ಹೈದರಾಬಾದ್: ಮೇ 7 ರ ಮಂಗಳವಾರ ರಾತ್ರಿ ಹೈದರಾಬಾದ್ ಮಹಾನಗರದ ಬಾಚುಪಲ್ಲಿಯ ರೇಣುಕಾ ಎಲ್ಲಮ್ಮ ಕಾಲೋನಿಯಲ್ಲಿ ತಡೆಗೋಡೆ ಕುಸಿದು ಏಳು ಕಾರ್ಮಿಕರು ಸಾವಿಗೀಡಾದ ದಾರುಣ ಘಟನೆ ನಡೆದಿದೆ. ತೀವ್ರ ಬಿಸಿಲಿನ ನಂತರ ಹೈದರಾಬಾದ್ನಲ್ಲಿ ಭಾರೀ ಮಳೆಯಾಗಿದೆ.
ಮೃತ ಕಾರ್ಮಿಕರು ಒಡಿಶಾ ಮತ್ತು ಛತ್ತೀಸ್ಗಢ ರಾಜ್ಯದವರಾಗಿದ್ದು, ಉದ್ಯೋಗಕ್ಕಾಗಿ ಹೈದರಾಬಾದ್ಗೆ ವಲಸೆ ಬಂದಿದ್ದಾರೆ. ಬಾಚುಪಲ್ಲಿಯ ರೇಣುಕಾ ಕಾಲೋನಿಯಲ್ಲಿ ಅನುಮತಿಯೊಂದಿಗೆ ಸೆಲ್ಲಾರ್ – ಸ್ಟಿಲ್ಟ್ ಜೊತೆಗೆ ಐದು ಮೇಲಿನ ಮಹಡಿಗಳ ವಸತಿ ಕಟ್ಟಡ ನಿರ್ಮಿಸುತ್ತಿರುವ ಹೊರೈಜನ್ ರಿಡ್ಜ್ ನಿರ್ಮಾಣ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ (ಮೇ 7) ಹೈದರಾಬಾದ್ನಲ್ಲಿ ರಾತ್ರಿ 9 ಗಂಟೆಯವರೆಗೆ ಸರಾಸರಿ 34 ಮಿಮೀ ಮಳೆಯಾಗಿದೆ. ಮಿಯಾಪುರ ಮತ್ತು ಚಂದನಗರ ವೃತ್ತದಲ್ಲಿ ಗರಿಷ್ಠ 133.5 ಮಿ.ಮೀ ಮಳೆ ದಾಖಲಾಗಿದೆ.
ಕಟ್ಟಡ ಕಾಮಗಾರಿ ನಡೆಯುತ್ತಿರುವ ಬಾಚುಪಲ್ಲಿಯಲ್ಲಿ ಕಾರ್ಮಿಕರು ಶೀಟ್ ಶೆಡ್ಗಳಲ್ಲಿ ವಾಸಿಸುತ್ತಿದ್ದರು. ಹೈದರಾಬಾದ್ನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಕಟ್ಟಡದ ಸುತ್ತ ಕಟ್ಟಿದ್ದ ತಡೆಗೋಡೆ ಕುಸಿದು ಕಾರ್ಮಿಕರು ತಂಗಿದ್ದ ಶೀಟ್ ಶೆಡ್ಗಳ ಮೇಲೆ ಬಿದ್ದಿದೆ.
ಗೋಡೆ ಕುಸಿದ ನಂತರ ಇತರ ಕಾರ್ಮಿಕರು ಕಿರುಚುತ್ತಾ ಶೆಡ್ಗಳಿಂದ ಹೊರಬಂದರು. ಗಾಯಗೊಂಡಿರುವ ಇತರರನ್ನು ಹೈದರಾಬಾದ್ನ ಮಮತಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಮೃತ ಏಳು ಕಾರ್ಮಿಕರನ್ನು ತಿರುಪತಿ ಮಾಝಿ (20), ಶಂಕರ (22), ರಾಜು (25), ಖುಷಿ (25) ರಾಮು ಯಾದವ್ (34), ಗೀತಾ (32) ಮತ್ತು ಹಿಮಾಂಶು (04) ಎಂದು ಗುರುತಿಸಲಾಗಿದೆ. ಬಾಚುಪಲ್ಲಿ ಪೊಲೀಸರು ಮೃತರನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಬುಧವಾರ(ಏಪ್ರಿಲ್ ೮)ವೂ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ