ಚೆನ್ನೈ: ದಕ್ಷಿಣ ಶ್ರೀಲಂಕಾ ಕರಾವಳಿಯಲ್ಲಿ ಹಿಂದೂ ಮಹಾಸಾಗರ ಮತ್ತು ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದಾಗಿ ತಿರುನಲ್ವೇಲಿ, ತೂತುಕುಡಿ ಮತ್ತು ತೆಂಕಶಿ ಸೇರಿದಂತೆ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಭಾನುವಾರ ಭಾರೀ ಮಳೆಯಾಗಿದೆ.
ಮಳೆಯ ಕಾರಣ ಡಿಸೆಂಬರ್ 18ರ ಸೋಮವಾರ ಕನ್ಯಾಕುಮಾರಿ, ತೂತುಕುಡಿ, ತಿರುನಲ್ವೇಲಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಈ ಜಿಲ್ಲೆಗಳ ಹಲವೆಡೆ ಜಲಾವೃತವಾಗಿದೆ. ತೂತುಕುಡಿಯಲ್ಲಿ ಭಾರೀ ಮಳೆ ಮುಂದುವರಿದ ಕಾರಣ ಕೋವಿಲ್ಪಟ್ಟಿಯಲ್ಲಿ ರೈಲ್ವೇ ಸಬ್ವೇ ಜಲಾವೃತವಾಗಿದೆ. ಅದೇ ರೀತಿ ಭಾರೀ ಮಳೆಗೆ ನಾಗರಕೋಯಿಲ್ನಲ್ಲಿ ಹಲವು ಬೀದಿಗಳು ಜಲಾವೃತವಾಗಿವೆ.
ತಿರುನಲ್ವೇಲಿ ಮತ್ತು ತೂತುಕುಡಿ ಜಿಲ್ಲಾಧಿಕಾರಿಗಳು ತಾಮಿರಭರಣಿ ನದಿಯ ಒಳಹರಿವಿನ ಹೆಚ್ಚಳದಿಂದ ನೀರಿನ ಹೊರಹರಿವು ಹೆಚ್ಚಾಗಿರುವುದರಿಂದ ಜನರು ನದಿಯಿಂದ ದೂರವಿರುವಂತೆ ಸೂಚಿಸಿದ್ದಾರೆ. ಇತರ ಜಲಾಶಯಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) ನಾಲ್ಕು ತಂಡಗಳನ್ನು ರಕ್ಷಣಾ ಸಾಧನಗಳೊಂದಿಗೆ ತೂತುಕುಡಿ, ತಿರುನಲ್ವೇಲಿ ಮತ್ತು ಕನ್ಯಾಕುಮಾರಿಗೆ ನಿಯೋಜಿಸಲಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ಮತ್ತು ಸೋಮವಾರದಂದು ತಮಿಳುನಾಡು ಮತ್ತು ಕೇರಳದ ದಕ್ಷಿಣ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ