಡಿಕೆ ಮತ್ತು ಬ್ರಿಟನ್‌ನಲ್ಲಿ ಎಲ್ಲಾ ಔಷಧಿಗಳ ಸುಮಾರು 25 ಪ್ರತಿಶತವನ್ನು ಪೂರೈಸುತ್ತದೆ.
ಜಾಗತಿಕವಾಗಿ, ಭಾರತವು ಔಷಧೀಯ ಉತ್ಪಾದನೆಯಲ್ಲಿ ಪರಿಮಾಣದಲ್ಲಿ ಮೂರನೇ ಸ್ಥಾನದಲ್ಲಿದೆ ಮತ್ತು ಗುಣಮಟ್ಟದಲ್ಲಿ 14 ನೇ ಸ್ಥಾನದಲ್ಲಿದೆ.
ಉದ್ಯಮವು 3,000 ಔಷಧ ಕಂಪನಿಗಳ ಜಾಲವನ್ನು ಮತ್ತು ಸುಮಾರು 10,500 ಉತ್ಪಾದನಾ ಘಟಕಗಳನ್ನು ಒಳಗೊಂಡಿದೆ. ಇದು ಪ್ರಪಂಚದಾದ್ಯಂತ ಉತ್ತಮ ಗುಣಮಟ್ಟದ, ಕೈಗೆಟುಕುವ ದರದಲ್ಲಿ ಔಷಧಿಗಳ ಲಭ್ಯತೆ ಮತ್ತು ಪೂರೈಕೆಯನ್ನು ಸುಗಮಗೊಳಿಸುತ್ತದೆ. ಜಾಗತಿಕ ಔಷಧೀಯ ವಲಯದಲ್ಲಿ ಭಾರತವು ಪ್ರಮುಖ ಸ್ಥಾನವನ್ನು ಹೊಂದಿದೆ.
ಪ್ರಸ್ತುತವಾಗಿ ಏಡ್ಸ್ ವಿರುದ್ಧ ಹೋರಾಡಲು ಜಾಗತಿಕವಾಗಿ ಬಳಸಲಾಗುವ ಆಂಟಿರೆಟ್ರೋವೈರಲ್ ಔಷಧಗಳಲ್ಲಿ 80 ಪ್ರತಿಶತಕ್ಕೂ ಹೆಚ್ಚು ಔಷಧವನ್ನು ಭಾರತೀಯ ಔಷಧೀಯ ಸಂಸ್ಥೆಗಳಿಂದ ಸರಬರಾಜು ಮಾಡಲಾಗುತ್ತಿದೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement