ನವದೆಹಲಿ: ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಬಗ್ಗೆ ಅನುಚಿತವಾದ ಕಾಮೆಂಟ್ ಮಾಡಿದ್ದಕ್ಕಾಗಿ ತಮ್ಮ ಸಂಸ್ಥೆಯ ಸನ್ಯಾಸಿಗಳಲ್ಲಿ ಒಬ್ಬರಾದ ಅಮೋಘ ಲೀಲಾ ದಾಸ್ ಅವರನ್ನು ನಿಷೇಧಿಸಿರುವುದಾಗಿ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಮಂಗಳವಾರ ತಿಳಿಸಿದೆ.
ಅಮೋಘ್ ಲೀಲಾ ದಾಸ್ ಆಧ್ಯಾತ್ಮಿಕ ಪ್ರೇರಕ ಭಾಷಣಕಾರರಾಗಿದ್ದು, ಅವರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯವಾಗಿವೆ. ಅಮೋಘ ಲೀಲಾ ದಾಸ್ ಅವರು ತಮ್ಮ ‘ಪ್ರವಚನ’ವೊಂದರಲ್ಲಿ ಸ್ವಾಮಿ ವಿವೇಕಾನಂದರು ಮೀನಿನ ಸೇವನೆ ಮಾಡಿದ್ದನ್ನು ಪ್ರಶ್ನಿಸಿದ್ದರು. ಸದ್ಗುಣಶೀಲ ವ್ಯಕ್ತಿಯು ಪ್ರಾಣಿಗಳಿಗೆ ಹಾನಿ ಮಾಡುವ ಯಾವುದನ್ನೂ ಸೇವಿಸುವುದಿಲ್ಲ ಎಂದು ಹೇಳಿದರು.
“ಸಾಧು-ಸಂತರು ಎಂದಾದರೂ ಮೀನು ತಿನ್ನುತ್ತಾನಾ? ಮೀನು ಕೂಡ ನೋವನ್ನು ಅನುಭವಿಸುತ್ತದೆಯಲ್ಲವೇ ? ಹಾಗಾದರೆ ಸಂತ ವ್ಯಕ್ತಿ ಮೀನು ತಿನ್ನುವನೇ?” ಜನರನ್ನು ಉದ್ದೇಶಿಸಿ ಅಮೋಘ ಲೀಲಾ ದಾಸ್ ಹೇಳಿದರು. ಅವರು ಸ್ವಾಮಿ ವಿವೇಕಾನಂದರ ಗುರುಗಳಾದ ರಾಮಕೃಷ್ಣ ಪರಮಹಂಸರನ್ನೂ ಟೀಕಿಸಿದ್ದಾರೆ.
ಈ ಕಾಮೆಂಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ವಿವಾದವಾಗಿ ಇಸ್ಕಾನ್ ತನ್ನ ಸನ್ಯಾಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಿತು. ಇಸ್ಕಾನ್ ತನ್ನ ಹೇಳಿಕೆಯಲ್ಲಿ, ಅಮೋಘ್ ಲೀಲಾ ದಾಸ್ ಅವರ “ಅನುಚಿತ ಮತ್ತು ಸ್ವೀಕಾರಾರ್ಹವಲ್ಲದ ಕಾಮೆಂಟ್ಗಳು ಮತ್ತು ಈ ಇಬ್ಬರು ವ್ಯಕ್ತಿಗಳ ಶ್ರೇಷ್ಠ ಬೋಧನೆಗಳ ಬಗ್ಗೆ ಅವರ ತಿಳುವಳಿಕೆಯ ಕೊರತೆಯಿಂದ” ನೋವಾಗಿದೆ ಎಂದು ಹೇಳಿದೆ, ಅವರನ್ನು ಇಸ್ಕಾನ್ನಿಂದ ಒಂದು ತಿಂಗಳ ಅವಧಿಗೆ ನಿಷೇಧಿಸಲಾಗುವುದು ಎಂದು ಹೇಳಿದೆ.
ಅಮೋಘ ಲೀಲಾ ದಾಸ್ ಅವರು “ತಮ್ಮ ಕಾಮೆಂಟ್ಗಳಿಗಾಗಿ ಕ್ಷಮೆ ಯಾಚಿಸಿದ್ದಾರೆ” ಮತ್ತು “ಗೋವರ್ಧನ ಬೆಟ್ಟಗಳಲ್ಲಿ ಒಂದು ತಿಂಗಳ ಕಾಲ ‘ಪ್ರಾಯಶ್ಚಿತ’ ಮಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ಹೊರಗುಳಿಯಬೇಕು ಎಂದು ಅದು ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ