ಅಹಮದಾಬಾದ್: ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತ ಕ್ರಿಕೆಟ್ ತಂಡದ ಸೋಲಿನ ನಡುವೆಯೇ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದ ಭಾನುವಾರ ಕೊನೆಗೊಂಡಿದೆ. ಈ ನಡುವೆ ಅವರು ಮಾಧ್ಯಮದವರೊಂದಿಗೆ ,ಆತನಾಡಿದ್ದು, ರಾಷ್ಟ್ರೀಯ ತಂಡದ ಜೊತೆ ಮುಂದುವರಿಯುವ ಕುರಿತಂತೆ ನಿರ್ಧಾರ ಕೈಗೊಳ್ಳಲು ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಭಾನುವಾರ ಗುಜರಾತ್ನ ಅಹಮದಾಬಾದ್ನಲ್ಲಿರುವ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳಿಂದ ಸೋಲು ಕಂಡಿತು.
ರಾಹುಲ್ ದ್ರಾವಿಡ್ ತಮ್ಮ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಐಸಿಸಿಯ ಎರಡು ಟೂರ್ನಮೆಂಟ್ಗಳಲ್ಲಿ ತಂಡವನ್ನು ಫೈನಲ್ ಮತ್ತು ಒಂದರಲ್ಲಿ ಸೆಮಿಫೈನಲ್ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
‘ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯುವ ಬಗ್ಗೆ ನಾನು ಇನ್ನೂ ಯೋಚಿಸಿಲ್ಲ. ನಾನು ಸಂಪೂರ್ಣ ವಿಶ್ವಕಪ್ ಸರಣಿಯಲ್ಲಿ ತೊಡಗಿಸಿಕೊಂಡಿದ್ದೆ. ಹಾಗಾಗಿ, ಭವಿಷ್ಯದ ಬಗ್ಗೆ ಯೋಚಿಸಿಲ್ಲ. ಆ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಯ ಬೇಕಿದೆ’ ಎಂದು ಅವರು ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಎರಡು ವರ್ಷಗಳ ತಮ್ಮ ಅಧಿಕಾರಾವಧಿಯ ನನ್ನ ಕೆಲಸ ಬಗ್ಗೆ ನಾನು ವಿಶ್ಲೇಷಿಸಲು ಹೋಗುವುದಿಲ್ಲ. ಕಳೆದ ಎರಡು ವರ್ಷಗಳಿಂದ ನಾನು ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಆಟಗಾರರ ಜೊತೆ ಕೆಲಸ ಮಾಡಿದ್ದು ಉತ್ತಮ ಅವಕಾಶವಾಗಿತ್ತು ಎಂದಿದ್ದಾರೆ.
ಮುಂದಿನ ವರ್ಷ ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ತಂಡದ ಕೋಚ್ ಆಗಿ ಮುಂದುವರಿಯಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಆ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಆ ಬಗ್ಗೆ ಯೋಚಿಸಿಲ್ಲ. ನನ್ನ ಸಂಪೂರ್ಣ ಗಮನ ವಿಶ್ವಕಪ್ ಸರಣಿ ಮತ್ತು ಈ ಪಂದ್ಯದ ಮೇಲೇ ಕೇಂದ್ರೀಕೃತವಾಗಿತ್ತು. ಭವಿಷ್ಯದ ಬಗ್ಗೆ ಯಾವುದೇ ಯೋಚನೆ ಮತ್ತು ಯೋಜನೆ ಮಾಡಿಲ್ಲ’ ಎಂದು ಹೇಳಿದ್ದಾರೆ.
ರೋಹಿತ್ ಒಬ್ಬ ಅಸಾಧಾರಣ ಕ್ಯಾಪ್ಟನ್ ಆಗಿದ್ದಾರೆ. ರೋಹಿತ್ ನಿಜವಾಗಿಯೂ ಈ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಅವರು ಡ್ರೆಸ್ಸಿಂಗ್ ರೂಮ್ನಲ್ಲಿ ತಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಿದ್ದಾರೆ. ನಮ್ಮ ಯಾವುದೇ ಸಂಭಾಷಣೆ, ಸಭೆಗೆ ಅವರು ಯಾವಾಗಲೂ ಲಭ್ಯವಿರುತ್ತಿದ್ದರು. ಸಾಕಷ್ಟು ಯೋಜನೆಗಳು, ಸಾಕಷ್ಟು ಕಾರ್ಯತಂತ್ರಗಳನ್ನು ರೂಪಿಸಿದ್ದೆವು. ಅವರು ಈ ಸರಣಿಗಾಗಿ ತಮ್ಮ ವೈಯಕ್ತಿಕ ಸಮಯ, ಶಕ್ತಿಯನ್ನು ವ್ಯಯಿಸಿದ್ದಾರೆ’ ಎಂದು ದ್ರಾವಿಡ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ