ಮುಂಬೈ: ಆನ್ಲೈನ್ ಗೇಮಿಂಗ್ ಆ್ಯಪ್ಗಳ ಕುರಿತ ಜಾಹೀರಾತಿಯನಲ್ಲಿ ನಟಿಸಿರುವುದನ್ನು ಖಂಡಿಸಿ ಮಹಾರಾಷ್ಟ್ರದ ಆಡಳಿತರೂಢ ಸರ್ಕಾರದ ಮೈತ್ರಿಪಕ್ಷ ಪ್ರಹಾರ ಜನಶಕ್ತಿ ಪಕ್ಷದ (PJP) ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರು ಗುರುವಾರ (ಆಗಸ್ಟ್ 31) ಬಾಂದ್ರಾದಲ್ಲಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಯುವಕರನ್ನು ಹಾಳು ಮಾಡುವ ಆನ್ಲೈನ್ ಗೇಮಿಂಗ್ ಜಾಹೀರಾತಿನಲ್ಲಿ ನಟಿಸುವ ಮೂಲಕ ಉತ್ತೇಜಿಸುತ್ತಿದ್ದಾರೆ. ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿನ್ ನಿವಾಸದ ಎದುರು ಶಾಸಕ ಹಾಗೂ ನೂರಾರು ಕಾರ್ಯಕರ್ತರು ಘೋಷಣೆ ಕೂಗಿದರು ಹಾಗೂ ಸಚಿನ್ ವಿರುದ್ಧದ ಪೋಸ್ಟರ್ಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಪೊಲೀಸರು, ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದಾರೆ. ಯುವಕರನ್ನು ತಪ್ಪು ದಾರಿಗೆ ಎಳೆಯುವ ಕೆಲಸಕ್ಕೆ ಗೌರವಾನ್ವಿತ ಕ್ರಿಕೆಟಿಗ ಮುಂದಾಗಿದ್ದಾರೆ. ಸಚಿನ್ಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಚಿನ್ ಅವರಿಗೆ ದೇಶ-ವಿದೇಶದಲ್ಲಿ ಅಪಾರ ಗೌರವ ಇದೆ. ಎಲ್ಲರಿಗೂ ಆದರ್ಶ ವ್ಯಕ್ತಿ. ಹಾಗಾಗಿ, ಅವರನ್ನು ಅನುಕರಿಸುವ ಕೋಟ್ಯಂತರ ಯುವಕರ ಮೇಲೆ ಈ ಕೆಟ್ಟ ಜಾಹೀರಾತಿನಿಂದ ಪರಿಣಾಮ ಬೀರಬಹುದು. ಮುಂದಿನ 15 ದಿನಗಳೊಳಗೆ ಪ್ರಚೋದನೆ ನೀಡುವ ಜಾಹೀರಾತಿನಿಂದ ಅವರು ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಭಾರತ ರತ್ನ ಹಿಂದಿರುಗಿಸಲಿ ಎಂದು ಎಚ್ಚರಿಸಿದ್ದಾರೆ. ಆಲ್ಲೈನ್ ಗೇಮಿಂಗ್ ಜಾಹೀರಾತು ನೀಡಲ್ಲ ಎಂದು ಹೇಳಿದ್ದ ಅವರೇ ಈಗ, ಅದರಲ್ಲಿ ಭಾಗಿಯಾಗಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.
ಪೇಟಿಎಂ ಫಸ್ಟ್ ಗೇಮ್ ಎಂಬ ಆನ್ಲೈನ್ ಗೇಮಿಂಗ್ ಜಾಹೀರಾತಿನಲ್ಲಿ ಸಚಿನ್ ನಟಿಸಿದ್ದಾರೆ. ಗೇಮ್ ಆಡಿ ಹಣ ಸಂಪಾದಿಸುವುದು ಜಾಹೀರಾತಿನ ಉದ್ದೇಶ. ಇದರಿಂದ ಸಚಿನ್ ತೆಂಡೂಲ್ಕರ್ ಅವರ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಈಗಾಗಲೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸೇರಿ ಪ್ರಮುಖ ಕ್ರಿಕೆಟಿಗರು ಈ ರೀತಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ