ಭೋಪಾಲ : ಬಿಜೆಪಿಗೆ ಮತ ಹಾಕಿದ್ದಕ್ಕೆ ತಮ್ಮ ಕುಟುಂಬಸ್ಥರಿಂದ ಥಳಿಸಲ್ಪಟ್ಟ ಮುಸ್ಲಿಂ ಮಹಿಳೆಯೊಬ್ಬರು ಶನಿವಾರ (ಡಿಸೆಂಬರ್ ೯) ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ ಸಮೀನಾ ಬಿ ಅವರು ತಮ್ಮ ಇಬ್ಬರು ಮಕ್ಕಳನ್ನು (ಒಬ್ಬ ಮಗ ಮತ್ತು ಮಗಳು) ಅವರನ್ನು ಮುಖ್ಯಮಂತ್ರಿ ಚೌಹಾಣ ಅವರ ಮನೆಗೆ ಕರೆತಂದರು ಮತ್ತು ತಮ್ಮ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ಆಕೆಯ ಕುಟುಂಬದವರು ಥಳಿಸಿದ್ದಾರೆ ಎಂಬ ವರದಿಗಳ ಬಗ್ಗೆ ಕೇಳಿದ ಚೌಹಾಣ ಮಹಿಳೆಯನ್ನು ಭೇಟಿಯಾಗಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ, ಬಿಜೆಪಿಯು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆದ್ದಿದೆ.
ಮುಖ್ಯಮಂತ್ರಿಗಳು ಸಮೀನಾ ಬಿ ಅವರಿಗೆ ಸುರಕ್ಷತೆ ಮತ್ತು ಭದ್ರತೆಯ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. ತಮ್ಮ ಮಕ್ಕಳ ಬಗ್ಗೆ ಮುಖ್ಯಮಂತ್ರಿಗಳು ತೋರಿದ ಕಾಳಜಿಯಿಂದ ಮತ್ತೊಮ್ಮೆ ಬಿಜೆಪಿಗೆ ಮತ ಹಾಕುವುದಾಗಿ ಸಮೀನಾ ಬಿ ಮುಖ್ಯಮಂತ್ರಿಗೆ ತಿಳಿಸಿದರು.
“ನಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ತಿಳಿದ ನನ್ನ ಸೋದರ ಮಾವ ಜಾವೇದ್ ಖಾನ್ ನನ್ನ ಮೇಲೆ ಹಲ್ಲೆ ನಡೆಸಿದರು. ಶಿವರಾಜ್ ಸಿಂಗ್ ಚೌಹಾಣ್ ಅವರ ಪಕ್ಷಕ್ಕೆ ನಾನು ಏಕೆ ಮತ ಹಾಕಿದ್ದೇನೆ ಎಂದು ಅವರು ನನ್ನನ್ನು ಪ್ರಶ್ನಿಸಿದರು” ಎಂದು ಸಮೀನಾ ಬಿ ಹೇಳಿದ್ದಾರೆ.
ಮುಖ್ಯಮಂತ್ರಿಯೊಂದಿಗಿನ ಸಭೆ ಉತ್ತಮವಾಗಿ ನಡೆದಿದೆ ಎಂದು ಅವರು ಹೇಳಿದ ಅವರು”ಭಯ್ಯಾ ( ಚೌಹಾಣ) ಅವರು ನಾನು ಮತ್ತು ನನ್ನ ಮಕ್ಕಳು ಸುರಕ್ಷಿತವಾಗಿರುವುದಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನಾನು ನನ್ನ ಮತದಾನದ ಹಕ್ಕನ್ನು ನಾನು ಬಯಸಿದ ರೀತಿಯಲ್ಲಿ ಚಲಾಯಿಸಿದ್ದೇನೆ. ಸಂವಿಧಾನವು ನಮ್ಮ ಆಯ್ಕೆಯಂತೆ ಯಾರಿಗಾದರೂ ಮತ ಚಲಾಯಿಸುವ ಹಕ್ಕನ್ನು ನೀಡುತ್ತದೆ” ಎಂದು ಸಮೀನಾ ಬಿ ಹೇಳಿದರು.ಶಿವರಾಜ ಸಿಂಗ್ ಚೌಹಾಣ ಯಾವತ್ತೂ ಯಾವುದೇ ತಪ್ಪು ಮಾಡಿಲ್ಲ, ಅದಕ್ಕಾಗಿಯೇ ತಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಅವರು ಹೇಳಿದರು.
ಸಮೀನಾ ನೀಡಿರುವ ದೂರಿನ ಪ್ರಕಾರ, ಡಿಸೆಂಬರ್ 4 ರಂದು ಮಧ್ಯಪ್ರದೇಶದಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸುತ್ತಿದ್ದಾಗ ಆಕೆಯ ಸೋದರ ಮಾವ ಜಾವೇದ್ ಖಾನ್ ಅವರನ್ನು ಥಳಿಸಿದ್ದರು. ಆಕೆಯ ಸಂಭ್ರಮಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಜಾವೇದ್ ಖಾನ್ ಆಕೆಯನ್ನು ನಿಂದಿಸಲು ಆರಂಭಿಸಿದ. ಸಮೀನಾ ಜಾವೇದ್ ಖಾನ್ ಬಳಸಿದ ಭಾಷೆಯನ್ನು ಪ್ರಶ್ನಿಸಿದಾಗ ಆತ ದೊಣ್ಣೆಯಿಂದ ಥಳಿಸಲು ಪ್ರಾರಂಭಿಸಿದ್ದಾನೆ, ಇದರಿಂದಾಗಿ ಅವಳ ಕೈಗಳು ಮತ್ತು ಅವಳ ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ.
ಶಿವರಾಜ ಸಿಂಗ್ ಚೌಹಾಣ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. “ಲಾಡ್ಲಿ ಬೆಹೆನಾ” ದಂತಹ ಯೋಜನೆಗಳ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಅವರು ತಮ್ಮ ಪಕ್ಷವನ್ನು ಐತಿಹಾಸಿಕ ವಿಜಯದತ್ತ ಮುನ್ನಡೆಸಿದರು. ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. 230 ಸ್ಥಾನಗಳಲ್ಲಿ 163 ಗೆಲುವು ಸಾಧಿಸಿದೆ.
ಮಧ್ಯಪ್ರದೇಶದ ಎಲ್ಲಾ 29 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ತಮ್ಮ ಮುಂದಿನ ಗುರಿಯಾಗಿದೆ ಎಂದು ಶಿವರಾಜ ಸಿಂಗ್ ಚೌಹಾಣ ಸುದ್ದಿಗಾರರಿಗೆ ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ