ಜೈಪುರ: ತೀವ್ರ ವಾಗ್ವಾದದ ನಂತರ ವ್ಯಕ್ತಿಯೊಬ್ಬ ಕಾರು ಹಾಯಿಸಿದ ನಂತರ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಜೈಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆ ಮಂಗಳವಾರ ಮುಂಜಾನೆ ಜೈಪುರದ ಜವಾಹರ್ ಸರ್ಕಲ್ ಪ್ರದೇಶದ ಹೋಟೆಲ್ನ ಹೊರಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೊಂದಲದ ದೃಶ್ಯಗಳು ಆರೋಪಿ ಮಂಗೇಶ ಅರೋರಾ ಎಂಬಾತನ ಕಾರು ಉಮಾ ಮತ್ತು ರಾಜಕುಮಾರ ಎಂಬವರ ಮೇಲೆ ಓಡುತ್ತಿರುವುದನ್ನು ತೋರಿಸುತ್ತವೆ. ವೀಡಿಯೋದಲ್ಲಿ ಪುರುಷರ ಗುಂಪು ಕಾರಿನ ಮುಂದೆ ನಿಂತಿದ್ದು, ಅವರಲ್ಲಿ ಒಬ್ಬರು ಕಾರನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮಂಗೇಶ ತನ್ನ ಕಾರನ್ನು ಉಮಾ ಮತ್ತು ಮತ್ತೊಬ್ಬರ ಮೇಲೆ ಓಡಿಸಿದ್ದಾನೆ. ಉಮಾ ಸ್ಥಳದಲ್ಲೇ ಮೃತಪಟ್ಟರೆ, ರಾಜಕುಮಾರ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.
ಮಧ್ಯಪ್ರದೇಶದ ನಿವಾಸಿಯಾಗಿರುವ ಉಮಾ ಸ್ನೇಹಿತ ರಾಜಕುಮಾರ ಜೊತೆ ಜೈಪುರದಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆ 5:30 ಮತ್ತು 6 ಗಂಟೆಗೆ ಜೈಪುರದ ಜವಾಹರ್ ಸರ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಗಿರ್ಧರ್ ಮಾರ್ಗ್ನಲ್ಲಿರುವ ಹೋಟೆಲ್ ಹೊರಗೆ ಈ ಘಟನೆ ನಡೆದಿದೆ. ಹೊಟೇಲ್ ಹೊರಭಾಗದಲ್ಲಿ ಕಾರನ್ನು ಇಬ್ಬರ ಮೇಲೆ ಓಡಿಸಲು ಯತ್ನಿಸಲಾಗಿದೆ. ಇದರಲ್ಲಿ ಮಹಿಳೆ ಪ್ರಾಣ ಕಳೆದುಕೊಂಡಿದ್ದು, ಯುವಕನೊಬ್ಬ ಗಾಯಗೊಂಡಿದ್ದಾನೆ ಎಂದು ಎಸ್ಎಚ್ಒ ದಲ್ಬೀರ್ ಸಿಂಗ್ ತಿಳಿಸಿದ್ದಾರೆ.
“ಆರೋಪಿ ಮಂಗೇಶ ಅಲ್ಲಿ ತನ್ನ ಸ್ನೇಹಿತೆಯ ಜೊತೆ ಪಾನೀಯ ಸೇವಿಸುತ್ತಿದ್ದ. ಸ್ವಲ್ಪ ಸಮಯದ ನಂತರ ಅವರಿಬ್ಬರು ಉಮಾ ಅವರ ಬಗ್ಗೆ ಕಾಮೆಂಟ್ಗಳನ್ನು ಮಾಡಲು ಪ್ರಾರಂಭಿಸಿದರು. ರಾಜಕುಮಾರ ಕಾಮೆಂಟ್ಗಳಿಗೆ ಆಕ್ಷೇಪಿಸಿದ್ದಾನೆ. ಅಷ್ಟರಲ್ಲಿ ಮಂಗೇಶ್ ಮತ್ತು ಆತನ ಗೆಳತಿ ಹೋಟೆಲ್ ಮುಂದೆ ಅವರ ಜೊತೆ ಗಲಾಟೆ ಆರಂಭಿಸಿದ್ದಾರೆ. ಜಗಳ ಉಲ್ಬಣಗೊಳ್ಳುತ್ತಿದ್ದಂತೆ, ಮಂಗೇಶ ಹೊರಟುಹೋಗಿದ್ದಾನೆ. ಆದರೆ ಶೀಘ್ರದಲ್ಲೇ ತನ್ನ ಕಾರಿನಲ್ಲಿ ಪುನಃ ಬಂದು ರಾಜಕುಮಾರ ಮತ್ತು ಉಮಾ ಮೇಲೆ ಕಾರು ಓಡಿಸಿದ್ದಾನೆ ಎಂದು ಸಿಂಗ್ ಹೇಳಿದರು.
ಪರಾರಿಯಾಗಿರುವ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆಯ ಭಾಗವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಮತ್ತು ಕೊಲೆ ಯತ್ನದ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ