ನವದೆಹಲಿ: ಮಂಗಳವಾರ ಬೆಳಗ್ಗೆ ಗಾಜಿಯಾಬಾದ್ ಬಳಿ ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇಯಲ್ಲಿ ಶಾಲಾ ಬಸ್ ಮತ್ತು ಎಸ್ಯುವಿ ಜೀಪ್ ನಡುವೆ ಡಿಕ್ಕಿ ಸಂಭವಿಸಿ ಆರು ಜನರು ಸಾವಿಗೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ತನ್ನ ಮಾರ್ಗದಲ್ಲಿ ಬರದೆ ವಿರುದ್ಧ ಮಾರ್ಗದಲ್ಲಿ ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದವರು ಒಂದೇ ಕುಟುಂಬದ ಸದಸ್ಯರಾಗಿದ್ದಾರೆ ಹಾಗೂ ಬಸ್ನಲ್ಲಿ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎಡಿಸಿಪಿ (ಟ್ರಾಫಿಕ್) ಆರ್.ಕೆ. ಕುಶ್ವಾಹಾ ಅವರು, “ದೆಹಲಿಯ ಗಾಜಿಪುರದಿಂದ ಬಸ್ ಚಾಲಕ ಸರಿಯಾದ ದಿಕ್ಕಿನಲ್ಲಿ ಬಸ್ ಚಲಾಯಿಸದೆ ಬರುತ್ತಿದ್ದ ತಪ್ಪಾದ ಮಾರ್ಗದಲ್ಲಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದ. ಎಸ್ಯುವಿ ಜೀಪ್ ಮೀರತ್ನ ದಿಕ್ಕಿನಿಂದ ಬರುತ್ತಿದ್ದು, ಗುರುಗ್ರಾಮದ ಕಡೆಗೆ ಹೋಗುತ್ತಿತ್ತು. ಬಸ್ ಚಾಲಕನ ತಪ್ಪಿನಿಂದಾಗಿ ಈ ಅಪಘಾತ ಸಂಭವಿಸಿದೆ. ಆತ ದೆಹಲಿಯಿಂದ ಸರಿಯಾದ ಮಾರ್ಗದಲ್ಲಿ ಬರದೆ ವಿರುದ್ಧ ಮಾರ್ಗದಲ್ಲಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದ. ಆತನನ್ನು ಬಂಧಿಸಲಾಗಿದೆ. ಕಾರಿನಲ್ಲಿದ್ದವರು ಒಂದೇ ಕುಟುಂಬದವರು ಎಂದು ತಿಳಿಸಿದ್ದಾರೆ.
ಈ ಘಟನೆಯ ಸಿಸಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು, ಅದರಲ್ಲಿ ಶಾಲಾ ಬಸ್ಸು ತಪ್ಪಾದ ಮಾರ್ಗದಲ್ಲಿ ವೇಗವಾಗಿಬರುತ್ತಿರುವುದು ಕಂಡುಬಂದಿದೆ. , ಕಪ್ಪು ಬಣ್ಣದ ಜೀಪ್ ಚಾಲಕ ಮುಖಾಮುಖಿ ಡಿಕ್ಕಿ ಹೊಡೆಯುವುದನ್ನು ನೋಡಬಹುದು. “ಡಿಕ್ಕಿಯು ಎಷ್ಟು ಪ್ರಬಲವಾಗಿತ್ತೆಂದರೆ ಕಾರಿನ ಬಾಗಿಲುಗಳನ್ನು ಕತ್ತರಿಸಿ ಮೃತ ದೇಹಗಳನ್ನು ಹೊರತೆಗೆಯಲಾಯಿತು” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘಟನೆ ಕುರಿತು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ನೆರವು ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ