ಚಿತ್ರದುರ್ಗ: ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಭೇಟಿ ನೀಡಿದ್ದ ಶಾಸಕರೊಬ್ಬರು ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಗುಣಮಟ್ಟದ ಊಟ-ತಿಂಡಿ ನೀಡಿದರೆ ಹಾಸ್ಟೆಲ್ ವಾರ್ಡನ್ನನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಚೆನ್ನಾಗಿ ಬಾರಿಸಿ’ ಎಂದು ಹೇಳಿದ್ದಾರೆ ಎನ್ನಲಾದ ವೀಡಿಯೊ ವೈರಲ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಪ್ರಚೋದನೆ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ಚಿತ್ರದುರ್ಗದಲ್ಲಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಊಟ ಸರಿಯಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಖುದ್ದು ಪರಿಶೀಲನೆ ನಡೆಸಲು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹಾಸ್ಟೆಲಿಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳು ಊಟ-ತಿಂಡಿಯಲ್ಲಿ ಕೊಳೆತ ತರಕಾರಿ ಬಳಸಲಾಗುತ್ತಿದೆ. ಅನ್ನದಲ್ಲಿ ಹುಳಗಳು ಸಿಗುತ್ತವೆ ಎಂದು ದೂರು ನೀಡಿದರು.
ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಚಿತ್ರದುರ್ಗ (Chitradurga) ಶಾಸಕರು, ಇನ್ನೊಮ್ಮೆ ಈ ರೀತಿ ಕಳಪೆ ಊಟ, ಉಪಾಹಾರ ಕೊಟ್ಟರೆ ಅದನ್ನು ವಾರ್ಡನ್ಗೆ ತಿನ್ನಿಸಿ, ಬಳಿಕ ವಾರ್ಡನ್ ಅವರನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಬಾರಿಸಿ, ಆಮೇಲೆ ಏನಾಗುತ್ತೋ ನೋಡೋಣ, ನಾನಿದ್ದೀನಿ’ ಎಂದು ಹೇಳಿದ್ದಾರೆ ಎನ್ನಲಾದ ವೀಡಿಯೊ ಈಗ ವೈರಲ್ ಆಗಿದೆ.
‘ಈ ರೀತಿ ಮಾಡದೇ ಇದ್ದರೆ ಹಾಸ್ಟೆಲ್ನ ವ್ಯವಸ್ಥೆ ಸರಿ ಹೋಗುವುದಿಲ್ಲ. ಎಷ್ಟು ಸಾರಿ ಹೇಳಿದರೂ ಇವರು ಬುದ್ಧಿ ಕಲಿಯುವುದಿಲ್ಲ’ ಎಂದು ಪೊಲೀಸರ ಸಮ್ಮುಖದಲ್ಲೇ ಶಾಸಕರು ವಾರ್ಡನ್ಗೆ ಥಳಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಈ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ