ಪಣಜಿ: ಕೊಲೆ ಆರೋಪಿ ಸ್ಟಾರ್ಟ್ಅಪ್ನ ಸಿಇಒ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಕೊಠಡಿಯಲ್ಲಿ ಕೆಮ್ಮಿನ ಸಿರಪ್ಪಿನ ಖಾಲಿ ಬಾಟಲಿಗಳನ್ನು ಗೋವಾ ಪೊಲೀಸರು ಪತ್ತೆ ಮಾಡಿದ್ದಾರೆ, ಮಹಿಳೆ ಆತನಿಗೆ ಹೆಚ್ಚಿನ ಪ್ರಮಾಣದ ಔಷಧಿ ನೀಡಿರಬಹುದು ಮತ್ತು ಅದು ದೊರೆತಿರುವುದು ಇದು ಪೂರ್ವ ಯೋಜಿತ ಕೊಲೆ ಎಂದು ಸೂಚಿಸುತ್ತದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಅಧಿಕಾರಿಗಳು ಹೇಳುವ ಪ್ರಕಾರ ಮಗುವನ್ನು ಬಟ್ಟೆ ಅಥವಾ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಆರೋಪಿ ಮಹಿಳೆ ಸುಚನಾ ಸೇಠ್, ಗೋವಾದ ಕ್ಯಾಂಡೋಲಿಮ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ತನ್ನ ಮಗನನ್ನು ಕೊಂದು ಶವವನ್ನು ಬ್ಯಾಗ್ನಲ್ಲಿ ತುಂಬಿ ಕಾರಿನಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗುವಾಗ ಚಿತ್ರದುರಗದ ಬಳಿ ಸಿಕ್ಕಿಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ರಾತ್ರಿ ಕರ್ನಾಟಕದ ಚಿತ್ರದುರ್ಗದಿಂದ ಆಕೆಯನ್ನು ಬಂಧಿಸಿ ಮಂಗಳವಾರ ಗೋವಾಕ್ಕೆ ಕರೆತರಲಾಗಿತ್ತು.
ಮಹಿಳೆ ಉಳಿದುಕೊಂಡಿದ್ದ ಸರ್ವಿಸ್ ಅಪಾರ್ಟ್ಮೆಂಟ್ ಕೊಠಡಿಯ ತಪಾಸಣೆಯ ವೇಳೆ ಕೆಮ್ಮಿನ ಸಿರಪ್ನ ಎರಡು ಖಾಲಿ ಬಾಟಲಿಗಳು (ಒಂದು ದೊಡ್ಡದು ಮತ್ತು ಇನ್ನೊಂದು ಚಿಕ್ಕವು) ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
“ಮೃತದೇಹದ ಮರಣೋತ್ತರ ಪರೀಕ್ಷೆಯು ಮಗುವನ್ನು ಉಸಿರುಗಟ್ಟಿಸಿ ಸಾಯಿಸಿರುವ ಸಾಧ್ಯತೆಯನ್ನು ಸೂಚಿಸಿದೆ ಮತ್ತು ಯಾವುದೇ ಹೋರಾಟದ ಲಕ್ಷಣಗಳು ಕಂಡುಬಂದಿಲ್ಲ. “ಮಹಿಳೆ ಮಗುವನ್ನು ಸಾಯಿಸುವ ಮೊದಲು ಕೆಮ್ಮು ಸಿರಪ್ ಅನ್ನು ಹೆಚ್ಚಿನ ಡೋಸ್ ನೀಡಿರುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.
ಸರ್ವಿಸ್ ಅಪಾರ್ಟ್ಮೆಂಟ್ ಸಿಬ್ಬಂದಿಯೊಂದಿಗಿನ ವಿಚಾರಣೆಯಲ್ಲಿ ಮಹಿಳೆ ತನಗೆ ಕೆಮ್ಮು ಇದೆ ಎಂದು ಹೇಳಿಕೊಂಡು ಕೆಮ್ಮಿನ ಸಿರಪ್ನ ಸಣ್ಣ ಬಾಟಲಿಯನ್ನು ಖರೀದಿಸಲು ಕೇಳಿದ್ದಳು ಎಂದು ಅವರು ಹೇಳಿದರು, ದೊಡ್ಡ ಬಾಟಲಿಯನ್ನು ಅವಳು ಕೊಂಡೊಯ್ದಿರಬಹುದು ಎಂದು ಅವರು ಹೇಳಿದ್ದಾರೆ.
ಇದು ಪೂರ್ವ ಯೋಜಿತ ಕೊಲೆಯಂತೆ ತೋರುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ವಿಚಾರಣೆಯ ಸಮಯದಲ್ಲಿ ತಾನು ಕೊಲೆ ಮಾಡಿರುವುದನ್ನು ನಿರಾಕರಿಸಿದ್ದಾಳೆ ಮತ್ತು ಮಗು ನಿದ್ರೆಯಿಂದ ಏಳುವಾಗ ಅದಾಗಲೇ ಸತ್ತಿತ್ತು ಎಂದು ಹೇಳಿದ್ದಾಳೆ.
“ನಾವು ಅವಳ ಸಿದ್ಧಾಂತವನ್ನು ಒಪ್ಪುವುದಿಲ್ಲ. ಹೆಚ್ಚಿನ ತನಿಖೆಯು ಮಗುವನ್ನು ಕೊಲ್ಲುವ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸುತ್ತದೆ. ಸದ್ಯಕ್ಕೆ, ಅವಳು ಮತ್ತು ಅವಳ ಪತಿ ದೂರವಾಗಿದ್ದಾರೆ, ಅದಕ್ಕಾಗಿಯೇ ಅವಳು ಇದನ್ನು ಮಾಡಿರಬಹುದು ಎಂದು ನಮಗೆ ತಿಳಿದಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಚನಾ ಸೇಠ್ ಜನವರಿ 6 ರಂದು ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ಚೆಕ್ ಇನ್ ಆಗಿದ್ದಾಳೆ ಮತ್ತು ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ತೆರಳುವ ಮೊದಲು ಜನವರಿ 8 ರವರೆಗೆ ಅಲ್ಲಿಯೇ ಇದ್ದಳು.ಆಕೆಯ ಬಂಧನದ ನಂತರ, ಮಂಗಳವಾರ ಗೋವಾದ ಮಾಪುಸಾ ಪಟ್ಟಣದ ನ್ಯಾಯಾಲಯವು ಆಕೆಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಜಕಾರ್ತ (ಇಂಡೋನೇಷಿಯಾ)ದಲ್ಲಿರುವ ಮಗುವಿನ ತಂದೆ ವೆಂಕಟ ರಾಮನ್ ಮಂಗಳವಾರ ರಾತ್ರಿ ಚಿತ್ರದುರ್ಗದ ಹಿರಿಯೂರು ತಲುಪಿ ಮರಣೋತ್ತರ ಪರೀಕ್ಷೆಯ ನಂತರ ಮಗನ ಶವವನ್ನು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ.
“ಆತನನ್ನು ಕತ್ತು ಹಿಸುಕಿ ಸಾಯಿಸಲಾಗಿದೆ ಅಥವಾ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಬಟ್ಟೆ ಅಥವಾ ದಿಂಬನ್ನು ಬಳಸಲಾಗಿದೆ. ಕತ್ತು ಹಿಸುಕಿದ್ದರಿಂದ ಮಗು ಸಾವನ್ನಪ್ಪಿದೆ. ಮಗುವನ್ನು ಕೈಯಿಂದ ಕತ್ತು ಹಿಸುಕಿದಂತೆ ಕಾಣುತ್ತಿಲ್ಲ. ಇದು ದಿಂಬು ಅಥವಾ ಇತರ ವಸ್ತುವನ್ನು ಬಳಸಿದಂತೆ ಕಾಣುತ್ತದೆ ಎಂದು ಹಿರಿಯೂರು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕುಮಾರ ನಾಯ್ಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸುಚನಾ ಸೇಥ್ ‘ದಿ ಮೈಂಡ್ಫುಲ್ AI ಲ್ಯಾಬ್’ ನ CEO ಆಗಿದ್ದಾಳೆ ಮತ್ತು ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಅವಳು ಕೃತಕ ಬುದ್ಧಿಮತ್ತೆ (AI) ನೀತಿಶಾಸ್ತ್ರ ತಜ್ಞೆ ಮತ್ತು ಡೇಟಾ ವಿಜ್ಞಾನಿಯಾಗಿದ್ದಾಳೆ, ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ ಮತ್ತು ಸ್ಟಾರ್ಟ್ಅಪ್ಗಳು ಮತ್ತು ಉದ್ಯಮಗಳಲ್ಲಿ ಸಂಶೋಧನಾ ಪ್ರಯೋಗಾಲಯಗಳು ಹಾಗೂ ಯಂತ್ರ ಕಲಿಕೆಯ ಪರಿಹಾರಗಳನ್ನು ಸ್ಕೇಲಿಂಗ್ ಮಾಡುವಲ್ಲಿ 12 ವರ್ಷಗಳ ಅನುಭವವನ್ನು ಹೊಂದಿದ್ದಾಳೆ.
ನಿಮ್ಮ ಕಾಮೆಂಟ್ ಬರೆಯಿರಿ