ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನ: ಬೆಳಗಾವಿಯಲ್ಲಿ ನವೆಂಬರ್‌ 21ರಂದು ಉದ್ಘಾಟನೆ

ಬೆಳಗಾವಿ/ಶಿರಸಿ: ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನ ಬೆಳಗಾವಿಯಲ್ಲಿ ಇದೇ ನ.21ರಂದು ಉದ್ಘಾಟನೆಯಾಗಲಿದೆ. ಕಳೆದ ಹದಿನೇಳು ವರ್ಷಗಳಿಂದ ನಿರಂತರವಾಗಿ ಭಗವದ್ಗೀತಾ ಅಭಿಯಾನ‌ ನಡೆಸಿಕೊಂಡು ಬರುತ್ತಿರುವ ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನವು ಬೆಳಗಾವಿಯ ಭಗವದ್ಗೀತಾ ಅಭಿಯಾನದ ಸಹಕಾರದಲ್ಲಿ ಗೀತಾ ಅಭಿಯಾನಕ್ಕೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಚಾಲನೆ‌ ನೀಡಲಿದೆ.
ಸಮಾರಂಭವು ಅನಗೋಳದ ಸಂತ ಮೀರಾ ಶಾಲೆಯ ‌ಮಾಧವ ಸಭಾಗೃಹದಲ್ಲಿ ನಡೆಯಲಿದೆ. ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಗಳು ಹಾಗೂ ನಿಡಸೋಸಿ ಶ್ರೀ ದುರದಿಂಡೀಶ್ವರ ಸಂಸ್ಥಾನ ಮಠದ ಡಾ. ಶ್ರೀನಿಜಲಿಂಗೇಶ್ವರ ಮಹಾಸ್ವಾಮೀಜಿಗಳು, ಬೆಳಗಾವಿ ಆರ್ಷ ವಿದ್ಯಾ ಕೇಂದ್ರದ ಶ್ರೀಚಿತ್ಪ್ರಕಾಶಾನಂದ‌ಜೀ ಸಾನ್ನಿಧ್ಯ‌ ವಹಿಸಲಿದ್ದಾರೆ.

ಭಗವದ್ಗೀತೆಯ ಬಗ್ಗೆ ಹೆಚ್ಚಿನವರಿಗೆ ಈಗ ಅರಿವು ಬಂದಿದೆ. ಆದರೆ ಭಗವದ್ಗೀತೆ ಓದದೇ ಇರುವವರು ನಮ್ಮ ದೇಶದಲ್ಲಿ‌ ಕೋಟಿ ಕೋಟಿ‌ ಸಂಖ್ಯೆಯಲ್ಲಿ ಇದ್ದಾರೆ. ಗೀತೆ ಅರಿಯದೇ ಇರುವುದೇ ಇಂದಿನ ಅನೇಕ‌ ಸಮಸ್ಯೆಗಳಿಗೆ ಕಾರಣ. ಗೀತಾ ಅಭಿಯಾನಕ್ಕೆ ಎಲ್ಲರ ಸಹಕಾರ ಅಗತ್ಯ.
-ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ವಿಶೇಷ ಆಹ್ವಾನಿತರಾಗಿ ಮಹಿಳಾ‌ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ‌ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸಂಸದೆ ಮಂಗಳಾ ಅಂಗಡಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಗೀತಾ ಅಭಿಯಾನದ ಗೌರವಾಧ್ಯಕ್ಷರೂ ಆಗಿರುವ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ವಹಿಸಿಕೊಳ್ಳಲಿದ್ದಾರೆ. ಉದ್ಯಮಿ ಗೋಪಾಲ ಜಿನಗೌಡ, ಮಠದ ಆಡಳಿತ ‌ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಉಪಸ್ಥಿತರಿರಲಿದ್ದಾರೆ ಎಂದು ಅಭಿಯಾನದ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಸಂಚಾಲಕ ಸುಬ್ರಹ್ಮಣ್ಯ ಭಟ್ಟ, ಕಾರ್ಯದರ್ಶಿ ಎಂ.ಕೆ.ಹೆಗಡೆ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

ಗೀತಾ ಅಭಿಯಾನಕ್ಕೆ 17ರ ಸಂಭ್ರಮ
ಹಸಿರು ಸ್ವಾಮೀಜಿ ಎಂದೇ ಹೆಸರಾದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಭಗವದ್ಗೀತಾ ಅಭಿಯಾನಕ್ಕೆ ಈಗ 17ರ ಸಂಭ್ರಮ. ಬಾಹ್ಯ ಪರಿಸರದ ಸಂರಕ್ಷಣೆಗೆ ಕಂಕಣ ತೊಟ್ಟ ಸ್ವರ್ಣವಲ್ಲೀ ಶ್ರೀಗಳು ವ್ಯಕ್ತಿಯ ಆಂತರಿಕ ಸೌಂದರ‍್ಯದ ವ್ಯಕ್ತಿತ್ವ ವಿಕಸನ, ನೈತಿಕತೆ ಪುನರುತ್ಥಾನ, ಸಮಾಜದ ಒಳಗಿನ ಸೌಂದರ‍್ಯ, ರಾಷ್ಟ್ರೀಯ ಭಾವೈಕ್ಯತೆಯ ಮುಖ್ಯ ಆಶಯದಲ್ಲಿ ಭಗವದ್ಗೀತೆ ಅಭಿಯಾನ ನಡೆಸುತ್ತಿದ್ದಾರೆ.ಶ್ರೀಗಳು 2007ರ ಅಕ್ಟೋಬರ್ ತಿಂಗಳಿನಿಂದ ಭಗವದ್ಗೀತಾ ಅಭಿಯಾನ ಆರಂಭಿಸಿದರು. ಈಗ ಇಡೀ ರಾಜ್ಯ, ಹೊರ ರಾಜ್ಯದಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ರಾಜ್ಯದಲ್ಲಿ ಮುಖ್ಯ ಸಮಿತಿ, ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಗಳು, ತಾಲೂಕು ಮಟ್ಟದಲ್ಲಿ ತಾಲೂಕು, ಕೆಲವು ಜಿಲ್ಲೆಗಳಲ್ಲಿ ಹೋಬಳಿ ಹಂತದಲ್ಲೂ ಗ್ರಾಮ, ಊರು, ಊರುಗಳಲ್ಲೂ, ಮಠ, ಮಂದಿರಗಳಲ್ಲಿ, ಗ್ರಾಮದ ಕೇಂದ್ರದಲ್ಲಿ, ಶಾಲಾ ಕಾಲೇಜುಗಳಲ್ಲಿ, ಜೈಲಿನಲ್ಲೂ ಗೀತಾ ಅಭಿಯಾನ ನಡೆಯುತ್ತಿವೆ. ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಗಳೂ ನಡೆಯುತ್ತಿವೆ. ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಮಹಾ ಸಮರ್ಪಣೆ ನಡೆಯಲಿದೆ.
ನವೆಂಬರ್ 21ರಿಂದ ಎಲ್ಲಡೆ ಭಗವದ್ಗೀತಾ ಕಲಿಕಾ ಕೇಂದ್ರಗಳು ಆರಂಭವಾಗಲಿವೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಅಭಿಯಾನದ ಸಿದ್ಧತೆಗಳು ಜೋರಾಗಿವೆ. ನಿರೀಕ್ಷಿತ ಸ್ಪರ್ಧಾ ಕಾರ್ಯಕ್ಕೂ ಚಾಲನೆ ನೀಡಿವೆ.
ನವೆಂಬರ್‌ 21ರಿಂದ ಅಧಿಕೃತವಾಗಿ ಅಭಿಯಾನದ ತರಗತಿಗಳು ಆರಂಭವಾಗಲಿದೆ. ಡಿಸೆಂಬರ್‌ 22ರಂದು ಗೀತಾ ಜಯಂತಿ ಹಾಗೂ ಡಿಸೆಂಬರ್‌ 23ರಂದು ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಗೀತಾ ಅಭಿಯಾನದ ಮಹಾ ಸಮರ್ಪಣೆ ನಡೆಯಲಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

ಅಭಿಯಾನದ ಮೈಲಿಗಲ್ಲುಗಳು
ಈವರೆಗೆ ರಾಜ್ಯದಲ್ಲಿ ೪೨.೨೮ ಲಕ್ಷ ಗೀತಾ ಪುಸ್ತಕ ವಿತರಣೆ
ಈಗಾಗಲೇ ೬೯೦೦ಕ್ಕೂ ಅಧಿಕ ಶಾಲೆಗಳಲ್ಲಿ ಗೀತಾ ಅಭಿಯಾನ ನಡೆದಿದೆ.
ಪ್ರತೀ ವರ್ಷ ಗೀತಾ ಅಭಿಯಾನ ಸರಾಸರಿ ೪೦೦ ಶಾಲೆಗಳಲ್ಲಿ ನಡೆಯುತ್ತವೆ
ಗೀತೆ ಹಾಗೂ ಸಂವಿಧಾನ, ಕಾನೂನು, ಗೀತೆ ಹಾಗೂ‌ ಮಾನಸಿಕ ಯೋಗಕ್ಷೇಮ, ಗೀತೆ ಹಾಗೂ ವಚನ ಸಾಹಿತ್ಯ ಸೇರಿದಂತೆ‌ ನೂರಾರು ಚಿಂತನಾ ಗೋಷ್ಠಿ ಆಯೋಜನೆಯಾಗಿದೆ.
೧೭ ವರ್ಷದಲ್ಲಿ ೫೦೦ಕ್ಕೂ ಅಧಿಕ ಶಾಲೆಗಳಿಗೆ ಸ್ವತಃ ಶ್ರೀಗಳು ಭೇಟಿ ನೀಡಿದ್ದಾರೆ.
ಗೀತೆಯ ಪ್ರಸಾರಕ್ಕೆ ಯಕ್ಷಗಾನ, ರೂಪಕಗಳ ಬಳಕೆ
ಮಸೀದಿಯಲ್ಲಿ, ಚರ್ಚಿನಲ್ಲೂ ಗೀತಾ ಅಭಿಯಾನ.
ಗೀತಾ ಕಂಠಪಾಠ ಸ್ಪರ್ಧೆ, ಭಾಷಣ ಸ್ಪರ್ಧೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement