ಪಂಜಾಬ್ ರಾಜ್ಯಪಾಲರ ಹುದ್ದೆಗೆ ಬನ್ವಾರಿಲಾಲ ಪುರೋಹಿತ್ ರಾಜೀನಾಮೆ

ನವದೆಹಲಿ: ಪಂಜಾಬ್ ಗವರ್ನರ್ ಬನ್ವಾರಿಲಾಲ ಪುರೋಹಿತ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆಗೆ “ವೈಯಕ್ತಿಕ ಕಾರಣಗಳು ಮತ್ತು ಇತರ ಕೆಲವು ಬದ್ಧತೆಗಳನ್ನು” ಉಲ್ಲೇಖಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಪಂಜಾಬ್ ಹಾಗೂ ಚಂಡೀಗಢದ ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.”ದಯವಿಟ್ಟು ಅದನ್ನೇ ಸ್ವೀಕರಿಸಿ ಎಂದು ರಾಷ್ಡ್ರಪತಿ ಮುರ್ಮು ಅವರಿಗೆ ಬರೆದ ಪತ್ರ ಹೇಳಿದೆ.
ಬಾಕಿ ಇರುವ ಬಿಲ್‌ಗಳನ್ನು ಅನುಮೋದಿಸುವಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತು ಅವರ ನಡುವಿನ ಬಿಕ್ಕಟ್ಟಿನ ಮಧ್ಯೆ ಪುರೋಹಿತ್ ರಾಜೀನಾಮೆ ನೀಡಿದ್ದಾರೆ.

ನವೆಂಬರ್ 10, 2023 ರಂದು, ಪಂಜಾಬ್ ವಿಧಾನಸಭೆ ಅಂಗೀಕರಿಸಿದ ಐದು ಮಸೂದೆಗಳಿಗೆ ಸಮ್ಮತಿ ನೀಡುವಲ್ಲಿ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಪುರೋಹಿತ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ವಿಚಾರಣೆಯ ಸಂದರ್ಭದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ ಮಿಶ್ರಾ ಅವರನ್ನೊಳಗೊಂಡ ಪೀಠವು ರಾಜ್ಯಪಾಲರ ವಿರುದ್ಧ ಪಂಜಾಬ್ ಸರ್ಕಾರದ ಮನವಿಯನ್ನು ಆಲಿಸಿತ್ತು.”ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ” ಎಂದು ಪೀಠವು ಹೇಳಿತು, ರಾಜ್ಯ ಸರ್ಕಾರ ಮತ್ತು ಪುರೋಹಿತ್ ನಡುವಿನ ಬಿಕ್ಕಟ್ಟಿನ ಬಗ್ಗೆ ಅತೃಪ್ತರಾಗಿರುವುದಾಗಿ ಕೋರ್ಟ್‌ ತಿಳಿಸಿತು.

ಪ್ರಮುಖ ಸುದ್ದಿ :-   ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ್ರೆ ಅಯೋಧ್ಯೆ ರಾಮಮಂದಿರ ಶುದ್ಧೀಕರಿಸ್ತೇವೆ : ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ

ನಂತರ, ನವೆಂಬರ್ 23, 2023 ರಂದು, ಸುಪ್ರೀಂ ಕೋರ್ಟ್ ಮತ್ತೊಮ್ಮೆ ರಾಜ್ಯದ ನಾಮಸೂಚಕ ಮುಖ್ಯಸ್ಥರಾಗಿರುವುದರಿಂದ ರಾಜ್ಯಪಾಲರು “ಮಸೂದೆ ಅಂಗೀಕರಿಸುವುದನ್ನು ಅನಿರ್ದಿಷ್ಟವಾಗಿ ಬಾಕಿ ಇರಿಸಲು ಸಾಧ್ಯವಿಲ್ಲ” ಎಂದು ಹೇಳಿತು. ಒಂದು ರಾಜ್ಯದ ರಾಜ್ಯಪಾಲರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಶಾಸಕಾಂಗ ಮಸೂದೆಗಳ ಜಾರಿಯನ್ನು ತಡೆಯಲು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.
ಏತನ್ಮಧ್ಯೆ, ಬನ್ವಾರಿಲಾಲ ಪುರೋಹಿತ್ ಶುಕ್ರವಾರ ಚಂಡೀಗಢದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement