ನವದೆಹಲಿ : ಅಧಿಕೃತ ಜಿ 20 ಶೃಂಗಸಭೆಯ ಆಹ್ವಾನಗಳಲ್ಲಿ ಸಾಂಪ್ರದಾಯಿಕ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ’ ಎಂದು ಬಳಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೆಲವು ದಿನಗಳ ಮುಂಚಿತವಾಗಿ ಬಂದಿರುವ ಈ ಕ್ರಮವು ರಾಜಕೀಯ ತಾಪಮಾನವನ್ನು ಹೆಚ್ಚಿಸಿದೆ.
G20 ವಿದೇಶಿ ಪ್ರತಿನಿಧಿಗಳಿಗೆ ನೀಡುವ “ಭಾರತ, ಪ್ರಜಾಪ್ರಭುತ್ವದ ತಾಯಿ (“Bharat, The Mother Of Democracy) ಎಂಬ ಬುಕ್ಲೆಟ್ ನಲ್ಲಿ ʼಭಾರತʼ ಎಂದು ಬಳಸಲಾಗಿದೆ. “ಭಾರತʼ ಎಂಬುದು ದೇಶದ ಅಧಿಕೃತ ಹೆಸರು. ಇದನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಮತ್ತು 1946-48 ರ ಚರ್ಚೆಗಳಲ್ಲಿಯೂ ಉಲ್ಲೇಖಿಸಲಾಗಿದೆ” ಎಂದು ಕಿರುಪುಸ್ತಕ ಹೇಳುತ್ತದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಇತರ ಉನ್ನತ ವಿಶ್ವ ನಾಯಕರನ್ನು ಆತಿಥ್ಯ ವಹಿಸಲು ದೇಶವು ತಯಾರಿ ನಡೆಸುತ್ತಿರುವುದರಿಂದ ಈ ಬದಲಾವಣೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಾಮಕರಣದಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಮಂಗಳವಾರ ರಾತ್ರಿ ಪ್ರಧಾನಿಯವರ ಇಂಡೋನೇಷ್ಯಾ ಭೇಟಿಯ ದಾಖಲೆಯನ್ನು ಹಂಚಿಕೊಂಡಿದ್ದಾರೆ, ಅದು ಅವರನ್ನು “ಭಾರತದ ಪ್ರಧಾನಿ” (Prime Minister of Bharat) ಎಂದು ಉಲ್ಲೇಖಿಸಿದೆ.
ಸೆಪ್ಟೆಂಬರ್ 18 ರಿಂದ ಆರಂಭವಾಗಲಿರುವ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಬದಲಾಯಿಸುವ ನಿರ್ಣಯವನ್ನು ಸರ್ಕಾರ ಮುಂದಿಡಬಹುದು ಎಂದು ಮೂಲಗಳು ಹೇಳಿವೆ.
ಈ ನಡೆ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ನರೇಂದ್ರ ಮೋದಿ ಸರ್ಕಾರವು “ಇತಿಹಾಸವನ್ನು ತಿರುಚಿದೆ ಮತ್ತು ಭಾರತವನ್ನು ವಿಭಜಿಸಿದೆ” ಎಂದು ವಿಪಕ್ಷಗಳ ಮೈತ್ರಿಕೂಟ- ಇಂಡಿಯಾ ಬ್ಲಾಕ್ ಸದಸ್ಯರು ಆರೋಪಿಸಿದ್ದಾರೆ. ಈ ಕುರಿತು ಚರ್ಚಿಸಲು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮೈತ್ರಿಕೂಟದ ಹಿರಿಯ ನಾಯಕರ ಸಭೆ ಕರೆದಿದ್ದಾರೆ.
ಅವರು ತಮ್ಮ ಮೈತ್ರಿ ರಚನೆಗೂ ಸರ್ಕಾರದ ನಡೆಗೂ ಲಿಂಕ್ ಮಾಡಿದ್ದಾರೆ. ಪ್ರತಿಪಕ್ಷಗಳ ಮೈತ್ರಿಕೂಟವು ತನ್ನನ್ನು ಇಂಡಿಯಾ ಬದಲಿಗೆ ‘ಭಾರತ’ ಎಂದು ಕರೆಯಲು ನಿರ್ಧರಿಸಿದರೆ ಆಡಳಿತ ಪಕ್ಷವು ದೇಶದ ಹೆಸರನ್ನು ‘ಬಿಜೆಪಿ’ ಎಂದು ಬದಲಾಯಿಸುತ್ತದೆಯೇ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ದೇಶದ ಹೆಸರನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. “ದೇಶಕ್ಕೆ ಸಂಬಂಧಿಸಿದ ಹೆಸರಿನ (ಇಂಡಿಯಾ ಬ್ಲಾಕ್) ಬಗ್ಗೆ ಆಡಳಿತ ಪಕ್ಷವು ಏಕೆ ಗೊಂದಲಕ್ಕೊಳಗಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಎನ್ಸಿಪಿ ಮುಖ್ಯಸ್ಥರು ಹೇಳಿದ್ದಾರೆ.
ಆದಾಗ್ಯೂ, ಬಿಜೆಪಿ ನಾಯಕರು ಸೇರಿದಂತೆ ಅನೇಕರು “ಭಾರತ” ನಾಮಕರಣವನ್ನು ಸ್ವಾಗತಿಸಿದ್ದಾರೆ. “ಭಾರತ” ಎಂಬ ಪದವು ಸಂವಿಧಾನದ 1 ನೇ ವಿಧಿಯಲ್ಲಿದೆ, “ಇಂಡಿಯಾ, ಅದು ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ ಎಂದು ಅದು ಹೇಳುತ್ತದೆ ಎಂದು ಬಿಜೆಪಿ ಹೇಳಿದೆ.
‘ಭಾರತ’ ವನ್ನು ಬಳಸುವ ನಿರ್ಧಾರವು ವಸಾಹತುಶಾಹಿ ಮನಸ್ಥಿತಿಯ ವಿರುದ್ಧದ ದೊಡ್ಡ ಹೇಳಿಕೆಯಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಹೇಳಿದ್ದಾರೆ. “ಇದು ಮೊದಲೇ ಆಗಬೇಕಿತ್ತು. ಇದು ನನಗೆ ಅತೀವ ತೃಪ್ತಿ ನೀಡುತ್ತದೆ. ‘ಭಾರತ’ ನಮ್ಮ ಗುರುತು ಮತ್ತು ಅದರ ಬಗ್ಗೆ ನಮಗೆ ಹೆಮ್ಮೆ ಇದೆ. ರಾಷ್ಟ್ರಪತಿಗಳು ‘ಭಾರತ’ಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೀಹನ ಭಾಗ್ವತ್ ಅವರು ದೇಶವು ʼಇಂಡಿಯಾʼ ಪದವನ್ನು ಬಳಸುವುದನ್ನು ʼಭಾರತʼ ಎಂದು ಬಳಸಬೇಕೆಂದು ದೇಶವಾಸಿಗಳಿಗೆ ಮನವಿ ಮಾಡಿದ ಎರಡು ದಿನಗಳ ನಂತರ ವಿವಾದ ಭುಗಿಲೆದ್ದಿದೆ. ನೀವು ಜಗತ್ತಿನಲ್ಲಿ ಎಲ್ಲೇ ಹೋದರೂ ʼಭಾರತʼ ದೇಶವು ʼಭಾರತʼವಾಗಿ ಉಳಿಯುತ್ತದೆ, ಮಾತನಾಡುವ ಮತ್ತು ಬರಹದಲ್ಲಿ ಭಾರತ ಎಂದು ಹೇಳಬೇಕು” ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದರು
ನಿಮ್ಮ ಕಾಮೆಂಟ್ ಬರೆಯಿರಿ