ಭೀಕರ ಅಪಘಾತ : ನಾಲೆಗೆ ಕಾರು ಬಿದ್ದು ನಾಲ್ವರು ಮಹಿಳೆಯರು ಸಾವು

ಮಂಡ್ಯ : ಜಿಲ್ಲೆಯಲ್ಲಿ ತಡೆಗೋಡೆಯಿಲ್ಲದ ನಾಲೆಗೆ ಕಾರು ಬಿದ್ದ ಘಟನೆಯಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿ ಗ್ರಾಮದ ಹೊರವಲಯದ ತುರುಗನೂರು ಬ್ರಾಂಚ್‌ನ ವಿಶ್ವೇಶ್ವರಯ್ಯ ಉಪ ನಾಲೆಗೆ ಕಾರು ಉರುಳಿ ಬಿದ್ದು ಈ ನಾಲ್ಕು ಮಂದಿ ಅಸುನೀಗಿದ್ದಾರೆ. ದೊಡ್ಡಮುಲಗೂಡು ಮತ್ತು ಗಾಮನಹಳ್ಳಿ ನಡುವೆ ಶನಿವಾರ ರಾತ್ರಿ 8.30ರ ಸಮಯದಲ್ಲಿ ಈ ಅವಘಡ ಸಂಭವಿಸಿದೆ.ಚಾಲಕ ಪಾರಾಗಿದ್ದಾನೆ. ಮೃತರನ್ನು ಟಿ.ನರಸೀಪುರ ತಾಲೂಕು ಗೊರವನಹಳ್ಳಿ ಗ್ರಾಮದ ಮಹದೇವಮ್ಮ, ಸಂಬಂಧಿಕರಾದ ರೇಖಾ, ಸಂಜನಾ, ಮಹದೇವಿ ಎಂದು ಗುರುತಿಸಲಾಗಿದೆ.
ನಾಲೆ ನೀರಿನಲ್ಲಿ‌ ಮುಳುಗಿದ ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರು ಚಾಲಕ ಮನೋಜ ಎಂಬಾತ ಪ್ರಾಣಾಪಯದಿಂದ ಪಾರಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಪೊಲೀಸರು ನಾಲ್ವರು ಮಹಿಳೆಯರ ಶವವನ್ನು ನಾಲೆ ನೀರಿನಿಂದ ಹೊರ ತೆಗೆದಿದ್ದಾರೆ‌. ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮಹದೇವಮ್ಮ ಅವರ ಮನೆಯವರು ಆದಿಚುಂಚನಗಿರಿಯಲ್ಲಿ ಇಟ್ಟುಕೊಂಡಿದ್ದ ದೇವತಾ ಕಾರ್ಯಕ್ಕೆ ನೆಂಟರನ್ನು ಆಹ್ವಾನಿಸಲು ಗೊರವನಹಳ್ಳಿಯಿಂದ ದೊಡ್ಡಮಲಗೂಡಿಗೆ ಚಾಲಕ ಸೇರಿದಂತೆ ಐವರು ಹೋಗುತ್ತಿದ್ದರು. ಈ ವೇಳೆ ನಾಲೆಗೆ ತಡೆಗೋಡೆ ಇಲ್ಲದ ಕಾರಣ ಕತ್ತಲಲ್ಲಿ ಕಾರು ನಾಲೆಗೆ ಉರುಳಿಬಿದ್ದಿದೆ. ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

 

 

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement