ನವದೆಹಲಿ: ಶುಕ್ರವಾರ (ಅಕ್ಟೋಬರ್ 13) ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಅವರನ್ನು ಬೆಂಬಲಿಸುವ ಶಿವಸೇನೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ನಿರ್ಧರಿಸುವಲ್ಲಿ ವಿಳಂಬವಾದ ಬಗ್ಗೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.
ಮಹಾರಾಷ್ಟ್ರದ ಶಿಂಧೆ ಬಣದ ಶಾಸಕರ ಅನರ್ಹತೆ ಪ್ರಕರಣವನ್ನು ತುರ್ತಾಗಿ ನಿರ್ಧರಿಸುವಂತೆ ಕೋರಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಶಾಸಕ ಸುನೀಲ ಪ್ರಭು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಇಡೀ ಪ್ರಕ್ರಿಯೆಯ ವಿಚಾರಣೆಯನ್ನು ಇನ್ನೂ ಎಳೆಯಲು ಆಗುವುದಿಲ್ಲ. ತುರ್ತು ನಿರ್ಧಾರ ಕೈಗೊಳ್ಳಬೇಕು ಎಂದು ಸ್ಪೀಕರ್ ಅವರಿಗೆ ತಾಕೀತು ಮಾಡಿತು.
ಬರುವ ಸೋಮವಾರದ ವೇಳೆಗೆ ವಿಚಾರಣಾ ಪ್ರಕ್ರಿಯೆ ಮುಗಿಯುವ ಕಾಲಾನುಕ್ರಮ ಬಿಡುಗಡೆ ಮಾಡದಿದ್ದಲ್ಲಿ ತಾವೇ ಅದನ್ನು ನಿಗದಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಸರ್ವೋಚ್ಚ ನ್ಯಾಯಾಲಯವು, ಈ ಸಂಬಂಧ ಸ್ಪೀಕರ್ಗೆ ಸಲಹೆ ಮಾಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಡಾ. ಬಿರೇಂದ್ರ ಸರಾಫ್ ಅವರಿಗೆ ಅವರಿಗೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ಆದೇಶವನ್ನು ಮಣಿಸಲಾಗದು ಎಂದು ಯಾರಾದರೂ ಸ್ಪೀಕರ್ಗೆ ಸಲಹೆ ನೀಡಬೇಕು. ಯಾವ ಕಾಲಾನುಕ್ರಮವನ್ನು ಅವರು ನಿಗದಿ ಮಾಡುತ್ತಿದ್ದಾರೆ? ಕಾಲಾನುಕ್ರಮ ನಿಗದಿ ಮಾಡುವುದಾಗಿ ಹೇಳಿ ವಿಚಾರಣೆ ತಡ ಮಾಡಲಾಗದು… ಈ ನೆಲೆಯಲ್ಲಿ ಅರ್ಜಿದಾರರ ಆತಂಕ ಸರಿಯಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಶಾಸಕ ಸುನೀಲ್ ಪ್ರಭು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸ್ಪೀಕರ್ ಪ್ರಕ್ರಿಯೆ ನಿರ್ಧರಿಸಲು ಅಳವಡಿಸಿಕೊಂಡಿರುವ ನಿಯಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಪೀಠವು “ಪ್ರಕರಣದ ಕುರಿತು ಗಂಭೀರವಾಗಿದ್ದೇವೆ ಎಂಬ ಭಾವನೆಯನ್ನು ಸ್ಪೀಕರ್ ಮೂಡಿಸಬೇಕು. ಸಂವಿಧಾನಕ್ಕೆ ವಿರುದ್ಧವಾದ ನಿರ್ಧಾರ ಬಂದಾಗ ಈ ನ್ಯಾಯಾಲಯ ರಿಟ್ ಅನ್ನು ಚಲಾಯಿಸಬೇಕಾಗುತ್ತದೆ” ಎಂದು ಎಚ್ಚರಿಸಿತು.
ಪ್ರತಿದಿನ ಪ್ರಕ್ರಿಯೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಸುವಂತೆ ಸ್ಪೀಕರ್ಗೆ ಸೂಚಿಸಿರುವ ನ್ಯಾಯಾಲಯವು ಸ್ಪೀಕರ್ ಅವರು ಚುನಾವಣಾ ನ್ಯಾಯಾಧಿಕರಣ ಸಹ ಆಗಿದ್ದು, ಅದು ಸರ್ವೋಚ್ಚ ನ್ಯಾಯಾಲಯಕ್ಕೆ ಉತ್ತರಾದಾಯಿಯಾಗಿದೆ ಎಂದು ಪೀಠ ಹೇಳಿತು.ಅನರ್ಹತಾ ಅರ್ಜಿಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಪ್ರಕ್ರಿಯಾತ್ಮಕ ನಿರ್ದೇಶನಗಳು ಹಾಗೂ ಕಾಲಾನುಕ್ರಮ ಬಿಡುಗಡೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಕಳೆದ ತಿಂಗಳು ಸ್ಪೀಕರ್ಗೆ ನಿರ್ದೇಶಿಸಿತ್ತು. ಇದರ ಹೊರತಾಗಿಯೂ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಸ್ಪೀಕರ್ ಎರಡು ತಿಂಗಳಲ್ಲಿ ನಿರ್ಧಾರ ಪ್ರಕಟಿಸಬೇಕು ಎಂದು ಹೇಳಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ