ಬೆಂಗಳೂರು: ಚಂದ್ರಯಾನ-3 ಬುಧವಾರ ಸಂಜೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿದೆ. ಹಾಗೂ ಆ ಮೂಲಕ ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೆಪ್ಟೆಂಬರ್ 2019 ರಲ್ಲಿ ಚಂದ್ರಯಾನ-2ರ ಲ್ಯಾಂಡರ್ ಎಲ್ಲವನ್ನೂ ಸರಿಯಾಗಿ ನಿರ್ವಹಿಸಿ ಕೊನೆಯ ಕ್ಷಣದಲ್ಲಿ ಇಳಿಯುವಾಗ ಚಂದ್ರನ ಮೇಲೆ ಜೋರಾಗಿ ಅಪ್ಪಳಿಸಿದ ನಂತರ ಮಿಷನ್ ಭಾಗಶಃ ವಿಫಲವಾಯಿತು.
ಚಂದ್ರಯಾನ-3ರ ಸಾಧನೆಯ ನಂತರ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ ಅವರು ಎನ್ಡಿಟಿವಿಗೆ ವಿಶೇಷ ಸಂದರ್ಶನದಲ್ಲಿ ಹೇಳಿದರು. ಈ ಬಗ್ಗೆ ಮಾತನಾಡಿದ್ದಾರೆ ಹಾಗೂ ಚಂದ್ರನ ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂಬ ಬಗ್ಗೆಯೂ ಹೇಳಿದ್ದಾರೆ.
ಚಂದ್ರಯಾನ-2 ಜೋರಾಗಿ ಲ್ಯಾಂಡಿಂಗ್ ಮಾಡಿದ ಕಾರಣ ಅದು ಚಂದ್ರನ ಮೇಲ್ಮೈಗೆ ಅಪ್ಪಳಿಸಿತು. ಹೀಗಾಗಿ ಯಾವುದೇ ಉಪಕರಣಗಳನ್ನು ಮರಳಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಎಲ್ಲವನ್ನೂ ಹೊಸದಾಗಿ ಸಿದ್ಧಪಡಿಸಬೇಕಾಯಿತು ಎಂದು ಹೇಳಿದ್ದಾರೆ.
ಚಂದ್ರಯಾನ-2ರಲ್ಲಿ ಏನು ತಪ್ಪಾಗಿದೆ ಎಂದು ಪತ್ತೆ ಮಾಡಲು ಮೊದಲ ಒಂದು ವರ್ಷ ಕಳೆದಿದೆ, ನಂತರದ ವರ್ಷದಲ್ಲಿ ನಾವು ಎಲ್ಲವನ್ನೂ ಪರಿಷ್ಕರಿಸಿ ಅದಕ್ಕೆ ತಕ್ಕಂತೆ ಉಪಕರಣಗಳನ್ನು ಸಿದ್ಧಪಡಿಸಿದ್ದೇವೆ. ಕಳೆದ 2 ವರ್ಷಗಳಲ್ಲಿ ನಾವು ಅವುಗಳ ಪರೀಕ್ಷೆಗಳನ್ನು ನಡೆಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಭಾರಿ ಹೊಡೆತ ಬಿತ್ತು. ಕೋವಿಡ್ ನಮ್ಮ ಕೆಲವು ಕಾರ್ಯಕ್ರಮಗಳಿಗೆ ಅಡಚಣೆಯಾಯಿತು. ಅಲ್ಲದಿದ್ದರೆ ನಾವು ಇನ್ನೂ ಕೆಲವು ರಾಕೆಟ್ಗಳನ್ನು ಉಡಾಯಿಸುತ್ತಿದ್ದೆವು. ಕೋವಿಡ್ ನಂತರ, ನಾವು ಟ್ರ್ಯಾಕ್ಗೆ ಹಿಂತಿರುಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಇದುವರೆಗೂ ಯಾವುದೇ ಬಾಹ್ಯಾಕಾಶ ನೌಕೆಗೆ ಸಾಧ್ಯವಾಗದ ಕಾರಣ ಚಂದ್ರಯಾನ-3ರಲ್ಲಿ ಲ್ಯಾಂಡಿಂಗ್ ಮಾಡಿರುವುದು ವಿಶೇಷ ಸಾಧನೆಯಾಗಿದೆ. ಚಂದ್ರನ ದಕ್ಷಿಣ ಧ್ರುವವು ಅಪೊಲೊ ಲ್ಯಾಂಡಿಂಗ್ ಸೇರಿದಂತೆ ಹಿಂದಿನ ಬಾಹ್ಯಾಕಾಶ ನೌಕೆಗಳ ಕಾರ್ಯಾಚರಣೆಗಳು ಗುರಿ ಮಾಡಿಕೊಂಡಿದ್ದ ಸಮಭಾಜಕ ಪ್ರದೇಶದಿಂದ ದೂರದಲ್ಲಿದೆ. ದಕ್ಷಿಣ ಧ್ರುವವು ಕುಳಿಗಳು ಮತ್ತು ಆಳವಾದ ಕಂದಕಗಳಿಂದ ತುಂಬಿದೆ ಎಂದು ಸೋಮನಾಥ ಹೇಳಿದರು.
ಚಂದ್ರಯಾನ-3 ಮಿಷನ್ನ ಸಂಶೋಧನೆಗಳು ಚಂದ್ರನ ನೀರಿನ ಮಂಜುಗಡ್ಡೆಯ ಬಗೆಗಿನ ಜ್ಞಾನವನ್ನು ವಿಸ್ತರಿಸಬಹುದು, ಇದು ಚಂದ್ರನ ಅತ್ಯಮೂಲ್ಯ ಸಂಪನ್ಮೂಲಗಳಲ್ಲಿ ಒಂದಾಗಿದೆ. ಮುಂದಿನ 14 ದಿನಗಳ ಕಾಲ, ಆರು ಚಕ್ರಗಳ ರೋವರ್ ಚಂದ್ರನ ಮೇಲ್ಮೈಯಲ್ಲಿ ಪ್ರಯೋಗಗಳನ್ನು ನಡೆಸುತ್ತದೆ. ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎರಡೂ 1 ಚಂದ್ರನ ದಿನದ ಮಿಷನ್ ಜೀವನವನ್ನು ಹೊಂದಿವೆ, ಅಂದರೆ ಇದು ಭೂಮಿಯ ಮೇಲೆ 14 ದಿನಗಳಿಗೆ ಸಮಾನಾಗಿರುತ್ತದೆ. ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ನಿರ್ದಿಷ್ಟ ಕಾರ್ಯಗಳಿಗಾಗಿ ಐದು ಪೇಲೋಡ್ಗಳನ್ನು ಒಯ್ಯುತ್ತದೆ ಎಂದರು.
ಚಂದ್ರನ ದಕ್ಷಿಣ ಧ್ರುವವನ್ನು ಏಕೆ ಆರಿಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮನಾಥ ಅವರು, ದಕ್ಷಿಣ ಧ್ರುವದಲ್ಲಿ ಬೃಹತ್ ಪ್ರಮಾಣದ ವೈಜ್ಞಾನಿಕ ಸಾಧ್ಯತೆಗಳಿವೆ. ಅವು ಚಂದ್ರನ ಮೇಲೆ ನೀರು ಮತ್ತು ಖನಿಜಗಳ ಉಪಸ್ಥಿತಿಗೆ ಸಂಬಂಧಿಸಿವೆ. ಹೀಗಾಗಿ ದಕ್ಷಿಣ ಧ್ರುವದ ಬಳಿಯೇ ವಿಕ್ರಂ ಲ್ಯಾಂಡರ್ ಅನ್ನು ಇಳಿಸಲು ಉದ್ದೇಶಿಸಲಾಗಿತ್ತು ಹಾಗೂ ಚಂದ್ರಯಾನ-3 ರ ಸಂಪೂರ್ಣ ಉಪಕರಣಗಳನ್ನು ದಕ್ಷಿಣ ಧ್ರುವದ ಬಳಿ ಇಳಿಯಲು ಬೇಕಾದ ರೀತಿಯಲ್ಲಿ ಸಿದ್ಧಪಡಿಸಲಾಗಿತ್ತು ಎಂದು ಸೋಮನಾಥ ಹೇಳಿದ್ದಾರೆ.
ವಿಜ್ಞಾನಿಗಳು ತನಿಖೆ ಮಾಡಲು ಬಯಸುವ ಅನೇಕ ಇತರ ಭೌತಿಕ ಪ್ರಕ್ರಿಯೆಗಳಿವೆ. ನಮ್ಮ ಐದು ಉಪಕರಣಗಳು ಆ ಪ್ರದೇಶಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿವೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ