ಈ ವರ್ಷ ಬೆಳಗಾವಿ ಕೇಂದ್ರ ಸ್ಥಾನವಾಗಿಸಿಕೊಂಡು ಭಗವದ್ಗೀತೆ ಅಭಿಯಾನ : ಸ್ವರ್ಣವಲ್ಲಿ ಶ್ರೀಗಳು

ಬೆಳಗಾವಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ವತಿಯಿಂದ ಪ್ರತಿ ವರ್ಷ ನಡೆಸಲಾಗುವ ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನವನ್ನು ಈ ವರ್ಷ ಬೆಳಗಾವಿಯನ್ನು ಕೇಂದ್ರ ಸ್ಥಾನವಾಗಿಸಿಕೊಂಡು ನಡೆಸಲಾಗುವುದು ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಈ ಕುರಿತು ಪೂರ್ವಭಾವಿ ಸಭೆ ನಡೆಸಿದ ನಂತರ ಈ ವಿಷಯವನ್ನು ಅವರು ಪ್ರಕಟಿಸಿದರು. ನವೆಂಬರ್ 21ರಿಂದ ಡಿಸೆಂಬರ್ 22ರ ವರೆಗೆ ಭಗವದ್ಗೀತೆ ಅಭಿಯಾನ ನಡೆಯಲಿದೆ. ಡಿಸೆಂಬರ್‌ 23ರಂದು ಮಹಾಸಮರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಸ್ವರ್ಣವಲ್ಲಿ ಮಠದಿಂದ ಭಗವದ್ಗೀತೆ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಮತ್ತು ಯುವ ಸಮೂಹದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತಿದೆ. ಇದರ ಪರಿಣಾಮವಾಗಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಕೈದಿಗಳೂ ಸರ್ಕಾರ ಕ್ಷಮಾಪಣೆ ನೀಡುವ ಮಟ್ಟಕ್ಕೆ ಬದಲಾಗಿರುವುದನ್ನು ಗಮನಿಸಿದ್ದೇವೆ. ಮನಸ್ಸಿನ ದೌರ್ಬಲ್ಯಗಳನ್ನು ಹೋಗಲಾಡಿಸಿ, ವ್ಯಕ್ತಿತ್ವವನ್ನು ರೂಪಿಸುವ ಕೆಲಸ ಇದರಿಂದ ಆಗುತ್ತಿದೆ ಎಂದು ಸ್ವಾಮಿಗಳು ಹೇಳಿದರು.
ಭಗವದ್ಗೀತೆ ಅಭಿಯಾನದ ಪೂರ್ವಸಿದ್ಧತೆಗೆ ವಿವಿಧ ಸಮಿತಿಗಳನ್ನು ಈ ಸಂದರ್ಭದಲ್ಲಿ ರಚಿಸಲಾಯಿತು. ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಉದ್ಯಮಿ ಗೋಪಾಲ ಜಿನಗೌಡ, ಎಂ.ಬಿ.ಜಿರಲಿ, ಶ್ರೀನಿವಾಸ ಶಿವಣಗಿ, ಎಸ್.ಆರ್.ಹೆಗಡೆ, ಕಾಶಿನಾಥ ಬಿರಾದಾರ, ಮುಕುಲ ಜೋಶಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ: ಸಿಎಂ ಸಿದ್ದರಾಮಯ್ಯ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement